ಕೊರೊನಾವೈರಸ್ ಸೋಂಕಿಗೆ ಅರಿಶಿಣ ಹಾಲು, ಆಯುಷ್ ಔಷಧಿ
ನವದೆಹಲಿ, ಸಪ್ಟೆಂಬರ್,13: ಚಾವನ್ ಪ್ರೆಶ್, ಅರಿಶಿಣ ಹಾಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮುಲೇತಿ ಪುಡಿ, ಅಶ್ವಗಂಧ, ಆಮ್ಲಾ ಹಣ್ಣಿನಂತಹ ಆಯುಷ್ ಔಷಧಿಗಳು ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಕೊವಿಡ್-19 ನಿಂದ ರಕ್ಷಿಸಿಕೊಳ್ಳಲು ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಯಾವ ನಿಯಮ ಮತ್ತು ಶಿಷ್ಟಾಚಾರ ಪಾಲನೆ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಭಾರತದಲ್ಲಿ ಕೊವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆ ಆತಂಕ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 94372 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 47,54,357ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊವಿಡ್-19ನಿಂದ 78614 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ನಡುವೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಇರುವುದೇನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಗುಣಮುಖರಾದಲೂ ಸೋಂಕಿನ ಲಕ್ಷಣಗಳು ಜೀವಂತ!
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದರೂ ಕೆಲವು ದಿನಗಳವರೆಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಯಾಸ, ದೇಹದಲ್ಲಿ ನೋವು, ಕೈ-ಕಾಲು ಹರಿತ, ಕೆಮ್ಮು, ಗಂಟಲು ನೋವು, ಮತ್ತು ಉಸಿರಾಟದ ತೊಂದರೆ ರೀತಿಯ ಲಕ್ಷಣಗಳು ಇರುತ್ತವೆ. ಈ ಹಿನ್ನೆಲೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಸಿನೀರು ಮತ್ತು ಆಯುಷ್ ಔಷಧಿ ಸೇವನೆ ಬಗ್ಗೆ ಸೂಚನೆ
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ನಂತರವೂ ವ್ಯಕ್ತಿಯು ಬಿಸಿನೀರನ್ನು ಸೇವಿಸಬೇಕು. ಮುಖಕ್ಕೆ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದರ ಜೊತೆಗೆ ವೈದ್ಯರ ಸಲಹೆ ಮೇರೆಗೆ ಆಯುಷ್ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
ಕೊರೊನಾವೈರಸ್ ಸೋಂಕು ನಿವಾರಣೆ ಬಳಿಕ ಹೀಗೆ ಮಾಡಿ
"ಚಾವನ್ ಪ್ರಶ್, ಆಯುಷ್ ಕ್ವಾತ್, ಅರಿಶಿನ ಹಾಲು, ಸಂಶಮಣಿ ವತಿ, ಗಿಲೋಯ್ ಪೌಡರ್, ಅಶ್ವಗಂಧ, ಆಮ್ಲಾ ಹಣ್ಣು, ಮುಲೇತಿ ಪುಡಿ ಸೇವಿಸುವುದರಿಂದ ಕೊರೊನಾವೈರಸ್ ನಿಂದ ಗುಣಮುಖ ಆಗಿರುವವರಲ್ಲೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇದರ ಜೊತೆಗೆ ಅರಿಶಿಣ ಮತ್ತು ಉಪ್ಪಿನಿಂದ ಬಾಯಿ ಮುಕ್ಕಳಿಸುವುದುನ್ನು ಕೊವಿಡ್-19 ಚೇತರಿಕೆಗೆ ಹೆಚ್ಚು ಪರಿಣಾಮಕಾರಿ ಮತ್ತ ಪ್ರಭಾವಿತ ಎಂದು ನಂಬಲಾಗಿದೆ.
Recommended Video
ಪ್ರಾಣಾಯಮ, ವ್ಯಾಯಾಮ ಮಾಡುವಂತೆ ಸೂಚನೆ
ಕೊರೊನಾವೈರಸ್ ಸೋಂಕಿನ ಆರಂಭಿಕ ಮತ್ತು ಮಾಧ್ಯಮಿಕ ಲಕ್ಷಣಗಳನ್ನು ಹೊಂದಿರುವವರು ಪ್ರತಿನಿತ್ಯವೂ ವ್ಯಾಯಾಮ, ಪ್ರಾಣಾಯಮ, ಯೋಗಾಸನ, ಧ್ಯಾನ ಮತ್ತು ಉಸಿರಾಟ ಸಂಬಂಧಿತ ವ್ಯಾಯಮವನ್ನು ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಕೊವಿಡ್-19 ವಿರುದ್ಧ ಹೋರಾಡುವುದಕ್ಕೆ ಪರಿಣಾಮಕಾರಿ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.