ವಿವೇಕ್ ದೋವಲ್ ಕ್ಷಮೆ ಕೇಳಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್
ನವದೆಹಲಿ, ಡಿಸೆಂಬರ್ 19: 2019ರಲ್ಲಿನ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ವಿವೇಕ್ ದೇವಲ್ ಅವರ ಬಳಿ ಕ್ಷಮೆ ಕೇಳಿದ್ದಾರೆ.
2019ರಲ್ಲಿ ಚುನಾವಣೆ ಸಂದರ್ಭ ಜೈರಾಮ್ ರಮೇಶ್ ಅವರು ವಿವೇಕ್ ದೋವಲ್ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ಕ್ಯಾರವಾನ್ ಮಾಸಿಕದಲ್ಲಿ ಆ ಆರೋಪ ಪ್ರಕಟವಾಗಿದ್ದು, ವಿವೇಕ್ ಅವರು ಜೈರಾಮ್ ರಮೇಶ್ ಹಾಗೂ ಮಾಸಿಕದ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಶನಿವಾರ ನ್ಯಾಯಾಲಯಕ್ಕೆ ಹಾಜರಾದ ಜೈರಾಮ್ ರಮೇಶ್, ನ್ಯಾಯಾಧೀಶ ಸಚಿನ್ ಗುಪ್ತಾ, ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ವಿವೇಕ್ ಅವರಿಗೆ ಕ್ಷಮೆ ಯಾಚಿಸಿದ್ದು, "ಚುನಾವಣಾ ಪ್ರಚಾರದ ಭರದಲ್ಲಿದ್ದ ನಾನು ಕೆಲವು ಆರೋಪಗಳನ್ನು ಮಾಡಿದ್ದೇನೆ. ಆರೋಪ ಮಾಡುವ ಮುನ್ನ ಪರಿಶೀಲಿಸಬೇಕಿತ್ತು" ಎಂದಿದ್ದಾರೆ.

"ನನ್ನ ಹೇಳಿಕೆಗಳಿಂದ ವಿವೇಕ್ ಅವರಿಗೆ, ಅವರ ಕುಟುಂಬದ ಭಾವನೆಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
ಜೈರಾಮ್ ಅವರ ಕ್ಷಮೆಯನ್ನು ಒಪ್ಪಿಕೊಂಡಿರುವ ವಿವೇಕ್ ದೋವಲ್, "ಜೈರಾಮ್ ಅವರ ಕ್ಷಮೆಯನ್ನು ಸ್ವೀಕರಿಸಿದ್ದೇವೆ. ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯುತ್ತೇವೆ. ಆದರೆ ಪತ್ರಿಕೆ ವಿರುದ್ಧ ಮೊಕದ್ದಮೆ ಮುಂದುವರೆಸುತ್ತೇವೆ" ಎಂದು ತಿಳಿಸಿದ್ದಾರೆ.
ಜೈರಾಮ್ ರಮೇಶ್ ಅವರ ಮೇಲಿದ್ದ ಪ್ರಕರಣ ಅಧೀಕೃತವಾಗಿ ಕೊನೆಯಾಗಿದ್ದು, ನಿಯತಕಾಲಿಕೆಯ ಮೇಲಿನ ಪ್ರಕರಣವನ್ನು ಬೇರೆ ನ್ಯಾಯಾಧೀಶರು ಮುಂದುವರೆಸುವುದಾಗಿ ತಿಳಿದುಬಂದಿದೆ.












Click it and Unblock the Notifications