ಸೋನಿಯಾ ಸೂತ್ರಧಾರಿ, ಸಿಂಗ್ ಪಾತ್ರಧಾರಿ ಬಗ್ಗೆ ಚಿದು
ನವದೆಹಲಿ, ಏ.14: ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬರು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವುದೆಲ್ಲ ಸುಳ್ಳು. ಸತ್ಯವನ್ನು ಮುಚ್ಚಿಟ್ಟಿದ್ದಾರೆ. ಸೋನಿಯಾಗಾಂಧಿ ಸರ್ಕಾರದ ಸೂತ್ರಧಾರಿ, ಎಂಎಂ ಸಿಂಗ್ ಪಾತ್ರಧಾರಿ ಎಂದು ನಿರೂಪಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಕುರಿತ ಅಭಿಪ್ರಾಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಇದರಿಂದ ಪ್ರಧಾನಿಯವರ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಕೆಲವೊಂದು ವಿಷಯಗಳಲ್ಲಿ ಯುಪಿಎ-2 ಸರ್ಕಾರ ಕೆಲ ವೇಳೆ ಮುಗ್ಗರಿಸಿದೆಯಾದರೂ ವಿಫಲವಾಗಿಲ್ಲ ಎಂದು ಚಿದಂಬರಂ ಹೇಳಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಸಕ್ತ ವಿಷಯಗಳ ಬಗ್ಗೆ ಮೌನವಾಗಿರುವುದನ್ನು ಕುರಿತಂತೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸರ್ಕಾರದ ಸೂತ್ರಧಾರಿಯಾಗಿದ್ದರು ಎಂದು 'The Accidental PM: the making and unmaking of Manmohan Singh' ಎಂಬ ಪುಸ್ತಕದಲ್ಲಿ ಸಂಜಯ್ ಬರು ಅವರು ಬರೆದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣೆ ಮುಂದಿಟ್ಟುಕೊಂಡು ಈ ರೀತಿ ಕಟ್ಟುಕಥೆ ಹೆಣೆದಿರುವುದನ್ನು ಜನರು ನಂಬುವುದಿಲ್ಲ ಎಂದು ಚಿದಂಬರಂ ಹೇಳಿದರು.

ಸಮೀಕ್ಷೆಗಳನ್ನು ನಂಬುವುದಿಲ್ಲ: ಲೋಕಸಭೆ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆಗಳ ಬಗ್ಗೆ ತಮಗೆ ನಂಬಿಕೆಯಿಲ್ಲ ಎಂದು ಹೇಳಿರುವ ಚಿದಂಬರಂ ಮಾಧ್ಯಮಗಳು ಈ ರೀತಿ ಏಕಪಕ್ಷೀಯ ಸಮೀಕ್ಷೆಗಳನ್ನು ನಡೆಸುವ ಪರಿಪಾಠವನ್ನು ಕೈ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಯುಪಿಎ ಮೈತ್ರಿಕೂಟ ಮೂರನೆ ಅವಧಿಗೂ ಗೆಲುವು ಸಾಧಿಸಿ ದೇಶದಲ್ಲಿ ಸರ್ಕಾರ ರಚಿಸಲಿದೆ ಮತ್ತು ಜನತೆಗೆ ಉತ್ತಮ ಆಡಳಿತ ನೀಡಲಿದೆ ಎಂಬ ವಿಶ್ವಾಸವನ್ನು ಚಿದಂಬರಂ ವ್ಯಕ್ತಪಡಿಸಿದರು.
ಆರ್ಥಿಕ ಕುಸಿತದ ಬಗ್ಗೆ : ಈ ಹಿಂದೆ ಯುಪಿಎ ಸರ್ಕಾರಕ್ಕೂ ಮುಂಚೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್ ಡಿಎ ಸರ್ಕಾರ ಮತ್ತು ಆ ಸರ್ಕಾರದ ಹಣಕಾಸು ಸಚಿವ ಯಶವಂತ್ ಸಿನ್ಹ ಅವರ ಕಾಲದಲ್ಲಿ ದೇಶದ ಅರ್ಥವ್ಯವಸ್ಥೆ ಭಾರಿ ಕುಸಿದು ಹೋಗಿತ್ತು. 2000 ಮತ್ತು 2001ರಲ್ಲಿ ದೇಶದ ಬೆಳವಣಿಗೆ ದರ ಶೇ.4.3ರಷ್ಟಿತ್ತು. ನಂತರ 2001 ಮತ್ತು 2002ರಲ್ಲಿ ಅದು ತೀರ ಕುಸಿದು ಶೇ.4ಕ್ಕಿಳಿಯಿತು.
2004ರಲ್ಲಿ ವಾಜಪೇಯಿಯವರ ಸರ್ಕಾರ ಯಶವಂತ್ ಸಿನ್ಹ ಅವರನ್ನು ಖಾತೆಯಿಂದ ತೆಗೆದು ಅವರ ಸ್ಥಾನಕ್ಕೆ ಜಸ್ವಂತ್ ಸಿಂಗ್ ಅವರನ್ನು ನೇಮಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಅಧಿಕಾರಿಗಳು ಕಾಂಗ್ರೆಸ್ ತನ್ನ ಮೊದಲ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಅಭಿವೃದ್ಧಿ ದರವನ್ನು ಶೇ.8.5ಕ್ಕೆ ಏರಿಸಿತು ಎಂದಿದ್ದಾರೆ.












Click it and Unblock the Notifications