ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು ದೇಣಿಗೆ ನೀಡಿದ ಗೌತಮ್ ಗಂಭೀರ್
ನವದೆಹಲಿ, ಜನವರಿ 21: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ವತಿಯಿಂದ ನಡೆದಿರುವ ದೇಣಿಗೆ ಸಂಗ್ರಹ ಕಾರ್ಯಕ್ಕೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಒಂದು ಕೋಟಿ ರು ದೇಣಿಗೆ ನೀಡಿದ್ದಾರೆ. ಮಾಜಿ ಕ್ರಿಕೆಟರ್ ಕಮ್ ರಾಜಕಾರಣಿ ಗೌತಮ್ ಗಂಭೀರ್ ಅವರು ತಮ್ಮ ಕೊಡುಗೆ ಬಗ್ಗೆ ಮಾತನಾಡಿ, ರಾಮ ಮಂದಿರ ನಿರ್ಮಾಣ ಎಂಬುದು ಭಾರತೀಯರ ಕನಸಾಗಿತ್ತು ಎಂದಿದ್ದಾರೆ.
''ಕೊನೆಗೂ ರಾಮ ಜನ್ಮ ಭೂಮಿ ವಿವಾದ ಬಗೆ ಹರಿದಿದ್ದು, ಭವ್ಯವಾದ ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗಲಿದೆ. ಭಾರತದ ಐಕ್ಯತೆ ಹಾಗೂ ಸಮಗ್ರತೆಯ ಪ್ರತೀಕವಾದ ಈ ಮಂದಿರಕ್ಕೆ ನಮ್ಮ ಕೈಲಾಗುವ ಸಣ್ಣ ಸಹಾಯವನ್ನು ನೀಡಬೇಕಿದೆ'' ಎಂದು ಗಂಭೀರ್ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಕೂಪರ್ ಸಿಸ್ಟಂ ಮೂಲಕ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹವಾಗುತ್ತಿದೆ. 10 ರು, 100 ರು ಹಾಗೂ 1000 ರು ಗಳ ಕೂಪನ್ ಗಳ ಮೂಲಕ ಮನೆ ಮನೆಗೂ ತೆರಳಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಚಾಹಲ್ ಹೇಳಿದರು. ದೊಡ್ಡ ಮೊತ್ತದ ದೇಣಿಗೆಗಳನ್ನು ಚೆಕ್ ಮೂಲಕ್ ಸಂಗ್ರಹಿಸಲಾಗುತ್ತಿದೆ. ವಿಶ್ವಹಿಂದೂಪರಿಷತ್, ಆರೆಸ್ಸೆಸ್ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಫೆಬ್ರವರಿ 1ರಿಂದ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.












Click it and Unblock the Notifications