'ಪೆಟ್ರೋಲ್ ದರ ಇಳಿಸಿ, ಮೀಟರ್ ದರ ಏರಿಸಿ'- ದಿಲ್ಲಿಯಲ್ಲಿ ಮುಷ್ಕರ
ನವದೆಹಲಿ, ಏ. 18: ಪ್ರೆಟ್ರೋಲ್, ಡೀಸೆಲ್, ಗ್ಯಾಸ್ ದರಗಳ ಏರಿಕೆಯನ್ನ ಬಲವಾಗಿ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಆಟೊ, ಕ್ಯಾಬ್ ಚಾಲಕರು ಇಂದಿನಿಂದ ಎರಡು ದಿನ ಮುಷ್ಕರದಲ್ಲಿ ತೊಡಗಿದ್ದಾರೆ. ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರುಗಳ ವಿವಿಧ ಸಂಘಟನೆಗಳು ಈ ಪ್ರತಿಭಟನೆ ನಡೆಸಿವೆ.
ಪೆಟ್ರೋಲ್, ಡೀಸೆಲ್ ಇತ್ಯಾದಿ ಇಂಧನ ಬೆಲೆಗಳನ್ನ ಇಳಿಸಬೇಕು ಮತ್ತು ಮೀಟರ್ ದರಗಳನ್ನ ಹೆಚ್ಚಿಸಬೇಕು ಹಲವು ದಿನಗಳಿಂದ ಈ ಸಂಘಟನೆಗಳು ಬೇಡಿಕೆ ಮುಂದಿಟ್ಟಿದ್ದವು. ದೆಹಲಿ ಸರಕಾರ ಇವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದ್ದರೂ ಕ್ಯಾಬ್ ಚಾಲಕರು ತಮ್ಮ ಪ್ರತಿಭಟನೆಯನ್ನ ಕೈಬಿಡದಿರಲು ನಿರ್ಧರಿಸಿದ್ದಾರೆ.
ಮೀಟರ್ ದರ ಏರಿಸುವ ಕ್ಯಾಬ್ ಚಾಲಕರ ಪ್ರಮುಖ ಬೇಡಿಕೆಗೆ ಸ್ಪಂದಿಸಿದ ದೆಹಲಿ ಸರಕಾರ, ದರ ಪರಿಷ್ಕರಣೆ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಲು ಒಂದು ಸಮಿತಿ ರಚಿಸುವುದಾಗಿ ದೆಹಲಿ ಸರಕಾರ ತಿಳಿಸಿತ್ತು. ಆದರೂ ವಿವಿಧ ಚಾಲಕರ ಸಂಘಟನೆಗಳು ಮುಷ್ಕರ ಮುಂದುವರಿಸಿವೆ.

ಪ್ರತಿಭಟನೆ ಹಿಂದೆ ಬಿಎಂಎಸ್ ಸಂಘಟನೆ:
ಭಾರತೀಯ ಜನತಾ ಪಕ್ಷದ ಕಾರ್ಮಿಕರ ಘಟಕವಾದ ಭಾರತೀಯ ಮಜ್ದೂರ್ ಸಂಘದ ಅಂಗವಾಗಿರುವ ದೆಹಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆ ಏಪ್ರಿಲ್ 18 ಮತ್ತು 19 ರಂದು ನಡೆಸಲು ಕರೆ ಕೊಟ್ಟಿತ್ತು. ಕೇಂದ್ರ ಸರಕಾರ ಮತ್ತ ದೆಹಲಿ ಸರಕಾರ ಎರಡೂ ಕೂಡ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೆಹಲಿ ಆಟೋರಿಕ್ಷಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಎನ್ಜಿ ದರದಲ್ಲಿ ಸಬ್ಸಿಡಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನ ಪ್ರಸ್ತಾಪಿಸಿ ತಾನು ಮಾರ್ಚ್ 30ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದೆ. ಆದರೆ, ಅದಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಎರಡು ದಿನ ಪ್ರತಿಭಟನೆಗಳನ್ನೂ ಮಾಡಿದೆವು. ಅದರಿಂದಲೂ ಪ್ರಯೋಜನೆ ಆಗದ ಹಿನ್ನೆಲೆಯಲ್ಲಿ ಈಗ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ರಾಜೇಂದ್ರ ಸೋನಿ ಹೇಳಿದ್ದಾರೆ.

ಮೀಟರ್ ದರ ಏರಿಕೆಗಿಂತ ಇಂಧನ ದರ ಇಳಿಸಬೇಕು ಎಂಬುದು ಮುಖ್ಯ ಬೇಡಿಕೆ:
ಮೀಟರ್ ದರ ಏರಿಸುವುದರಿಂದ ಸಾಮಾನ್ಯ ಜನರ ಜೀವನಕ್ಕೆ ಕಷ್ಟ ಆಗುತ್ತದೆ. ಆದ್ದರಿಂದ ಸರಕಾರ ಇಂಧನ ಬೆಲೆ ಏರಿಕೆ ಮಾಡಬಾರದು, ಸಿಎನ್ಜಿಗೆ ಸಬ್ಸಿಡಿ ಕೊಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಅವರು ತಿಳಿಸಿದ್ದಾರೆ. ಒಂದು ಕಿಲೋ ಸಿಎನ್ಜಿಗೆ 35 ರೂ ಸಬ್ಸಿಡಿ ಕೊಡಬೇಕು ಎಂಬುದು ಇವರ ಒತ್ತಾಯ.
ತಮ್ಮ ಎರಡು ದಿನಗಳ ಮುಷ್ಕರ ಶಾಂತಿಯುತವಾಗಿ ನಡೆಯುತ್ತದೆ ಎಂದು ಭರವಸೆ ನೀಡಿದ ಅವರು, ಈ ಪ್ರತಿಭಟನೆಗಳಿಗೆ ತಡೆಯೊಡ್ಡಲು ಸರಕಾರದ ಪರ ಇರುವ ಕೆಲ ಶಕ್ತಿಗಳು ಪ್ರಯತ್ನಿಸುತ್ತವೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಎನ್ಡಿಟಿವಿ ತಾಣದಲ್ಲಿ ವರದಿಯಾಗಿದೆ.
ದೆಹಲಿಯಲ್ಲಿ ಒಂದು ಕಿಲೋ ಸಿಎನ್ಜಿ ಸದ್ಯ 71.61 ಕಿಲೋ ಇದೆ. ಬಹುತೇಕ ಅರ್ಧದಷ್ಟು ಸಬ್ಸಿಡಿ ನೀಡಿ ಎಂಬುದು ಚಾಲಕರ ಸಂಘಟನೆಗಳ ಬೇಡಿಕೆ ಆಗಿದೆ.
ಓಲಾ, ಊಬರ್ ಚಾಲಕರ ಅಸಮಾಧಾನ:
ಓಲಾ ಮತ್ತು ಊಬರ್ ಚಾಲಕರ ಸಂಘಗಳು ಈ ಪ್ರತಿಭಟನೆಗೆ ಕೈಜೋಡಿಸಿವೆ. 2015ರಿಂದಲೂ ಓಲಾ ಮತ್ತು ಊಬರ್ ದರಗಳನ್ನ ಏರಿಕೆ ಮಾಡಿಲ್ಲ. ಈ ವಿಚಾರವಾಗಿ ಸರಕಾರದ ಬಳಿ ನಮ್ಮ ಅಳಲನ್ನ ತೋಡಿಕೊಂಡಿದ್ದೇವೆ. ಈ ಏಳು ವರ್ಷದಲ್ಲಿ ಪೆಟ್ರೋಲ್, ಡೀಸಲ್ ಮತ್ತು ಸಿಎನ್ಜಿ ದರಗಳು ಗಗನಕ್ಕೇರಿವೆ ಎಂದು ಸರ್ವೋದಯ ಚಾಲಕರ ಸಂಘದ ಅಧ್ಯಕ್ಷ ಕಮಲಜೀತ್ ಗಿಲ್ ತಿಳಿಸಿದ್ದಾರೆ.
ಬೇರೆ ನಗರಗಳಲ್ಲೂ ಮುಷ್ಕರ:
ದೆಹಲಿಯಲ್ಲಿ ಮಾತ್ರವಲ್ಲ ನಾಳೆ ಬೇರೆ ಕೆಲ ನಗರಗಳಲ್ಲೂ ಚಾಲಕರ ಮುಷ್ಕರ ನಡೆಯುವ ಸಾಧ್ಯತೆ ಇದೆ. ಈ ವಿಚಾರವನ್ನ ಕಮಲಜೀತ್ ಗಿಲ್ ತಿಳಿಸಿದ್ದಾರೆ. ನಮಗೆ ಲಕ್ನೋ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈ ನಗರಗಳ ಓಲಾ ಮತ್ತು ಊಬರ್ ಚಾಲಕರಿಂದ ಬೆಂಬಲಿದೆ. ನಾಳೆ ಅಲ್ಲಿ ಮುಷ್ಕರ ಆರಂಭವಾಗಲಿದೆ ಎಂದು ಸರ್ವೋದಯ ಚಾಲಕರ ಸಂಘದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಚಾಲಕರೂ ಮುಷ್ಕರದಲ್ಲಿಲ್ಲ:
ದೆಹಲಿಯಲ್ಲಿರುವ ಎಲ್ಲಾ ಚಾಲಕರ ಸಂಘಗಳು ಈ ಮುಷ್ಕರದಲ್ಲಿ ತೊಡಗಿಲ್ಲ. ದೆಹಲಿ ಚಾಲಕರ ಕಲ್ಯಾಣ ಸಂಘ ಸೇರಿದಂತೆ ಹಲವು ಚಾಲಕರ ಸಂಘಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ರಾಜಧಾನಿಯಲ್ಲಿ ಕ್ಯಾಬ್ ಮತ್ತು ಆಟೊರಿಕ್ಷಾ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications