ಸತ್ಯಮೇವ ಜಯತೆ, ಸತ್ಯ ಯಾವತ್ತೂ ಗೆಲ್ಲತ್ತೆ : ಅರುಣ್ ಜೇಟ್ಲಿ
ಬೆಂಗಳೂರು, ಫೆಬ್ರವರಿ 13 : "ಸತ್ಯಮೇವ ಜಯತೆ. ಸತ್ಯ ಯಾವತ್ತೂ ಗೆಲ್ಲುತ್ತದೆ. ರಫೇಲ್ ಡೀಲ್ ನಲ್ಲಿ ಏನು ಸತ್ಯಾಂಶ ಅಡಗಿದೆ ಎಂಬುದನ್ನು ಸಿಎಜಿ ವರದಿ ದೃಢಪಡಿಸಿದೆ" ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
2007ರ ನಿಯಮಗಳಿಗೆ ಹೋಲಿಸಿದರೆ 2016ರ ನಿಯಮಗಳಿಂದಾಗಿ ರಫೇಲ್ ಯುದ್ಧ ವಿಮಾನಗಳ ಬೆಲೆ ಕಡಿಮೆ, ತ್ವರಿತ ಬಟವಾಡೆ, ನಿರ್ವಹಣೆ ಉತ್ತಮ ಮತ್ತು ಕಡಿಮೆ ದರದಲ್ಲಿ ಮೇಲ್ದರ್ಜೆಗೇರಿಸಬಹುದು ಎಂದು ಅರುಣ್ ಜೇಟ್ಲಿ ಅವರು ವ್ಯಾಖ್ಯಾನಿಸಿದ್ದಾರೆ.
ರಫೇಲ್ ಡೀಲ್ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತಪ್ಪು ತೀರ್ಪು ನೀಡಲು ಹೇಗೆ ಸಾಧ್ಯ, ಮಹಾಲೇಖಪಾಲರು ಸುಳ್ಳು ವರದಿ ನೀಡಲು ಹೇಗೆ ಸಾಧ್ಯ ಎಂದು ನುಡಿದಿರುವ ಅವರು, ಆ ಕುಟುಂಬ ಮಾತ್ರ ಸತ್ಯ ಹೇಳಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ದೇಶಕ್ಕೆ ರಫೇಲ್ ಖರೀದಿ ಪ್ರಕ್ರಿಯೆಯ ಬಗ್ಗೆ ಸತತವಾಗಿ ಸುಳ್ಳನ್ನು ಹೇಳುತ್ತಿರುವ ಇವರಿಗೆ ಪ್ರಜಾಪ್ರಭುತ್ವ ಹೇಗೆ ಶಿಕ್ಷೆ ನೀಡಬೇಕು ಎಂದು ಜೇಟ್ಲಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಸಿಎಜಿ ವರದಿಯಿಂದಾಗಿ ಮಹಾಘಟಬಂಧನ್ ಹೇಳುತ್ತಿದ್ದ ಸುಳ್ಳುಗಳು ಕೂಡ ಬಟಾಬಯಲಾಗಿವೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ದೇಶದ ಎಲ್ಲ ಸಂಸ್ಥೆಗಳನ್ನು ಧ್ವಂಸ ಮಾಡಲು ಹೊರಟಿದೆ. ಅವರು ಕಂಪ್ರೋಟಲರ್ ಆಡಿಟರ್ ಜನರಲ್ ಅನ್ನು ಕೂಡ ಬಿಟ್ಟಿಲ್ಲ. ರಾಹುಲ್ ಗಾಂಧಿ ಅವರ ಸುಳ್ಳಿನ ಸರಣಿಯನ್ನೇ ರಫೇಲ್ ಡೀಲ್ ಬಗ್ಗೆ ಸಿಎಜಿ ನೀಡಿರುವ ವರದಿ ಬಯಲು ಮಾಡಿದೆ ಎಂದು ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಿಎಜಿ ವರದಿ ರಾಜ್ಯಸಭೆಯಲ್ಲಿ ಬಹಿರಂಗವಾಗುತ್ತಿದ್ದಂತೆ, ಚೌಕಿದಾರ್ ಚೋರ್ ಹೈ ಎಂದು ಘೋಷಣೆ ಕೂಗುತ್ತಿದ್ದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪಟಾಲಂ, ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್ ಎಂದು ಘೋಷಣೆ ಕೂಗಲು ಆರಂಭಿಸಿದರು.
ಸಿಎಜಿ ವರದಿಯಲ್ಲಿ, ಯುಪಿಎ ಸರಕಾರ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಎನ್ಡಿಎ ಸರಕಾರ ರಫೇಲ್ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದ ಶೇ.2.86ರಷ್ಟು ಅಗ್ಗವಿದೆ ಎಂದು ವಿವರಿಸಲಾಗಿದೆ.












Click it and Unblock the Notifications