ಬಂಧನ ಭೀತಿ : ಕೋರ್ಟ್ ಮೊರೆ ಹೋದ ಸಿಬಿಐನ ನಂ. 2ಗೆ ಮಿಶ್ರಫಲ
ನವದೆಹಲಿ, ಅಕ್ಟೋಬರ್ 23 : ಭ್ರಷ್ಟಾಚಾರ ಆರೋಪ ಹೊತ್ತುಕೊಂಡಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರು ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೊಕ್ಕಿದ್ದಾರೆ. ಆದರೆ, ಸಿಬಿಐ ನಂ.2ಗೆ ಮಂಗಳವಾರದಂದು ಮಿಶ್ರಫಲ ಸಿಕ್ಕಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಲ್ಲಿಸಿರುವ ಪ್ರಕರಣ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಕೇಶ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಮುಂದಿನ ವಿಚಾರಣೆ ತನಕ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಮೊಯಿನ್ ಖುರೇಷಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಂದ ಲಂಚ ಕೇಳಿದ ಆರೋಪವನ್ನು ಸಿಬಿಐನ ನಂ.2 ಅಧಿಕಾರಿ ರಾಕೇಶ್ ಮೇಲೆ ಹೊರೆಸಲಾಗಿದೆ.
ಸಿಬಿಐನಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಕದನ ಆರೋಪ - ಪ್ರತ್ಯಾರೋಪಗಳು ಈಗ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಹುಳುಕು ಹೊರ ಹಾಕುತ್ತಿದೆ.

ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೋಹನ್, ಜಸ್ಟೀಸ್ ವಿ ಕಾಮೇಶ್ವರ್ ರಾವ್ ಅವರು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು. ನಂತರ ಏಕಸದಸ್ಯ ನ್ಯಾಯಪೀಠದ ಜಸ್ಟೀಸ್ ನಜ್ಮಿ ವಜಿರಿ ಅವರು ಸಿಬಿಐ ಡೆಪ್ಯುಟಿ ಎಸ್ ಪಿ ದೇವೇಂದ್ರ ಕುಮಾರ್ ಅವರ್ ಅರ್ಜಿಯನ್ನು ವಿಚಾರಣೆ ನಡೆಸಿದರು.
ಪ್ರಕರಣದ ಹಿನ್ನೆಲೆ: ಮಾಂಸ ರಫ್ತುದಾರ ಮೋಯಿನ್ ಖುರೇಶಿ ಕೇಸಿಗೆ ಸಂಬಂಧಿಸಿದಂತೆ ಮಧ್ಯವರ್ತಿ ಸತೀಶ್ ಸನಾ ಅವರಿಂದ 3 ಕೋಟಿ ರು ಲಂಚ ಪಡೆದ ಆರೋಪದ ಮೇಲೆ ಅಸ್ಥಾನ ಅವರ ಮೇಲೆ ಎಫ್ ಐಆರ್ ಹಾಕಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ದೇವೇಂದ್ರ ಕುಮಾರ್ ರನ್ನು ಅಕ್ಟೋಬರ್ 22ರನ್ನು ಬಂಧಿಸಿ, ಪಟಿಯಾಲ ಕೋರ್ಟಿಗೆ ಹಾಜರುಪಡಿಸಲಾಗಿದೆ, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಕ್ಟೋಬರ್ 15ರಂದು ಹಾಕಲಾಗಿರುವ ಎಫ್ಐಆರ್ ನಂಬರ್ ಆರ್ ಸಿ #13(ಎ) 2018/ಎಸಿ-3 ನಲ್ಲಿ ರಾಕೇಶ್ ನಂ.1 ಆರೋಪಿಯಾಗಿದ್ದರೆ, ದೇವೇಂದ್ರ ಕುಮಾರ್, ಮನೋಜ್ ಪ್ರಸಾದ್, ಸೋಮೇಶ್ ಪ್ರಸಾದ್ ಕ್ರಮವಾಗಿ ನಂ.2,3,4 ಎಂದು ಹೆಸರಿಸಲಾಗಿದೆ.












Click it and Unblock the Notifications