ಬಜೆಟ್ ಅಧಿವೇಶನ 2018: ತಿಳಿಯಬೇಕಾದ 6 ಸಂಗತಿ
Recommended Video

ನವದೆಹಲಿ, ಜನವರಿ 29: 'ಸರ್ಕಾರ, ವಿರೋಧ ಪಕ್ಷದ ಎಲ್ಲಾ ಸಲಹೆಗಳನ್ನೂ ಪ್ರಾಮಾಣಿಕವಾಗಿ ಪರಿಶೀಲಿಸಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ವಿರೋಧ ಪಕ್ಷಗಳು ನೀಡುವ ಎಲ್ಲ ರೀತಿಯ ಸಲಹೆಯನ್ನೂ ಸ್ವೀಕರಿಸುವುದಾಗಿ ಅವರು ಹೇಳಿದ್ದಾರೆ.
2019 ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಪೂರ್ಣಾವಧಿ ಬಜೆಟ್ ಇದಾಗಿರುವುದರಿಂದ ಕುತೂಹಲ ಹೆಚ್ಚೇ ಇದೆ. ಅಧಿವೇಶನದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಚರ್ಚೆ ನಡೆಯಲಿದೆ.
ಜೊತೆಗೆ ಮುಸ್ಲಿಂ ಮಹಿಳೆಯರಿಗೆ (ಮದುವೆ ಹಕ್ಕಿನ ರಕ್ಷಣೆ) ಸಂಬಂಧಿಸಿದ ಮಸೂದೆ, ತ್ರಿವಳಿ ತಲಾಖ್, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ ಸೇರಿದಂತೆ ಸುಮಾರು 28 ಮಸೂದೆಗಳು ಲೋಕಸಭೆಯಲ್ಲಿ ಮತ್ತು ಸುಮಾರು 39ಕ್ಕೂ ಹೆಚ್ಚು ಮಸೂದೆಗಳು ರಾಜ್ಯಸಭೆಯಲ್ಲಿ ಚರ್ಚೆಯಾಗಲಿವೆ.
ಬಜೆಟ್ ಆಧಿವೇಶನದ ಕುರಿತು ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಪ್ರಾಮಾಣಿಕವಾಗಿ ಸಲಹೆ ಸ್ವೀಕರಿಸುತ್ತೇವೆ
ಬಜೆಟ್ ಅಧಿವೇಶನದ ಕುರಿತು ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, 'ಪ್ರತಿಪಕ್ಷಗಳು ನೀಡುವ ಎಲ್ಲ ರೀತಿಯ ಸಲಹೆಯನ್ನೂ ನಾವು ಪ್ರಾಮಾಣಿಕವಾಗಿ ಸ್ವೀಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.'

ಪ್ರತಿಪಕ್ಷಗಳ ಕಣ್ಣು ಯಾವುದರ ಮೇಲೆ?
ಬಜೆಟ್ ಅಧಿವೇಶನಕ್ಕಾಗಿಯೇ ಕಾಯುತ್ತಿರುವ ಪ್ರತಿಪಕ್ಷಗಳು ಇತ್ತೀಚೆಗೆ ಸಂಭವಿಸಿದ ಅತ್ಯಾಚಾರ ಪ್ರಕರಣಗಳು, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ, ನಿರುದ್ಯೋಗ ಸೇರಿದಂತೆ ಹಲವು ವಿಶಯಗಳ ಕುರಿತು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ. ಹಾಗೆಂದು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಹೇಳಿದ್ದಾರೆ.

ಮೊದಲ ಆದ್ಯತೆ ಯಾವುದಕ್ಕೆ?
ಈ ಬಾರಿಯ ಬಜೆಟ್ ನಲ್ಲಿ ಮೊದಲ ಆದ್ತಯೆ ಉದ್ಯೋಗ ಸೃಷ್ಟಿ ಮತ್ತು ಸಣ್ಣ ಉದ್ಯಮಗಳಿಗೆ ನೀಡಲಾಗುತ್ತಿದೆ. ಅಲ್ಲದೆ ಗ್ರಾಮೀಣ ಯೋಜನೆಗಳು ಮತ್ತು ಕೃಷಿ, ಸಣ್ಣ ಕೈಗಾರಿಕೆಗಳನ್ನು ಮೊದಲ ಆದ್ಯತೆಯನ್ನಾಗಿ ಸರ್ಕಾರ ಪರಿಗಣಿಸಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಆರ್ಥಿಕ ಸಮೀಕ್ಷೆ ಬಿಡುಗಡೆ
ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 29 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ. ಈ ಸಮಯದಲ್ಲಿ ಅಂದರೆ ಜ.29 ರಂದು ಸರ್ಕಾರ ಆರ್ಥಿಕ ಸಮೀಕ್ಷೆಯನ್ನೂ ಬಿಡುಗಡೆ ಮಾಡಲಿದೆ. ನಂತರ ಫೆಬ್ರವರಿ 1 ರಂದು ನಡೆಯ ಬಜೆಟ್ ಕುರಿತು ಮಾರ್ಚ್ 5 ರಿಂದ ಏಪ್ರಿಲ್ 6 ವರೆಗೂ ಸಂಸತ್ತಿನಲ್ಲಿ ಸಭೆ ಸೇರಿ ಚರ್ಚಿಸಲಾಗುತ್ತದೆ.

ತ್ರಿವಳಿ ತಲಾಖ್, ಹಿಂದುಳಿದ ವರ್ಗಕ್ಕೆ ಸಾಂವಿಧಾನಿಕ ಸ್ಥಾನಮಾನ
ವಿವಾದಾತ್ಮಕ ತ್ರಿವಳಿ ತಲಾಖ್ ಕುರಿತು ರಾಜ್ಯ ಸಭೆಯಲ್ಲಿರುವ ಮಸೂದೆಯನ್ನು ಈ ಸಂದರ್ಭದಲ್ಲಿ ಮಂಡನೆ ಮಾಡುವ ನಿರೀಕ್ಷೆ ಇದೆ. ಅಲ್ಲದೆ ಇತರೆ ಹಿಂದುಳಿದ ವರ್ಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಕುರಿತೂ ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ. ಈ ಮೂಲಕ ಬಿಜೆಪಿ ಹಿಂದುಳಿದ ವರ್ಗಗಳಿಗೆ ಹತ್ತಿರವಾಗುವ ಪ್ರಯತ್ನ ಮಾಡಿದರೆ ಅಚ್ಚರಿಯಿಲ್ಲ.

ರಾಷ್ಟ್ರಪತಿ ಮಾತಿನೊಂದಿಗೆ ಆಧಿವೇಶನ ಆರಂಭ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿವೇಶನವನ್ನುದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಅಧಿಕೃತ ಚಾಲನೆ ನೀಡಿದ್ದು, ಈಗಾಗಲೇ ಅಧಿವೇಶನ ಆರಂಭವಾಗಿದೆ.












Click it and Unblock the Notifications