ದಿಗಿಲು ಬಡಿಸಿದ ದೆಹಲಿ; ಎಲ್ಲ ಸರ್ಕಾರದ ಕಾರ್ಯದರ್ಶಿಗಳ ಜೊತೆ ಚರ್ಚೆ
ನವದೆಹಲಿ, ಏಪ್ರಿಲ್.01: ಕೊರೊನಾ ವೈರಸ್ ಭೀತಿ ನಡುವೆಯೇ ನಡೆದ ಧಾರ್ಮಿಕ ಕಾರ್ಯಕ್ರಮ ಇದೀಗ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರ ರಾಜಧಾನಿಯಲ್ಲೇ ನಡೆದ ಸಮಾವೇಶದಲ್ಲಿ ಭಾಗಿಯಾದವರಿಗೆ ಸೋಂಕು ಕಾಣಿಸಿಕೊಂಡಿದ್ದು ಜನರಲ್ಲಿನ ಆತಂಕವನ್ನು ಹೆಚ್ಚಿಸಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಗಳಿಂದ ಧಾವಿಸಿದ 2 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಮರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ 441 ಮಂದಿಗೆ ಸೋಂಕು ತಗಲಿದ್ದರೆ, 1107 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ.
ಕಳೆದ ಮಾರ್ಚ್.01ರಿಂದ 15ರವರೆಗೂ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುತೇಕರಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ದೆಹಲಿಯಿಂದ ಆಗಮಿಸಿದವರ ಮೇಲೆ ನಿಗಾ ವಹಿಸುವಂತೆ ಸೂಚಿಸಲು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಎಲ್ಲ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರ ಜೊತೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಚರ್ಚಿಸಬಹುದಾದ ಪ್ರಮುಖ ಅಂಶಗಳು:
- ಕೊರೊನಾ ವೈರಸ್ ವಿರುದ್ಧ ಸಮರ ಸಾರಿದ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕು. ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾದವರನ್ನು ಗುರುತಿಸಿ ತೀವ್ರ ನಿಗಾ ವಹಿಸಬೇಕು. ಇದರಿಂದ ಮುಂದೆ ಎದುರಾಗುವ ಆಪತ್ತನ್ನು ಸಮರ್ಥವಾಗಿ ನಿಭಾಯಿಸಬಹುದು.
ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾದ ವಿದೇಶಿ ಧರ್ಮ ಪ್ರಚಾರಕರು ವೀಸಾ ನಿಯಮವನ್ನು ಉಲ್ಲಂಘಿಸಿ ದೇಶವನ್ನು ಪ್ರವೇಶಿಸಿದ್ದಾರೆ. ವಿದೇಶಿಗರಿಗೆ ನಿರ್ಬಂಧ ವಿಧಿಸಿದ್ದರೂ ದೇಶವನ್ನು ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಂಬಂಧ ಆಯೋಜಕರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
- ಮುಂದಿನ ವಾರದೊಳಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಅನುಷ್ಠಾಗೊಳಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದರಿಂದ ಹೆಚ್ಚಿನ ಮೊತ್ತವು ಫಲಾನುಭವಿಗಳಿಗೆ ಸಿಗಲಿದೆ.
- ದೇಶಾದ್ಯಂತ ಲಾಕ್ ಡೌನ್ ಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆಯಾ ಎಂಬುದರ ಬಗ್ಗೆ ಚರ್ಚಿಸಲಿದ್ದಾರೆ. ಇದೇ ವೇಳೆ ಅಂತರ್ ರಾಜ್ಯಗಳ ನಡುವೆ ಅಗತ್ಯ ಸರಕು ಮತ್ತು ಸೇವೆಗಳ ಸಾಗಾಟಕ್ಕೆ ಅಡ್ಡಿಪಡಿಸದಂತೆ ಅನುವು ಮಾಡಿಕೊಡಲು ರಾಜ್ಯಗಳು ಮನವಿ ಮಾಡಿಕೊಳ್ಳುವ ಸಾಧ್ಯತೆಯಿದೆ.
- ಅಗತ್ಯ ವಸ್ತುಗಳ ಉತ್ಪಾದನೆಗೆ ಎಷ್ಟು ಒತ್ತು ನೀಡುತ್ತೇವೆಯೋ ಅದೇ ರೀತಿ ಅವುಗಳ ಸಾಗಾಟಕ್ಕೂ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications