ಸುಪ್ರೀಂ ವಿಚಾರಣೆ ಇಂದು: ನ್ಯಾಯಾಂಗ ನಿಂದನೆಯೋ ವಾದಕ್ಕೆ ಮನ್ನಣೆಯೋ?
ನವದೆಹಲಿ, ಸೆಪ್ಟೆಂಬರ್ 27: ಮಂಗಳವಾರ ಮಧ್ಯಾಹ್ನ 2ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿರುವ ಕಾವೇರಿ ನೀರು ಬಿಡುಗಡೆ ವಿಚಾರಣೆ ರಾಜ್ಯದ ಪಾಲಿಗೆ ಆತಂಕ ಎದುರಿಸುವಂತೆ ಮಾಡಿದೆ. ಸೆಪ್ಟೆಂಬರ್ ನಲ್ಲಿ ಮೂರು ಬಾರಿ ಹಿನ್ನಡೆ ಕಾಣುವಂತೆ ಮಾಡಿದ್ದವು ಸುಪ್ರೀಂ ಕೋರ್ಟ್ ಆದೇಶಗಳು.
ಇನ್ನು ಸೆಪ್ಟೆಂಬರ್ 20ರಂದು ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ಬಂದಿತ್ತು. ಆ ನಂತರ ವಿಶೇಷ ಅಧಿವೇಶನ ಕರೆದು, ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಎಂಬ ನಿರ್ಣಯ ಕೈಗೊಳ್ಳಲಾಯಿತು. ಸೋಮವಾರದಂದು ಸುಪ್ರೀಂ ಕೋರ್ಟ್ ನ ಈ ಹಿಂದಿನ ಆದೇಶ ಬದಲಾವಣೆ ಮಾಡುವಂತೆ ಕರ್ನಾಟಕ ಅರ್ಜಿ ಸಲ್ಲಿಸಿದೆ.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಇನ್ನು ತಮಿಳುನಾಡಿಗೆ ನೀರು ಬಿಡುಗಡೆ ಮಾಡದೆ, ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯವು ಯಾವ ಫಲಿತಾಂಶ ಬರುವಂತೆ ಮಾಡುತ್ತದೋ ಎಂಬ ಆತಂಕವಂತೂ ಇದ್ದೇ ಇದೆ. ಈ ಮಧ್ಯೆ ತಮಿಳುನಾಡು ಸಹ ಆಕ್ಷೇಪಣೆ ಸಲ್ಲಿಸಿದೆ. ಕರ್ನಾಟಕದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು. ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸೂಚಿಸಬೇಕು ಎಂದು ಮನವಿ ಮಾಡಿರುವುದರಿಂದ ಪರಿಸ್ಥಿತಿ ಮತ್ತೂ ಗಂಭೀರವಾಗಿದೆ.
ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಲಾಪಕ್ಕೆ ತೆರಳಿದ್ದ ಸಚಿವ ಎಂ.ಬಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಇತರರನ್ನು ಮಂಗಳವಾರ ಕೋರ್ಟ್ ಅವರಣದಿಂದ ದೂರವಿರುವಂತೆ ಕರ್ನಾಟಕದ ಪರ ವಾದ ಮಂಡಿಸುತ್ತಿರುವ ಕಾನೂನು ತಜ್ಞರ ತಂಡ ಸಲಹೆ ಮಾಡಿದೆ.[ನಿರ್ವಹಣಾ ಮಂಡಳಿ ರಚನೆ ಅದೇಶವೇ ನ್ಯಾಯಾಂಗ ನಿಂದನೆ: ಅಚಾರ್ಯ]
ಕಾವೇರಿ ಕಣಿವೆಯ ಜಲಾಶಯಗಳ್ಲಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದನ್ನು ಸೋಮವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಮತ್ತೊಮ್ಮೆ ತಿಳಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತಲಾ 135 ಹಾಗೂ 70 ಲೀಟರ್ ನೀರು ಪೂರೈಸಬೇಕು ಎಂಬ ನಿಯಮವಿದೆ. ಸದ್ಯಕ್ಕಿರುವ ನೀರಿನ ಸಂಗ್ರಹದಲ್ಲೇ ಬೇಸಿಗೆಯಲ್ಲೂ ನೀರು ಪೂರೈಸಬೇಕು ಎಂದು ರಾಜ್ಯವು ಅರ್ಜಿಯಲ್ಲಿ ತಿಳಿಸಿದೆ.
ಸದ್ಯಕ್ಕೆ ಕೋರ್ಟ್ ನಿಂದ ನಿರೀಕ್ಷಿಸಬಹುದಾದ ಅಂಶಗಳು ಹೀಗಿವೆ
1. ಈ ಹಿಂದೆ ಆದೇಶಿಸಿದಂತೆ ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಗಡುವು ವಿಧಿಸಬಹುದು.
2. ಈ ಹಿಂದಿನ ಆದೇಶ ಪಾಲನೆ ಆಗುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬಹುದು.
3.ಕರ್ನಾಟಕದ ನಿರ್ಧಾರವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಬಹುದು.
4.ಕರ್ನಾಟಕದಲ್ಲಿ ಸದ್ಯಕ್ಕಿರುವುದು ಕುಡಿಯುವುದಕ್ಕೆ ಬಳಸಬಹುದಾದಷ್ಟೇ ನೀರು ಎಂಬುದನ್ನು ಪರಿಗಣಿಸುವ ಸಾಧ್ಯತೆಯೂ ಸ್ವಲ್ಪ ಮಟ್ಟಿಗಿದೆ.












Click it and Unblock the Notifications