2 ಹಕ್ಕಿ ಹೊಡೆದುರುಳಿಸಿದ ಪುರಾತನ ಕಾಂಗ್ರೆಸ್
ನವದೆಹಲಿ, ಡಿ. 23: ಪುರಾತನ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಹೇಳಿ ಕೊಡಬೇಕೇ!? ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ತನ್ನ ಸ್ಥಿತಿ ಬರ್ಬಾದ್ ಆಗಿದೆ ಎಂಬುದನ್ನು ಅರಿತ ಜಾಣ ಕಾಂಗ್ರೆಸ್, 2 ಹಕ್ಕಿಗಳನ್ನು ಹೊಡೆದುರುಳಿಸಿದೆ. ಒಂದು ಕಲ್ಲು, ಮೊದಲು ಅಣ್ಣಾ ಹಜಾರೆಗೆ ಬಿದ್ದಿದೆ. ತದನಂತರ, ಇದೀಗ ಅರವಿಂದ್ ಕೇಜ್ರಿವಾಲ್ ಅವರಿಗೆ!
ಅಲ್ಲಾ ಇದೇ ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲಗಳು ಹೊಟ್ಟೆಗೆ ತಣ್ಣಿರು ಬಟ್ಟೆ ಸುತ್ತಿಕೊಂಡು ಹೋರಾಟ ನಡೆಸಿದ್ದು ಜನ್ ಲೋಕಪಾಲ್ ಮಸೂದೆಗಾಗಿ. ಆದರೆ ಇಂದು ಕಾಂಗ್ರೆಸ್ ಏನು ಮಾಡಿದೆ ನೋಡಿ!? (ಜನರಹಿತ) ಲೋಕಪಾಲ್ ಮಸೂದೆ ಜಾರಿಗೆ ಸಂಸತ್ತಿನಲ್ಲಿ ಅಸ್ತು ಅನ್ನುವ ಮೂಲಕ ಅಣ್ಣಾಗೆ ಮಂಕುಬೂದಿ ಎರಚಿದೆ. ಅಣ್ಣಾಜಿಗೆ ಲೋಕಪಾಲ್ ಮಸೂದೆಯೇ ಜನ್ ಲೋಕಪಾಲ್ ಆಗಿ ಕಾಣಿಸಿದೆ.

ಇದರಿಂದ ಆನಂದತುಂದಲಿತರಾದ ಅಣ್ಣಾ, ಕಾಂಗ್ರೆಸ್ ಪಕ್ಷವು ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಮಣಿಯಿತು ಎಂದು ಬೀಗಿದ್ದಾರೆ. ಆದರೆ ವಾಸ್ತವದಲ್ಲಿ ಜನಮನದಲ್ಲಿ ಗೆದ್ದಿರುವುದು ಕಾಂಗ್ರೆಸ್! ಭ್ರಷ್ಟಾಚಾರವನ್ನು 'ಎಳ್ಳಷ್ಟೂ ಸಹಿಸಿಕೊಳ್ಳದ' ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ Lokpal Bill credit ಕಾಂಗ್ರೆಸ್ ಪಕ್ಷಕ್ಕೇ ಸಂದಾಯವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದುವರಿದ ಕಾಂಗ್ರೆಸ್, ಇದೀಗ ಅಣ್ಣಾರ ಭಾವಚಿತ್ರವನ್ನು ದೊಡ್ಡದಾದ flex/ posterಗಳಲ್ಲಿ ಹಾಕಿ, ಅಣ್ಣಾ ಆಶೀರ್ವಾದ ಕಾಂಗ್ರೆಸ್ ಪಕ್ಷಕ್ಕೆ ಪ್ರಾಪ್ತಿಯಾಗಿದೆ ಎಂದು ಬಿಂಬಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇಂತಹ ಪ್ರಚಾರ ಎಂತಹ ಪರಿಣಾಮ ಬೀರಬಲ್ಲದು ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.
ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಪಾಸಾಗುತ್ತಿದ್ದಂತೆ ಅಣ್ಣಾಜೀ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿ, ಕೃತಜ್ಞತೆ ಸಲ್ಲಿಸಿದ್ದರು. ಒಂದು thanksgiving letter ಅನ್ನೂ ಬರೆದಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಅದಕ್ಕೆ ಪ್ರತಿಯಾಗಿ posterಗಳಲ್ಲಿ ಅಣ್ಣಾರನ್ನು ಹಾಡಿಹೊಗಳಿದೆ.
ಗಮನಿಸಿ, ಆಮ್ ಆದ್ಮಿ ಪಕ್ಷದ ಅರವಿಂದ್ ಅವರು ಚುನಾವಣೆ ಸಂದರ್ಭದಲ್ಲಿ ಅಣ್ಣಾ ಹಜಾರೆ ಫೋಟೋ ಬಳಸಿದ್ದಕ್ಕೆ ಇದೇ ಅಣ್ಣಾಜೀ ಖುದ್ದಾಗಿ ನಿಂತು ಮೊದಲು ನನ್ನ ಫೋಟೋ ತೆಗೆದುಹಾಕು ಎಂದು ಘರ್ಜಿಸಿದ್ದರು. ಅಲ್ಲಿಗೆ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಅಣ್ಣಾ ಮತ್ತು ಅರವಿಂದ್ ಒಟ್ಟಿಗೇ ಏಕಶಕ್ತಿಯಾಗಿ ಉಳಿಯದಂತೆ ನೋಡಿಕೊಂಡು, ಆ ಶಕ್ತಿಯನ್ನು ಒಡೆದುಹಾಕಿದ್ದಕ್ಕೆ ಒಳಗೊಳಗೆ ಬೀಗಿದೆ.
ಇನ್ನು ಆಮ್ ಆದ್ಮಿ ಲೆಕ್ಕಾಚಾರ ಹೀಗಿದೆ:
ಡಿಸೆಂಬರ್ 8ರಂದು ಫಲಿತಾಂಶ ಹೊರಬಿದ್ದು, ಡಿಸೆಂಬರ್ 17ಕ್ಕೆ ಹಿಂದಿನ ವಿಧಾನಸಭೆಯ ಕಾಲಾವಧಿ ಮುಗಿದು 10 ದಿನಗಳಾದ ನಂತರ, ಸಾವಕಾಶವಾಗಿ ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ನೂತನ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ತನ್ಮೂಲಕ ಆಮ್ ಆದ್ಮಿಗಳ ಧ್ಯೇಯೋದ್ದೇಶಗಳಿಗೆ ಮರ್ಮಾಘಾತ ನೀಡಿದೆ ಎಂದರೆ ತಪ್ಪಾಗದು.
ಈ ಮಧ್ಯೆ, ರಾತ್ರಿ 8 ಗಂಟೆಯಾದರೂ ಶೇ. 70ರಷ್ಟು ಮತದಾನ ಮಾಡಿದ್ದ ಮತದಾರನಿಗೇ ಮಣ್ಣುಮುಕ್ಕಿಸಿ, ನಭೂತೋ ನಭವಿಷ್ಯತ್ ಎಂಬಂತೆ ಜನಾಭಿಪ್ರಾಯ ಸಂಗ್ರಹಿಸಿ ಕೊನೆಗೂ ಅಧಿಕಾರದ ಗದ್ದುಗೆಗೆ ಏರಿದ AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಧಿಕಾರ ಲಾಲಸೆಯಿಂದ ತಾವು ಅಂಖಡವಾಗಿ ವಿರೋಧಿಸುತ್ತಾ ಬಂದಿದ್ದ ಭ್ರಷ್ಟ ಪಕ್ಷದ ಜತೆಯೇ ಕೈಜೋಡಿಸಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕವೇ ಸರಿ.












Click it and Unblock the Notifications