ಗಾಂಧಿ ಕುಟುಂಬದವರ ವಿರುದ್ಧ ಮಾತನಾಡಿದ್ದಕ್ಕೆ ಮಗಳನ್ನು ಟಾರ್ಗೆಟ್ ಮಾಡಲಾಗಿದೆ: ಸ್ಮೃತಿ ಇರಾನಿ
ನಾನು ಗಾಂಧಿ ಕುಟುಂಬದ ವಿರುದ್ಧ ಮಾತನಾಡುತ್ತೇನೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ನನ್ನ ಮಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗೋಷ್ಠಿ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ತಮ್ಮ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾಳೆ ಎನ್ನುವ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದರು.
18 ವರ್ಷದ ಯುವತಿಯೊಬ್ಬಳ ಚಾರಿತ್ಯ್ರ ಹರಣಕ್ಕೆ ಇಬ್ಬರು ಕಾಂಗ್ರೆಸ್ ಮುಖಂಡರೇ ಕಾರಣ ಎಂದಿದ್ದಾರೆ. ನಾನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದೇ ತಪ್ಪಾಗಿದೆ ಅದಕ್ಕೆ ನನ್ನ ಮಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದರು.
"ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮಾಡಿದ 5,000 ಕೋಟಿ ರೂಪಾಯಿ ಲೂಟಿಯ ಬಗ್ಗೆ ನಾನು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು ಕಾಂಗ್ರೆಸ್ನವರಿಗೆ ಸಹಿಸಲು ಆಗಿಲ್ಲ ಆದ್ದರಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು. ತಮ್ಮ ಮಗಳು ರಾಜಕಾರಣಿಯಲ್ಲ, ವಿದ್ಯಾರ್ಥಿನಿಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಮಗಳು ಬಾರ್ ನಡೆಸುತ್ತಿಲ್ಲ, ಓದುತ್ತಿದ್ದಾಳೆ
ಕಾಂಗ್ರೆಸ್ ಆರೋಪಗಳಿಗೆ ಸ್ಪಷ್ಟನೆ ನೀಡಿದ ಸಚಿವೆ ಸ್ಮೃತಿ ಇರಾನಿ, ನನ್ನ ಮಗಳು ಬಾರ್ ನಡೆಸುತ್ತಿಲ್ಲ, ಕಾಲೇಜಿನಲ್ಲಿ ಓದುತ್ತಿದ್ದಾಳೆ. ದಯವಿಟ್ಟು ಪೇಪರ್ ಗಳನ್ನು ಪರಿಶೀಲಿಸಿ. ದಾಖಲೆಗಳಲ್ಲಿ ನನ್ನ ಮಗಳ ಹೆಸರು ಎಲ್ಲಿದೆ? ಕಾಂಗ್ರೆಸ್ನವರು ಮಾಹಿತಿ ಹಕ್ಕು (ಆರ್ಟಿಐ) ಆಧಾರದ ಮೇಲೆ ನನ್ನ ಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಕೂಡ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಸ್ಮೃತಿ ಇರಾನಿ ಮಗಳು ಯುಎಸ್ನಲ್ಲಿ ಓದುತ್ತಿದ್ದಾರೆ ಮತ್ತು ಬಾರ್ಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಲೀಗಲ್ ನೊಟೀಸ್
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ ಸ್ಮೃತಿ ಇರಾನಿ ತಮ್ಮ ತಂಡ ಲೀಗಲ್ ನೋಟಿಸ್ ಕಳುಹಿಸಲಿದೆ ಎಂದು ತಿಳಿಸಿದರು.
"ನಾನು ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಉತ್ತರವನ್ನು ಹುಡುಕುತ್ತೇನೆ. ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಅಮೇಥಿಗೆ ಕಳುಹಿಸಿ. ನಾವು ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಸೋಲಿಸುತ್ತೇವೆ (ಹಮ್ ಫಿರ್ ರಾಹುಲ್ ಗಾಂಧಿ ಕೋ ಧೂಲ್ ಚಟಾಂಗೆ) " ಎಂದು ಸವಾಲು ಹಾಕಿದ್ದಾರೆ.

ಸ್ಮೃತಿ ಇರಾನಿ ಮಗಳ ಬಗ್ಗೆ ಕಾಂಗ್ರೆಸ್ ಆರೋಪ
ಸ್ಮೃತಿ ಇರಾನಿ ಅವರ ಪುತ್ರಿ ಜೊಯಿಶ್ ಇರಾನಿ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಾರದ ಜೈರಾಂ ರಮೇಶ್ ಮತ್ತು ಪವನ್ ಖೇರಾ ಆರೋಪಿಸಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರು ಹಲವು ಟ್ವೀಟ್ಗಳನ್ನು ಮಾಡಿದ್ದು, ಜೊಯಿಶ್ ಇರಾನಿ ಬಾರ್ ಮತ್ತು ರೆಸ್ಟೋರೆಂಟ್ ಹೊಂದಿರುವ ಬಗ್ಗೆ ಹಲವು ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.
ಜೊಯಿಶ್ ಇರಾನಿ ಒಡೆತನ ಬಾರ್ 'ನಕಲಿ ಪರವಾನಗಿ' ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನರೇಂದ್ರ ಮೋದಿ ಸರ್ಕಾರ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆಗ್ರಹಿಸಿದ್ದರು.

ರಾಜಕೀಯ ವಿರೋಧಿಗಳ ಕುತಂತ್ರ ಎಂದ ವಕೀಲರು
ಜೋಯಿಶ್ ಇರಾನಿ ಅವರ ವಕೀಲ ಕಿರಾತ್ ನಾಗ್ರಾ ಅವರ ಕಕ್ಷಿದಾರರ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಸ್ಮೃತಿ ಇರಾನಿ ಅವರ ರಾಜಕೀಯ ವಿರೋಧಿಗಳು ರಾಜಕೀಯ ನಾಯಕರ ಮಗಳು ಎಂಬ ಕಾರಣಕ್ಕಾಗಿ ಅವರ ಮಾನಹಾನಿ ಮಾಡುವ ಉದ್ದೇಶದಿಂದ ಅವರ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಹೇಳಿದರು.
ಜೊಯಿಶ್ ಪರ ವಕೀಲರು, ಆಕೆಗೆ ಯಾವುದೇ ಪ್ರಾಧಿಕಾರದಿಂದ ಯಾವುದೇ ಶೋಕಾಸ್ ನೋಟಿಸ್ ಬಂದಿಲ್ಲ ಎಂದು ಹೇಳಿದರು.












Click it and Unblock the Notifications