ಒಂದು ರಾಜ್ಯ.. ಒಂದು ತಿಂಗಳು.. 5 ಲಕ್ಷ ಜನರಿಗೆ ಕೊರೊನಾವೈರಸ್ ಪಕ್ಕಾ?
ನವದೆಹಲಿ, ಜೂನ್.28: ನೊವೆಲ್ ಕೊರೊನಾವೈರಸ್ ಮತ್ತು ಗಲ್ವಾನ್ ಕಣಿವೆ ಪ್ರದೇಶದ ವಿವಾದ ಈ ಎರಡೂ ಸವಾಲುಗಳನ್ನು ಭಾರತೀಯ ಕೇಂದ್ರ ಸರ್ಕಾರವು ಸಮರ್ಥವಾಗಿ ಎದುರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಏಷಿಯನ್ ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ಸಂಪಾದಕರಾದ ಸ್ಮಿತಾ ಪ್ರಕಾಶ್ ನಡೆಸಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಅಟ್ಟಹಾಸ ಮುಂದುವರಿದಿದೆ. ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ನವದೆಹಲಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಗುತ್ತಿದೆ. ಪ್ರತಿನಿತ್ಯ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ ಮತ್ತು ಪ್ರಮಾಣವು ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೇ ಆತಂಕಕ್ಕೆ ದೂಡಿದೆ.

ನವದೆಹಲಿಯಲ್ಲೇ 5.50 ಲಕ್ಷ ಜನರಿಗೆ ಕೊರೊನಾವೈರಸ್
ನವದೆಹಲಿಯಲ್ಲಿ ಮುಂದಿನ ಜುಲೈ.31ರವರೆಗೂ 5.50 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು ಹರಡುವ ಬಗ್ಗೆ ಡಿಸಿಎಂ ಮನೀಷ್ ಸಿಸೋಡಿಯಾ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಉಂಟಾಗಿರುವ ಪರಿಸ್ಥಿತಿ ಅಂಥದ್ದೇ ಆತಂಕವನ್ನು ಸೃಷ್ಟಿಸಿದೆ. ಆದರೆ ಆ ಹಂತಕ್ಕೆ ತಲುಪಲು ಬಿಡುವುದಿಲ್ಲ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮುದಾಯಕ್ಕೆ ಕೊರೊನಾವೈರಸ್ ಹರಡುವ ಆತಂಕವಿಲ್ಲ
ನವದೆಹಲಿಯಲ್ಲಿ ಒಂದು ಹಂತದಲ್ಲಿ ಕೊರೊನಾವೈರಸ್ ಸೋಂಕು ಸಮುದಾಯಕ್ಕೆ ಹರಡುವ ಆತಂಕವು ಎದುರಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸಮುದಾಯದಲ್ಲಿ ಸೋಂಕು ಹರಡುವುದಕ್ಕೆ ಸರ್ಕಾರವು ಕಡಿವಾಣ ಹಾಕಿದೆ. ಶಿಸ್ತು ತಪಾಸಣಾ ಕ್ರಮಗಳನ್ನು ತೆಗೆದುಕೊಂಡಿರುವುದು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಕೆಲಸವನ್ನು ಮಾಡುತ್ತಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ 30 ಸಾವಿರ ಬೆಡ್
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ 80,188ರ ಗಡಿ ದಾಟಿದೆ. ಈ ಪೈಕಿ 49,301 ಮಂದಿ ಗುಣಮುಖರಾಗಿದ್ದರೆ 28,329ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆ ಜೂನ್.30ರ ವೇಳೆಗೆ ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ 30,000 ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ದೆಹಲಿಯಲ್ಲಿ 350 ಮೃತದೇಹಗಳ ಅಂತ್ಯಕ್ರಿಯೆ ಬಾಕಿ
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವುದಕ್ಕೆ ಸಂಬಂಧಿಕರೇ ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ 350 ಮೃತರ ಅಂತ್ಯಸಂಸ್ಕಾರವು ಬಾಕಿ ಉಳಿದಿದ್ದು, ಮುಂದಿನ ಎರಡು ದಿನಗಳಲ್ಲಿ ಸರ್ಕಾರದ ವತಿಯಿಂದಲೇ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಅಮಿತ್ ಷಾ ಹೇಳಿದರು.

ನವದೆಹಲಿ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಬೆಂಬಲ
ಕೊರೊನಾವೈರಸ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರವು ಕೂಡಾ ನವದೆಹಲಿ ಸರ್ಕಾರದ ಜೊತೆಗೆ ಕೈಜೋಡಿಸಿದೆ. ಇತ್ತೀಚಿಗಷ್ಟೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ಸಚಿವರ ಜೊತೆಗೆ ಜಂಟಿಸಭೆ ನಡೆಸಲಾಗಿತ್ತು. ಈ ವೇಳೆ ಕೊರೊನಾವೈರಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಂಟೇನ್ಮೆಂಟ್ ಝೋನ್ ಗಳಲ್ಲಿ ಪ್ರತಿಯೊಂದು ಮನೆಯ ಸದಸ್ಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು. ಪ್ರತಿನಿತ್ಯ ಎರಡು ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವುದು ಸೇರಿದಂತೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಅಮಿತ್ ಶಾ ತಿಳಿಸಿದರು.

ಸುಖಾಸುಮ್ಮನೆ ಟೀಕಿಸುವವರ ಬಗ್ಗೆ ಏನು ಹೇಳುವುದಕ್ಕೆ ಸಾಧ್ಯ
ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರವು ಸೋತಿದೆ ಎಂದು ಕೆಲವರು ದೂಷಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜಾಗತಿಕ ಮಟ್ಟದಲ್ಲಿನ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನೊಮ್ಮೆ ಗಮನಿಸಿದರೆ ದೇಶದ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಕೆಲವರು ಉತ್ತಮ ಕೆಲಸದಲ್ಲೂ ತಪ್ಪುಗಳನ್ನು ಹುಡುಕುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಕಿಡಿ ಕಾರಿದರು.












Click it and Unblock the Notifications