ಹಿಂಸಾಚಾರ ನಿಂತ ಬಳಿಕವೇ ಸಿಎಎ ಕುರಿತಾದ ಅರ್ಜಿಗಳ ವಿಚಾರಣೆ: ಸಿಜೆಐ
ನವದೆಹಲಿ, ಜನವರಿ 9: ರಾಷ್ಟ್ರವ್ಯಾಪಿ ನಡೆಯುತ್ತಿರುವ ಹಿಂಸಾಚಾರಗಳು ನಿಂತ ಬಳಿಕವೇ ಪೌರತ್ವ ತಿದ್ದುಪಡಿ ಕಾಯ್ದೆಯ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದರು.
ವಿವಾದಾತ್ಮಕ ಕಾಯ್ದೆಯನ್ನು ಸಂವಿಧಾನಬದ್ಧ ಎಂದು ಘೋಷಿಸುವಂತೆ ವಕೀಲ ವಿನೀತ್ ಧಂಡ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಸಿಜೆಐ, ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ ಈಗ ನಡೆಸುವುದಿಲ್ಲ ಎಂದರು.
ಕಾಯ್ದೆ ಕುರಿತಂತೆ ದೇಶದಾದ್ಯಂತ ತೀವ್ರಮಟ್ಟದ ಹಿಂಸಾಚಾರ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

'ಸಂಸತ್ನ ಕಾಯ್ದೆಯನ್ನು ಸಂವಿಧಾನಬದ್ಧವಾಗಿದೆ ಎಂದು ನಾವು ಹೇಗೆ ಘೋಷಿಸಲು ಸಾಧ್ಯವಾಗುತ್ತದೆ? ಸಂವಿಧಾನಾತ್ಮಕತೆ ಕುರಿತು ಯಾವಾಗಲೂ ಕಲ್ಪನೆಗಳಿರುತ್ತವೆ! ಒಂದು ಕಾಲದಲ್ಲಿ ನೀವು ಕಾನೂನು ವಿದ್ಯಾರ್ಥಿಯಾಗಿದ್ದಿರಿ. ನಿಮಗೆ ಅದು ಗೊತ್ತಿರಬೇಕು. ಮೊದಲ ಬಾರಿಗೆ ನಾನು ಇಂತಹ ಪ್ರಾರ್ಥನೆ ಕೇಳುತ್ತಿದ್ದೇನೆ. ಕಾನೂನಿನ ಮಾನ್ಯತೆಯನ್ನು ನ್ಯಾಯಾಲಯ ನಿರ್ಧರಿಸಬೇಕೇ ಹೊರತು ಕಾನೂನು ಸಂವಿಧಾನಾತ್ಮಕ ಎಂದು ಘೋಷಿಸುವುದಲ್ಲ' ಎಂದು ನ್ಯಾಯಪೀಠ ಹೇಳಿತು.
'ದೇಶವು ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಶಾಂತಿ ಕಾಪಾಡಲು ಪ್ರಯತ್ನಗಳು ನಡೆಬೇಕಿದೆ. ಈ ಅರ್ಜಿಗಳು ಉದ್ದೇಶಕ್ಕೆ ನೆರವು ನೀಡುವುದಿಲ್ಲ' ಎಂದು ಅಭಿಪ್ರಾಯಪಟ್ಟಿತು.
ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸುದ್ದಿಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಇತರೆ ಮಾರ್ಗಗಳಲ್ಲಿ ನಿರಂತರ ಜಾಹೀರಾತು ನೀಡಿ ಪ್ರಚಾರ ಕೊಡಬೇಕು ಮತ್ತು ಇದು ಭಾರತದ ಸಂವಿಧಾನದ ಆಶಯ ಹಾಗೂ ಯಾವುದೇ ಪ್ರಜೆಯ ವಿರುದ್ಧವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನಿರ್ದೇಶನ ನೀಡುವಂತೆ ಧಂಡ ಕೋರಿದ್ದರು.
ಸಿಎಎ ಹೆಸರಿನಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸುವ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವ ರಾಜಕೀಯ ಪಕ್ಷಗಳನ್ನು ಗುರುತಿಸಿ ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸುವಂತೆ ಕೂಡ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಎಲ್ಲ ರಾಜ್ಯ ಸರ್ಕಾರಗಳೂ ಸಿಎಎಯನ್ನು ತಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುವಂತೆ ನಿರ್ದೇಶಿಸಲು ಕೋರಲಾಗಿದೆ.












Click it and Unblock the Notifications