ಹೋಟೆಲ್ ಕಬಳಿಕೆ ಆರೋಪ: ಚಿದು ವಿರುದ್ಧ ಸಿಬಿಐ ತೂಗುಗತ್ತಿ?
ನವದೆಹಲಿ, ಏಪ್ರಿಲ್ 26: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ವಿರುದ್ಧ ತಮಿಳುನಾಡಿನ ಕೆ.ಕಾಥಿರ್ ವೇಲ್ ಎಂಬುವರು ದೆಹಲಿ ಹೈ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದು, ತಮಗೆ ಸೇರಿದ ಹೋಟೆಲನ್ನು ನಿಯಮ ಬಾಹಿರವಾಗಿ ವಶಪಡಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ದೂರಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಪ್ರಕರಣದಲ್ಲಿ ಸಿಬಿಐನಿಂದ ಸ್ಪಷ್ಟನೆ ಕೋರಿದೆ. 2016ರಲ್ಲಿ ಚಿದಂಬರಂ ಹಾಗೂ ಅವರ ಕುಟುಂಬವು ತಮಗೆ ಸೇರಿರುವ ಹೋಟೆಲನ್ನು ಅತಿಕ್ರಮಿಸಿಕೊಂಡಿರುವ ಬಗ್ಗೆ ದೂರು ನೀಡಿದ್ದರು. ಆದರೆ, ಸಿಬಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಥಿರ್ ಆರೋಪಿಸಿದ್ದಾರೆ. ಹಾಗಾಗಿ, ಈ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬಿಐನಿಂದ ಸ್ಪಷ್ಟನೆ ಕೇಳಿದೆ.

ಏನಿದು ಪ್ರಕರಣ?: ಕಾಥಿರ್ ಅವರ ದೂರಿನ ಪ್ರಕಾರ, ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಕಾಥಿರ್ ವೇಲ್, ತಿರುಪೂರ್ ನಲ್ಲಿ ಪಾಲುದಾರಿಕೆಯಲ್ಲಿ 'ಕಂಫರ್ಟ್ ಇನ್' ಎಂಬ ಹೋಟೆಲನ್ನು ನಡೆಸುತ್ತಿದ್ದರು.
ಆ ಹೋಟೆಲಿನ ಮೇಲೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ (ಐಒಬಿ) ವತಿಯಿಂದ 2.5 ಕೋಟಿ ರು. ಸಾಲ ಪಡೆದಿದ್ದರು. ಆದರೆ, ನಿಗದಿತ ಅವಧಿಯಲ್ಲಿ ಸಾಲ ಮರು ಪಾವತಿ ಮಾಡದಿದ್ದ ಕಾರಣದಿಂದಾಗಿ, ಅವರನ್ನು ಉದ್ದೇಶಪೂರ್ವಕ ಸಾಲಗಾರ ಎಂದು ಘೋಷಿಸಿದ ಬ್ಯಾಂಕ್, ಕಾಥಿರ್ ಅವರ ಹೋಟೆಲನ್ನು ಹರಾಜು ಹಾಕಲು ಮುಂದಾಗಿತ್ತು.
ಆಗ ಎಚ್ಚೆತ್ತುಕೊಂಡಿದ್ದ ಕಾಥಿರ್, ತಕ್ಷಣಕ್ಕೆ ಸುಮಾರು 64 ಲಕ್ಷ ರು.ಗಳನ್ನು ಹಣವನ್ನು ಹೊಂದಿಸಿಕೊಂಡು ಅದನ್ನು ಬ್ಯಾಂಕಿಗೆ ಕಟ್ಟಿ ಹರಾಜು ನಡೆದರಂತೆ ಕೋರಿದ್ದರು.
ಆಗ, ಹರಾಜು ನಡೆಸುವುದಿಲ್ಲ ಎಂದು ಕಾಥಿರ್ ಅವರಿಗೆ ವಾಗ್ದಾನ ನೀಡಿದ್ದ ಬ್ಯಾಂಕ್ ಆನಂತರ, ಗುಟ್ಟಾಗಿ ಹರಾಜು ನಡೆಸಿ ಹೋಟೆಲನ್ನು ಪಿ.ಚಿದಂಬರಂ ಅವರ ನಾದಿನಿಯಾದ ಪದ್ಮಿನಿಯವರಿಗೆ ಹಸ್ತಾಂತರ ಮಾಡಿದೆ.
ಈ ಹರಾಜು ಪ್ರಕ್ರಿಯೆಯಲ್ಲಿ, 10 ಕೋಟಿ ರು. ಬೆಲೆ ಬಾಳುವ ಹೋಟೆಲನ್ನು ಕೇವಲ 4.5 ಕೋಟಿ ರು.ಗಳಿಗೆ ಮಾರಾಟ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೊಂದು ದೊಡ್ಡ ಹಣಕಾಸು ಅಕ್ರಮ ಎಂದು ಕಾಥಿರ್ ಆರೋಪಿಸಿದ್ದಾರೆ.
ಇದರ ಹಿಂದೆ, ಚಿದಂಬರಂ ಅವರ ಪತ್ನಿ ನಳಿನಿ ಅವರು, ಚಿದಂಬರಂ ಅವರ ಪ್ರಭಾವ ಉಪಯೋಗಿಸಿಕೊಂಡು ಹೋಟೆಲನ್ನು ತಮ್ಮ ಸಹೋದರಿಯಾದ ಪದ್ಮಿನಿ ಹೆಸರಿನಲ್ಲಿ ಕೊಂಡಿದ್ದಾರೆಂದು ಕಾಥಿರ್ ಆರೋಪಿಸಿದ್ದಾರೆ.












Click it and Unblock the Notifications