ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?
ನವದೆಹಲಿ, ಜನವರಿ 8: ಬಾಂಗ್ಲಾದೇಶ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ವಿವಾದಾತ್ಮಕ ಮಸೂದೆಗೆ ಮಂಗಳವಾರ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ವಿರೋಧ ಪಕ್ಷಗಳ ಪ್ರತಿಭಟನೆಯ ಮಧ್ಯೆಯೂ ಮಸೂದೆಯು ಅಂಗೀಕಾರವಾಯಿತು.
ಗೃಹ ಸಚಿವ ರಾಜ್ ನಾಥ್ ಸಿಂಗ್ ಸಂಸತ್ ನಲ್ಲಿ ನಾಗರಿಕ ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಕೇವಲ ಅಸ್ಸಾಂ ಅಥವಾ ನಿರ್ದಿಷ್ಟ ದೇಶದ ವಲಸಿಗರಿಗಾಗಿ ಮಾತ್ರವಲ್ಲ ಎಂದರು. ಈ ಮಸೂದೆ ವಿಚಾರವಾಗಿ ಭಿನ್ನಾಭಿಪ್ರಾಯ ಉದ್ಭವಿಸಿ ಅಸೋಮ್ ಗಣ ಪರಿಷದ್ (ಎಜಿಪಿ) ಸೋಮವಾರದಂದು ಅಸ್ಸಾಮ್ ನಲ್ಲಿ ಆಡಳಿತಾರೂಢ ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದಿತ್ತು.
ನಾಗರಿಕ ತಿದ್ದುಪಡಿ ಕಾಯ್ದೆ ಅಸ್ಸಾಂವೊಂದಕ್ಕೆ ಅನ್ವಯಿಸುವಂಥದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಪಶ್ಚಿಮದ ಗಡಿ ಭಾಗದಿಂದ ಬಂದ ವಲಸಿಗರಿಗೂ ಇದು ಅನ್ವಯ ಆಗುತ್ತದೆ. ಅಕ್ರಮ ವಲಸಿಗರ ವಿಚಾರವು ಅಸ್ಸಾಂನಲ್ಲಿ ಬಹು ಕಾಲದಿಂದ ಚರ್ಚೆಯ ವಿಷಯ. ಅಸ್ಸಾಮ್ ನ ಹೊರೆಯು ದೇಶಕ್ಕೂ ಹೊರೆ ಎಂದು ರಾಜ್ ನಾಥ್ ಹೇಳಿದರು.

ಬಿಜೆಪಿ ಮಿತ್ರ ಪಕ್ಷಗಳಿಂದಲೂ ವಿರೋಧ
ಗೃಹ ಸಚಿವರ ಭಾಷಣದ ವೇಳೆಯಲ್ಲಿ ವಿರೋಧ ಪಕ್ಷದ ಸಂಸದರು ಜೋರು ಧ್ವನಿಯಲ್ಲಿ ಘೋಷಣೆ ಕೂಗಿದರು. ಇದಕ್ಕೆ ಈಶಾನ್ಯ ರಾಜ್ಯಗಳಲ್ಲಿನ ಬಿಜೆಪಿಯ ಮಿತ್ರ ಪಕ್ಷಗಳ ಸಂಸದರೂ ಧ್ವನಿಗೂಡಿಸಿದರು. ಕಾಂಗ್ರೆಸ್ ನ ಸಂಸದರು ಸಂಸತ್ ನಿಂದ ಹೊರನಡೆದರು. ಈ ಮಸೂದೆಯಿಂದ ಈಶಾನ್ಯ ಭಾರತ ಹೊತ್ತಿ ಉರಿಯುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಎಚ್ಚರಿಕೆ ನೀಡಿತು. ನಾಗರಿಕ ತಿದ್ದುಪಡಿ ಮಸೂದೆಯು ಅಸ್ಸಾಮ್ ಹಾಗೂ ಈಶಾನ್ಯ ಭಾರತವು ಹೊತ್ತಿ ಉರಿಯುವಂತೆ ಮಾಡುತ್ತದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ವಲಸಿಗರಿಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಈ ಮಸೂದೆಯನ್ನು ಜಾತ್ಯತೀತವಾಗಿ ಮಾಡಿ. ಏತಕ್ಕಾಗಿ ಕೇವಲ ಆರು ಧರ್ಮಗಳು? ಕೇವಲ ಮೂರು ದೇಶಗಳನ್ನು ಮಾತ್ರ ನಮೂದು ಮಾಡಬೇಡಿ ಎಂದು ಟಿಎಂಸಿ ಸಂಸದರಾದ ಸುಗತಾ ರೇ ಹೇಳಿದರು.

ಇಷ್ಟು ಸುಲಭವಾಗಿ ಪೌರತ್ವ ಸಿಕ್ಕರೆ ನಾವು ದುರ್ಬಲರಾಗ್ತೀವಿ
ಈ ಮಸೂದೆಗೆ ಬಿಜೆಪಿ ಮಿತ್ರ ಪಕ್ಷಗಳಾದ ಮೇಘಾಲಯದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಹಾಗೂ ಮಿಜೋರಾಂನ ಮಿಜೋ ನ್ಯಾಷನಲ್ ಫ್ರಂಟ್ ವಿರೋಧ ವ್ಯಕ್ತಪಡಿಸಿದವು. "ನಾಳೆ ಬಂದ್ ಅನ್ನು ಬೆಂಬಲಿಸುತ್ತೇವೆ. ಮಿಜೋರಾಮ್ ಸಂಪೂರ್ಣ ಬಂದ್ ಆಗುತ್ತದೆ. ಇಷ್ಟು ಸುಲಭವಾಗಿ ಪೌರತ್ವ ಸಿಕ್ಕರೆ ನಾವು ದುರ್ಬಲರಾಗುತ್ತೇವೆ. ಮಿಜೋರಾಂನಲ್ಲಿ ಬಾಂಗ್ಲಾದೇಶ್, ಮ್ಯಾನ್ಮಾರ್ ನ ವಲಸಿಗರಿದ್ದಾರೆ" ಎಂದು ಮಿಜೋರಾಂ ಮುಖ್ಯಮಂತ್ರಿ ಝೋರ್ಮಾತಂಗ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಮಸೂದೆಯಿಂದ ಅಕ್ರಮ ವಲಸೆ ಹೆಚ್ಚಾಗುತ್ತದೆ ಎಂದು ಸೇರಿಸಿದ್ದಾರೆ.

ಪೌರತ್ವ ಪಡೆಯಲು ಹೀಗಿವೆ ನಿಯಮಗಳು
ಈಗ ತಿದ್ದುಪಡಿ ಆಗಿರುವ ಮಸೂದೆ ಪ್ರಕಾರ, ಹಿಂದೂಗಳು, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಪೌರತ್ವ ದೊರೆಯುತ್ತದೆ. ಬಾಂಗ್ಲಾದೇಶ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪ್ರಜೆಗಳಾಗಿ, ಅಲ್ಲಿ ಧಾರ್ಮಿಕ ಕಿರುಕುಳವಾಗಿ ಡಿಸೆಂಬರ್ 31, 2014ಕ್ಕೂ ಮೊದಲು ಭಾರತವನ್ನು ಪ್ರವೇಶಿಸಿರಬೇಕು. ನಾಗರಿಕತ್ವ ಸಕ್ರಮ ಆಗುವುದಕ್ಕೆ ಅರ್ಜಿದಾರರು 2014ರ ಡಿಸೆಂಬರ್ ತನಕ 12 ತಿಂಗಳ ಕಾಲ ಭಾರತದಲ್ಲಿ ಇರಬೇಕು. ಮತ್ತು ಅದಕ್ಕೂ ಮುನ್ನ ಹದಿನಾಲ್ಕರಲ್ಲಿ 11 ವರ್ಷ ಇರಬೇಕು. ತಿದ್ದುಪಡಿ ಮಾಡಲಾದ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದನ್ನು ಸಲ್ಲಿಸಿದ್ದು ಜಂಟಿ ಸದನ ಸಮಿತಿ ವರದಿ ಮೂಲಕ. ಅದು ಲೋಕಸಭೆಯಲ್ಲಿ ಸಲ್ಲಿಸಿ, ಪ್ರಸ್ತಾವಿತ ಕಾನೂನಿಗೆ ಒಪ್ಪಿಗೆ ಸಿಕ್ಕಿದೆ.

ಅಸ್ಸಾಮಿಗಳಿಗೆ ಯಾವುದೇ ತೊಂದರೆ ಇಲ್ಲ
ಜಂಟಿ ಸದನ ಸಮಿತಿಯ ನೇತೃತ್ವ ವಹಿಸಿದ್ದ ರಾಜೇಂದ್ರ ಅಗರ್ ವಾಲ್ ಮಾತನಾಡಿ, ಈ ವಿಚಾರ ಇನ್ನೂ ಕೋರ್ಟ್ ನಲ್ಲೇ ಇದೆ. ಆದ್ದರಿಂದ ಸರಕಾರವು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಏಕೆಂದರೆ ಎಲ್ಲ ಕಾನೂನು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಗಳಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಅಸ್ಸಾಮಿನ ಸಂಸ್ಕೃತಿ, ಭಾಷಾ ಅಸ್ಮಿತೆ ಉಳಿಸುವುದೇ ನಮ್ಮ ಉದ್ದೇಶ. ಅಸ್ಸಾಮಿಗಳಿಗೆ ಈ ಹೊಸ ಕಾನೂನಿನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications