ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ
Recommended Video
ನವದೆಹಲಿ, ಡಿಸೆಂಬರ್ 16: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ರಾಜಧಾನಿ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದಿದೆ. ಭಾನುವಾರ ಸಂಜೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ನೂರಾರು ಪೊಲೀಸರು ನುಗ್ಗಿದ್ದು, ಭಾರಿ ಹಿಂಸಾಚಾರಕ್ಕೆ ಕಾರಣವಾಗಿದೆ.
ವಿಶ್ವವಿದ್ಯಾಲಯದ ಸುಮಾರು 50 ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸರು, ಸೋಮವಾರ ನಸುಕಿನಲ್ಲಿ ಅವರನ್ನು ಬಿಡುಗಡೆ ಮಾಡಿದ್ದಾರೆ. 35 ವಿದ್ಯಾರ್ಥಿಗಳನ್ನು ಕಲ್ಕಾಜಿ ಪೊಲೀಸ್ ಠಾಣೆಯಿಂದ ಹಾಗೂ 15 ಮಂದಿಯನ್ನು ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.
ಗಾಯಾಳು ವಿದ್ಯಾರ್ಥಿಗಳನ್ನು ತಡಮಾಡದೆ ಬಿಡುಗಡೆ ಮಾಡಬೇಕು, ಇಲ್ಲವೇ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗವು ಕಲ್ಕಾಜಿ ಪೊಲೀಸ್ ಠಾಣೆಗೆ ನೋಟಿಸ್ ನೀಡಿತ್ತು.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಸಮೀಪ ಭಾನುವಾರ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ನಾಲ್ಕು ಸಾರ್ವಜನಿಕ ಸಾರಿಗೆ ಬಸ್ಗಳು ಮತ್ತು ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಅವರ ವಿರುದ್ಧ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದು, ವಿದ್ಯಾರ್ಥಿಗಳು, ಪೊಲೀಸರು ಮತ್ತು ಇತರೆ ಪ್ರತಿಭಟನಾಕಾರರು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ವಿ.ವಿ. ಆವರಣದೊಳಗೆ ನುಗ್ಗಿದ ಪೊಲೀಸರು
ಹೊರಗಿನ ಪ್ರತಿಭಟನಾಕಾರರನ್ನು ಬೆನ್ನಟ್ಟಿ ಬರುವಾಗ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ವಿಶ್ವವಿದ್ಯಾಲಯದ ಒಳಗೆ ಗುಂಡು ಹಾರಿಸುವುದು, ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ವಿದ್ಯಾರ್ಥಿಗಳ ಗಾಯಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
|
ನಾವು ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ
ನಾವು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಪೊಲೀಸರು ಏಕಾಏಕಿ ದಾಳಿ ನಡೆಸಿದರು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲ. ಕೆಲವು ಸ್ಥಳೀಯ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸಿದ್ದಾರೆ. ಹಿಂಸಾಚಾರ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಕ್ಯಾಂಪಸ್ಗೆ ವಾಪಸ್ ಬಂದಿದ್ದರು ಎಂದು ಜಾಮಿಯಾ ಮಿಲಿಯಾ ವಿದ್ಯಾರ್ಥಿ ಸಂಘಟನೆ ತಿಳಿಸಿದೆ.

ಪೊಲೀಸರೊಂದಿಗೆ ಸ್ಥಳೀಯರೂ ಭಾಗಿ?
ಒಳನುಗ್ಗಲು ಬಂದ ಪೊಲೀಸರನ್ನು ತಡೆದ ವಿದ್ಯಾರ್ಥಿನಿಯರ ಮೇಲೆ ಅಮಾನವೀಯವಾಗಿ ಲಾಠಿಯಿಂದ ಹಲ್ಲೆ ನಡೆಸಿರುವ ವಿಡಿಯೋ ಹರಿದಾಡುತ್ತಿದೆ. ಅಲ್ಲದೆ, ಪೊಲೀಸರ ಜತೆ ಸಮವಸ್ತ್ರದಲ್ಲಿಲ್ಲದ ಯುವಕನೊಬ್ಬ ಲಾಠಿ ಪ್ರಹಾರ ನಡೆಸುತ್ತಿರುವುದು, ಅವರೇ ಬಸ್ಸಿಗೆ ಪೆಟ್ರೋಲ್ ಸುರಿಯುತ್ತಿರುವ ದೃಶ್ಯಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಹಿಂಸಾಚಾರದ ಹಿಂದೆ ಬೇರೆ ಉದ್ದೇಶವಿದೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಹಲವೆಡೆ ಪ್ರತಿಭಟನೆ
ದೆಹಲಿಯ ಸುಖದೇವ್ ವಿಹಾರ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಓಖ್ಲಾ ವಿಹಾರ್ ಮತ್ತು ಜಸೋಲಾ ವಿಹಾರ್ ಶಹೀನ್ ಬಾಗ್ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಇವು ಪುನಃ ಕಾರ್ಯಾರಂಭ ಮಾಡಲಾರಂಭಿಸಿವೆ.
ಉತ್ತರ ಪ್ರದೇಶದ ಅಲಿಗಡ ವಿಶ್ವವಿದ್ಯಾಲಯದಲ್ಲಿ ಕೂಡ ಪ್ರತಿಭಟನೆ, ಹಿಂಸಾಚಾರ ವರದಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಯ ತೀವ್ರತೆ ಕಡಿಮೆಯಾಗಿದೆ. ಪಶ್ವಿಮ ಬಂಗಾಳದಲ್ಲಿ ಅದರ ಕಾವು ತಗ್ಗಿಲ್ಲ.












Click it and Unblock the Notifications