ಸಂಪುಟ ವಿಸ್ತರಣೆ: ಆಗಸ್ಟ್ 03ರಂದು ನೂತನ ಸದಸ್ಯರ ಪಟ್ಟಿ ಬಿಡುಗಡೆ ಎಂದ ಬೊಮ್ಮಾಯಿ
ನವದೆಹಲಿ, ಆಗಸ್ಟ್ 02: ರಾಜ್ಯ ಸಚಿವ ಸಂಪುಟ ರಚನೆ ಬುಧವಾರ ನಡೆಯುವುದು ಬಹುತೇಕ ಖಾತ್ರಿಯಾಗಿದೆ, ಮಂಗಳವಾರ ಸಂಜೆ ಬಿಜೆಪಿ ವರಿಷ್ಠರಿಂದ ಸಂಪುಟ ಸದಸ್ಯರ ಅಂತಿಮ ಪಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಸೇರಲಿದೆ.
ಸಂಪುಟ ರಚನೆಗೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ""ಮಂಗಳವಾರ ಸಂಜೆಯೊಳಗೆ ಸಂಪುಟಕ್ಕೆ ಸೇರುವವರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು, ನಡ್ಡಾ ಅವರ ಜತೆ ಸಂಪುಟ ರಚನೆ ಕುರಿತು ಚರ್ಚೆ ಮಾಡಿದ್ದೇವೆ, ಎಷ್ಟು ಜನ ಮಂತ್ರಿಗಳಾಗಬೇಕು ಎನ್ನುವುದನ್ನು ಹೈಕಮಾಂಡ್ ತಿಳಿಸಲಿದೆ. ಬೇರೆ ಬೇರೆ ವಿಂಗಡಣೆ ಮಾಡಿರುವ ಎರಡು ಪಟ್ಟಿಯನ್ನು ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಿಲ್ಲ ಎಲ್ಲರೂ ಬಿಜೆಪಿಯವರೇ ನಾವು ಹೇಳಿದ್ದನ್ನು ಕೇಳಿಸಿಕೊಂಡು ನಾಳೆ ಪಟ್ಟಿ ಬಿಡುಗಡೆ ಮಾಡುತ್ತಾರೆ. ಪ್ರಾದೇಶಿಕತೆ, ಸಮುದಾಯ ಸೇರಿ ಎಲ್ಲವನ್ನೂ ಪರಿಗಣಿಸಿ ಸಂಪುಟ ರಚನೆಯಾಗಲಿದೆ.

ಪಟ್ಟಿ ಬಿಡುಗಡೆಯಾದ ಬಳಿಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜತೆ ಚರ್ಚಿಸಿ ಬಳಿಕ ನೂತನ ಸಚಿವರ ಪ್ರಮಾಣವಚನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಡಿಸಿಎಂ ಹುದ್ದೆ ಸೃಷ್ಟಿ ಕುರಿತು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಿರುವ ಬೊಮ್ಮಾಯಿ, ಸಂಪುಟ ರಚನೆಯ ಇನ್ನಿತರೆ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ನಡ್ಡಾ ಜತೆ ಬೊಮ್ಮಾಯಿ ಜತೆ ಚರ್ಚೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದ್ದರು.
ನಡ್ಡಾ ಜತೆ ಚರ್ಚೆಗೆಂದೇ ಭಾನುವಾರ ದೆಹಲಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಒಂದು ದಿನ ಕಾದು ಸೋಮವಾರ ರಾತ್ರಿ ಭೇಟಿಯಾಗಿದ್ದಾರೆ. ನಡ್ಡಾ ಭೇಟಿಗೂ ಮುನ್ನ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಬೊಮ್ಮಾಯಿ ಭೇಟಿಯಾಗಿ ಸಂಪುಟ ರಚನೆ ಕುರಿತು ಚರ್ಚೆ ನಡೆಸಿದ್ದರು.
ಲಾಬಿ ನಡೆಸುತ್ತಿರುವ ಶಾಸಕರು: ಬೊಮ್ಮಾಯಿ ದೆಹಲಿ ಪ್ರವಾಸದ ಬೆನ್ನಲ್ಲೇ ಸಚಿವ ಆಕಾಂಕ್ಷಿತ ಶಾಸಕರು ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಪ್ರಯತ್ನವನ್ನು ಮಾಡಿದ್ದಾರೆ, ಹಾಗೆಯೇ ತಮ್ಮ ಹೆಸರನ್ನು ಉಲ್ಲೇಖಿಸುವಂತೆ ಮುಖ್ಯಮಂತ್ರಿ ಮೇಲೂ ಒತ್ತಡ ಹೇರಿದ್ದಾರೆ.
ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿಪಿ ಯೋಗೇಶ್ವರ್, ಶಾಸಕಾರದ ಅರವಿಂದ್ ಬೆಲ್ಲದ್ ಸೇರಿ ಇತರರು ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಸಂಪುಟದಲ್ಲಿ ಅವಕಾಶ ಗಿಟ್ಟಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ರಾಜ್ಯದಲ್ಲಿ ಒಂದೆಡೆ ಕೊರೋನಾ ಮತ್ತೊಂದೆಡೆ ಪ್ರವಾಹ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದೇ ನೂತನ ಸಚಿವ ಪಟ್ಟಿ ಫೈನಲ್ ಮಾಡಿಕೊಂಡು ಹೋಗಲು ಬೊಮ್ಮಾಯಿ ತೀರ್ಮಾನಿಸಿದ್ದಾರೆ.
ಈಗಾಗಲೇ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಸಿಎಂ ಆಯ್ಕೆಗೆ ರಾಜ್ಯಕ್ಕೆ ವೀಕ್ಷಕರಾಗಿ ಬಂದಿದ್ದ ಧರ್ಮೆಂದ್ರ ಪ್ರಧಾನ್ ಅವರನ್ನ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇದೀಗ ಅಂತಿಮವಾಗಿ ನಡ್ಡಾ ಜೊತೆ ಚರ್ಚೆಗಳು ನಡೆದಿದ್ದು, ಯಾರಿಗೆ ಮಂತ್ರಿಭಾಗ್ಯ ಸಿಗುತ್ತೋ ಎನ್ನುವುದು ಕುತೂಹಲ ಮೂಡಿಸಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮಂಗಳವಾರ ಸಂಜೆ ಇಲ್ಲ ಬುಧವಾರ ಸಚಿವ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ನೂತನ ಸಂಪುಟದಲ್ಲಿ ಮಂತ್ರಿಸ್ಥಾನ ಪಡೆದುಕೊಳ್ಳಲು ಬಿಜೆಪಿಯ ಅನೇಕ ಶಾಸಕ(BJP MLAs)ರು ಮತ್ತು ಮಾಜಿ ಸಚಿವರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಈಗಾಗಲೇ ಅನೇಕರು ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಕೆಲವರು ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಯಾರ್ಯಾರಿಗೆ ಮಂತ್ರಿಗಿರಿ ಭಾಗ್ಯ ಸಿಗುತ್ತದೆ ಎಂಬುದು ಕೂತಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಇದೇ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಿ 2019ರ ಜುಲೈ 26ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪ ಅವರು, ಎರಡು ವರ್ಷ ಪೂರ್ಣಗೊಳಿಸಿ ಅಧಿಕಾರ ಸ್ವೀಕರಿಸಿದ ದಿನವೇ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ಮಾಡಿದ್ದ ಬಿಎಸ್ವೈ, ಭಾಷಣದುದ್ದಕ್ಕೂ ತಮ್ಮ ರಾಜಕೀಯ ಜೀವನವನ್ನು ನೆನೆದು ಭಾವುಕರಾಗಿದ್ದರು.












Click it and Unblock the Notifications