ನರೇಂದ್ರ ಮೋದಿ ಜತೆ ಚಹಾ ಸಂವಾದಕ್ಕೆ ಚಾಲನೆ
ನವದೆಹಲಿ, ಫೆ.4: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯುವಕರಾಗಿದ್ದಾಗ ಹೊಟ್ಟೆಪಾಡಿಗೆಂದು ಚಹಾ ಮಾರಾಟ ಮಾಡಿದ್ದನ್ನು ಕಾಂಗ್ರೆಸ್ ಲೇವಡಿ ಮಾಡಿತ್ತು. ಈಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇದೇ ಚಹಾ ಆಸ್ತ್ರ ಪ್ರಯೋಗಕ್ಕೆ ನಾಂದಿ ಹಾಡಿದೆ.
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು 'ಚಾಯ್ ಪೆ ಚರ್ಚಾ" ಚಹಾದೊಂದಿಗೆ ಸಂವಾದ' ಕಾರ್ಯಕ್ರಮಕ್ಕೆ ಮಂಗಳವರ ಚಾಲನೆ ನೀಡಿದ್ದಾರೆ. ದೇಶದ 1000ಕ್ಕೂ ಅಧಿಕ ಭಾಗಗಳಲ್ಲಿ ಈ ರೀತಿ ವಿಶಿಷ್ಟ ಸಂವಾದ ಕಾರ್ಯಕ್ರಮ ನಡೆಯಲಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚಹಾ ಅಂಗಡಿಯವರು, ಸಾರ್ವಜನಿಕರ ಜತೆ ಚಹಾದೊಡನೆ ಕಷ್ಟ ಸುಖ ಹಂಚಿಕೊಳ್ಳಲಿದ್ದಾರೆ.
ಫೆ.15ರಿಂದ ಮೋದಿ ಅವರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 27 ರಾಜ್ಯಗಳ 1000ಕ್ಕೂ ಅಧಿಕ ಚಹಾ ಅಂಗಡಿಗಳನ್ನು ಈ ಸಂವಾದಕ್ಕೆ ಗುರುತಿಸಲಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.ವಿಷಯ ಹಂಚಿಕೆ, ಪ್ರಶ್ನೋತ್ತರ ಹಾಗೂ ಸಲಹೆ ಸೂಚನೆ ಪಡೆಯಲು ಈ ಸಂವಾದವನ್ನು ಬಳಸಿಕೊಳ್ಳಲಾಗುತ್ತಿದೆ. ಫೆ.12 ರಂದು ಮೊದಲ ಹಂತದ ಕಾರ್ಯಕ್ರಮ ಸಂಜೆ 6 ರಿಂದ 8 ರ ಅವಧಿಯಲ್ಲಿ ನಡೆಸಲು ನಿಗದಿಯಾಗಿದೆ.

ಡಿಟಿಎಚ್, ಉಪಗ್ರಹ, ಇಂಟರ್ನೆಟ್, ಮೊಬೈಲ್ ಫೋನ್, ಸಾಮಾಜಿಕ ಜಾಲ ತಾಣ ಮುಂತಾದ ಲಭ್ಯ ಸಂವಹನ ಮಾಧ್ಯಮಗಳನ್ನು ಬಳಸಿ ಜನರ ಜತೆ ಸಂವಾದ ನಡೆಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.
ಬೆಂಗಳೂರಿನ ಚಹಾ ಅಂಗಡಿಯಲ್ಲಿ ಹಿರಿಯ ನಾಯಕ ವೆಂಕಯ್ಯ ನಾಯ್ಡು, ಆರ್ ಅಶೋಕ್, ಜಗದೀಶ್ ಶೆಟ್ಟರ್,ಸದಾನಂದ ಗೌಡ ಮುಂತಾದ ನಾಯಕರು ಕಾಣಿಸಿಕೊಳ್ಳಲಿದ್ದಾರೆ.
ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ಮಣಿಶಂಕರ್ ಅಯ್ಯರ್ AICC ಸಮಾವೇಶದಲ್ಲಿ 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದು ಬಿಟ್ಟ ಬಾಣ ಈಗ ತಿರುಗುಬಾಣವಾಗಿ ಕಾಡತೊಡಗಿದೆ.[ಮೋದಿ ಚಹಾ ಸಂವಾದ]












Click it and Unblock the Notifications