ಸಿಬಿಐ ಮಧ್ಯಂತರ ನಿರ್ದೇಶಕ ನಾಗೇಶ್ವರ ರಾವ್ಗೆ ಬಡ್ತಿ
ನವದೆಹಲಿ, ಡಿಸೆಂಬರ್ 18: ಸಿಬಿಐನ ಮಧ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರನ್ನು ಹೆಚ್ಚುವರಿ ನಿರ್ದೇಶಕರ ಶ್ರೇಣಿಗೆ ಬಡ್ತಿ ನೀಡಲಾಗಿದೆ.
ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ
ಸಿಬಿಐ ವಿವಾದ ಮತ್ತು ಅದರ ಇಬ್ಬರು ಹಿರಿಯ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ ವಿವಾದದ ನಡುವೆಯೇ ಸಂಪುಟದ ನೇಮಕಾತಿ ಸಮಿತಿ ಮಂಗಳವಾರ ಈ ಆದೇಶ ಹೊರಡಿಸಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ನಡುವಿನ ಮನಸ್ತಾಪ ಬಹಿರಂಗವಾದ ಬಳಿಕ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಿತ್ತು. ಅಕ್ಟೋಬರ್ 24 ರಂದು ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ತಕ್ಷಣದಿಂದಲೇ ಅನ್ವಯವಾಗುವಂತೆ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು.
ಅದರ ಬೆನ್ನಲ್ಲೇ ನಾಗೇಶ್ವರ ರಾವ್ ಅವರನ್ನು ಸಿಬಿಐನ ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಆದರೆ, ಸಿಬಿಐ ಮುಖ್ಯಸ್ಥರಾಗಿ ಅವರ ಕಾರ್ಯಚಟುವಟಿಕೆಗಳ ಮೇಲೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿತ್ತು. ತಮ್ಮ ಕಡ್ಡಾಯ ರಜೆಯ ಆದೇಶದ ವಿರುದ್ಧ ಅಲೋಕ್ ವರ್ಮಾ ಮತ್ತು ರಾಕೇಶ್ ಆಸ್ಥಾನಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುವವರೆಗೂ ಯಾವುದೇ ಪ್ರಮುಖ ನಿರ್ಧಾರಗಳನ್ನು ನಾಗೇಶ್ವರ ರಾವ್ ಅವರು ತೆಗೆದುಕೊಳ್ಳುವಂತಿಲ್ಲ. ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳನ್ನಷ್ಟೇ ಅವರು ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.