ಬಜೆಟ್ ಮುಗೀತು, ಚುನಾವಣೆಯತ್ತ ಕಾಂಗ್ರೆಸ್ ಮುಖ
ನವದೆಹಲಿ, ಫೆ.17: ಬಜೆಟ್ ತಜ್ಞ ವಿತ್ತ ಸಚಿವ ಪಿ ಚಿದಂಬರಂ ಅವರು ಇಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡನೆ ಶಾಸ್ತ್ರ ಮುಗಿಸಿದ್ದಾರೆ. ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ಟಿಗೆ ಹೆಚ್ಚಿನ ಮಹತ್ವ ಇಲ್ಲವಾಗಿದೆ. ಈ ಮಧ್ಯೆ, ಯುಪಿಎ ಮೈತ್ರಿಕೂಟದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಇದೀಗ ಚುನಾವಣಾ-ಮುಖಿಯಾಗಿದೆ.
ಇಂದು ದೆಹಲಿ ತಲುಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರುಗಳು ಹೈಕಮಾಂಡ್ ಮಟ್ಟದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರು ಸಹ ಭಾಗವಹಿಸಿದ್ದರು.

ಒಂದೆರಡು ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಆಂತರಿಕ ಚುನಾವಣೆ ನಡೆಸಿ, ಮಾರ್ಚ್ ವೇಳೆಗೆ ಅದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮಿತಿ ನಿರ್ಧರಿಸಿದೆ. ಬೆಂಗಳೂರು ಉತ್ತರ ಮತ್ತು ಮಂಗಳೂರು ಕ್ಷೇತ್ರಗಳಿಗೆ ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ದೇಶಾದ್ಯಂತ ಒಟ್ಟು 15 ಕ್ಷೇತ್ರಗಳಿಗೆ ಆಂತರಿಕ ಚುನಾವಣೆ ನಡೆಸುವ ಮೂಲಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.
ಇಲ್ಲಿ, ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸೂಚಿತ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮೂಲಕ ಜಯಭೇರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಷದ ತೀರ್ಮಾನವಾಗಿದೆ. ಅಂದರೆ ಯುವ ಕಾಂಗ್ರೆಸ್, ಎನ್ ಎಸ್ ಯುಐ, ಮಹಿಳಾ ಕಾಂಗ್ರೆಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ವಿಭಾಗ, ಕಾನೂನು ಘಟಕ, ಕಿಸಾನ್ ಘಟಕದ ಕ್ಷೇತ್ರವ್ಯಾಪ್ತಿ ಇರುವ ಪದಾಧಿಕಾರಿಗಳು ಮತ ಚಲಾವಣೆ ಮಾಡಲಿದ್ದಾರೆ.
ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಮುಖ್ಯಸ್ಥ ವೈ ಎಲ್ ಆರ್ ರವಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎಲ್ಲ 28 ಕ್ಷೇತ್ರಗಳ ಬಗ್ಗೆಯೂ ಪರಿಶೀಲನೆ ನಡೆದಿದೆ. ಹಾಲಿ ಸಂಸದರ ಪೈಕಿ 9 ಮಂದಿಗೆ ಟಿಕೆಟ್ ನೀಡುವುದು ಖಚಿತವೆಂದು ತಿಳಿದುಬಂದಿದೆ.
ಜತೆಗೆ, 1. ಬೆಂಗಳೂರು ದಕ್ಷಿಣಕ್ಕೆ ನಂದನ್ ನಿಲೇಕಣಿ, 2. ಬಳ್ಳಾರಿ ಕ್ಷೇತ್ರಕ್ಕೆ ಎನ್ ವೈ ಹನುಮಂತಪ್ಪ, 3. ಬೆಳಗಾವಿ ಕ್ಷೇತ್ರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ನೀಡಲು ಕೇಂದ್ರ ಚುನಾವಣಾ ಸಮಿತಿ ಒಪ್ಪಿಗೆ ನೀಡಿದೆ.
ಇದರ ಹೊರತಾಗಿ 10 ಕ್ಷೇತ್ರಗಳಲ್ಲಿ ತಲಾ ಎರಡೆರಡು ಅಭ್ಯರ್ಥಿಗಳ ಹೆಸರುಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಬಹುತೇಕ ಮೊದಲ ಹೆಸರಿಗೆ ಅನುಮತಿ ನೀಡುವ ಸಾಧ್ಯತೆಗಳಿವೆ. ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ವಿಷಯದಲ್ಲಿ ಗೊಂದಲವಾಗಿದ್ದು, ಇದರ ಅಂತಿಮ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷರಿಗೇ ಬಿಡಲಾಗಿದೆ.












Click it and Unblock the Notifications