ಅಜಂ ಖಾನ್ ತಲೆಯನ್ನು ಸಂಸತ್ತಿನ ಬಾಗಿಲಲ್ಲಿ ನೇತುಹಾಕುತ್ತೇನೆಂದ ಬಿಜೆಪಿ ನಾಯಕ!
ನವದೆಹಲಿ, ಜುಲೈ 26: ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಬಿಜೆಪಿ ಸಂಸದೆ ರಮಾ ದೇವಿ ಅವರ ಬಗ್ಗೆ ಅಸಭ್ಯವಾಗಿ ಮಾತನಾಡಿದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರೊಬ್ಬರು, 'ಅಜಂ ಖಾನ್ ತಲೆಯನ್ನು ಕಡಿದು, ಪಾರ್ಲಿಮೆಂಟಿನ ಬಾಗಿಲಿನಲ್ಲಿ ನೇತುಹಾಕಬೇಕು' ಎಂದಿದ್ದಾರೆ.
ಅಜಂ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆಗೆ ವಿವಾದಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಆಫ್ತಾಬ್ ಅಡ್ವಾಣಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
"ಮಹಿಳಾ ಸಂಸದರಾದ ರಮಾ ದೇವಿ ಅವರ ಬಗ್ಗೆ ಅಜಂ ಖಾನ್ ಆಡಿದ ಮಾತುಗಳು ಅಕ್ಷಮ್ಯ. ನಾವು ಅದನ್ನು ಕಟುವಾಗಿ ವಿರೋಧಿಸುತ್ತೇವೆ. ಆತನ ತಲೆಯನ್ನು ಕಡಿದು, ಸಂಸತ್ತಿನ ಬಾಗಿಲಿನಲ್ಲಿ ನೇತುಹಾಕುವಂತೆ ಭಾರತ ಸರ್ಕಾರವನ್ನು ನಾನು ಮನವಿ ಮಾಡುತ್ತೇನೆ. ಹೀಗೆ ಮಾಡುವುದರಿಂದ ಮಹಿಳೆಯರನ್ನು ಅಗೌರವದಿಂದ ಕಾಣುವವರಿಗೆ ಯಾವ ರೀತಿಯ ಶಿಕ್ಷೆ ಎಂಬುದು ಇಂಥವರಿಗೆ ತಿಳಿಯುತ್ತದೆ" ಎಂದು ಅಡ್ವಾಣಿ ಹೇಳಿದರು.

"ಮಹಿಳೆಯರನ್ನು ಅಗೌರವದಿಂದ ಕಾಣುವವರನ್ನು ಕ್ಷಮಿಸಬಾರದು. ಕ್ಷಮಿಸಿದರೆ ಅಂಥ ಘಟನೆಗಳು ನಿಲ್ಲುವುದಿಲ್ಲ. ಮೊದಲಿಗೆ ಜಯಪ್ರಧಾ ಅವರನ್ನು ಅಗೌರವದಿಂದ ನಡೆಸಿಕೊಂಡರು. ಈಗ ರಮಾ ದೇವಿ ಅವರ ಬಗ್ಗೆ ಮಾತನಾಡಿದರು. ಈ ಮುದುಕನಿಗೆ ಹುಚ್ಚು ಹಿಡಿದಿರುವಂತಿದೆ. ಆತನನ್ನು ಹುಚ್ಚು ನಾಯಿಯನ್ನು ಕೊಂದಂತೆ ಕೊಲ್ಲಬೇಕು. ನಮ್ಮ ದೇಶಕ್ಕೆ ಇಂಥವರು ಹಾನಿಕರ" ಎಂದು ಉದ್ವೇಗದಿಂದ ಅಡ್ವಾಣಿ ಹೇಳಿದ ಮಾತು ಇದೀಗ ವಿವಾದ ಸೃಷ್ಟಿಸಿದೆ. 'ನಾಲಿಗೆ ಬಿಗಿಯಾಗಿರಲಿ' ಎಂದು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡುತ್ತಲೇ ಇದ್ದರೂ ಬಿಜೆಪಿ ನಾಯಕರು ಇಂಥ ಹೇಳಿಕೆ ನೀಡುವುದು ಮಾತ್ರ ನಿಂತಿಲ್ಲ!
ಗುರುವಾರ ತ್ರಿವಳಿ ತಲಾಖ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಅಜಂ ಖಾನ್, ಮುಕ್ತಾರ್ ಅಬ್ಬಾಸ್ ನಖ್ವಿ ಅವರನ್ನು ಚರ್ಚೆಗೆ ಎಳೆಯಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಸ್ಪೀಕರ್ ಕುರ್ಚಿಯಲ್ಲಿದ್ದ ಬಿಹಾರದ ಶಿಯೋಹರ್ ಕ್ಷೇತ್ರದ ಬಿಜೆಪಿ ಸಂಸದೆ ರಮಾ ದೇವಿ, 'ಎಲ್ಲೆಲ್ಲೋ ನೋಡಬೇಡಿ, ಸ್ಪೀಕರ್ ಕುರ್ಚಿಯನ್ನು ನೋಡಿ ಮಾತನಾಡಿ ಎಂದರು.' ಆಗ ತಕ್ಷಣವೇ, 'ನೀವಂದ್ರೆ ನನಗೆ ಇಷ್ಟ, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದು ನನಗೆ ಅನ್ನಿಸುತ್ತದೆ' ಎಂಬರ್ಥದಲ್ಲಿ ಅಜಂ ಖಾನ್ ಮಾತನಾಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಜಂ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆ ಏನು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications