ದೆಹಲಿ ಸರ್ಕಾರ ಮಸೂದೆ ವಿವಾದ: ರಾಜ್ಯಸಭೆಯಲ್ಲಿ ಗದ್ದಲ
ನವದೆಹಲಿ, ಮಾರ್ಚ್ 24: ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರಗಳನ್ನು ಮೊಟಕುಗೊಳಿಸಿ, ಲೆಫ್ಟಿನೆಂಟ್ ಗವರ್ನರ್ಗೆ ಮತ್ತಷ್ಟು ಅಧಿಕಾರ ನೀಡುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ರಾಜ್ಯಸಭೆಯಲ್ಲಿ ಬುಧವಾರ ತೀವ್ರ ಗದ್ದಲ ಉಂಟಾಯಿತು. ಹಣಕಾಸು ಮಸೂದೆ ಕುರಿತು ಚರ್ಚೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುವ ವೇಳೆ ಭಾರಿ ವಾಗ್ವಾದ ನಡೆದಿದ್ದರಿಂದ ಅವರು ತಮ್ಮ ಮಾತನ್ನು ಸ್ಥಗಿತಗೊಳಿಸಬೇಕಾಯಿತು.
ಸರ್ಕಾರವನ್ನು ಖಂಡಿಸಿ ಸಂಸದರು ಘೋಷಣೆಗಳನ್ನು ಕೂಗಿದರು. ಕೇಂದ್ರ ಯೋಜನೆಗಳ ಜಾರಿಯ ವಿಚಾರವಾಗಿ ಇದೇ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರೀಯ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿಯೇ ತನ್ನ ಸಂಸದರನ್ನು ಕಳುಹಿಸಿರುವುದಾಗಿ ಟಿಎಂಸಿ ತಿಳಿಸಿತು.
ದೆಹಲಿಯ ಚುನಾಯಿತ ಸರ್ಕಾರಕ್ಕಿಂತಲೂ ದೆಹಲಿಯಲ್ಲಿನ ಕೇಂದ್ರ ಸರ್ಕಾರದ ಪ್ರತಿನಿಧಿ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರವನ್ನು ಈ ಪ್ರಸ್ತಾವಿತ ಕಾಯ್ದೆ ನೀಡಲಿದೆ. ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ವಿರೋಧಪಕ್ಷಗಳು ಒತ್ತಾಯಿಸಿವೆ.

'ನೀವು ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದೀರಿ. ಅದಕ್ಕಾಗಿ ನೀವು ಈ ಮಸೂದೆ ತಂದಿದ್ದೀರಿ. ಈ ಮಸೂದೆ ಪ್ರಜಾಪ್ರಭುತ್ವ ವಿರೋಧಿ. ಲೆಫ್ಟಿನೆಂಟ್ ಗವರ್ನರ್ ಎಂದರೆ ಸರ್ಕಾರ ಎಂದು ಇದು ಹೇಳುತ್ತಿದೆ. ಇಂದು ದೆಹಲಿಯ ಎರಡು ಕೋಟಿ ಜನರು ನ್ಯಾಯಕ್ಕಾಗಿ ಎದ್ದು ನಿಂತಿದ್ದಾರೆ' ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದರು.












Click it and Unblock the Notifications