ಚಳಿಗಾಲದ ಅಧಿವೇಶನಕ್ಕೆ ನೋಟ್ ಬ್ಯಾನ್ ಬಿಸಿ
ಬುಧವಾರದಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಕಲಾಪ ಮುಂದೂಡಲಾಗಿದ್ದು, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಎನ್ ಡಿ ಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು
ನವೆದೆಹಲಿ, ನವೆಂಬರ್, 16: ಬುಧವಾರ ಆರಂಭವಾದ ಸಂಸತ್ ಅಧಿವೇಶನದ ಮೊದಲ ದಿನದ ಲೋಕಸಭೆ ಕಲಾಪದಲ್ಲಿ ದಿವಂಗತ ಮಾಜಿ ಲೋಕಸಭಾ ಸದಸ್ಯರಿಗೆ, ಗಣ್ಯರಿಗೆ, ಸಂತಾಪ ಸೂಚಿಸಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಅಧಿವೇಶನಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಪತಿ ಭವನದವರೆಗೆ ರ್ಯಾಲಿ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದವು. [ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?]
ರ್ಯಾಲಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡರು ಸಹ ಭಾಗವಹಿಸಿದ್ದರು. ಎಎಪಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರು ರ್ಯಾಲಿಯಿಂದ ದೂರ ಉಳಿದಿದ್ದರು.

ಕಾಂಗ್ರೆಸ್, ತೃಣಮೂಲ್ ಕಾಂಗ್ರೆಸ್, ಸಮಜಾವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ ಸೇರಿದಂತೆ ಎಲ್ಲಾ ಪಕ್ಷಗಳು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿವೆ. ಸರ್ಜಿಕಲ್ ಸ್ಟ್ರೈಕ್ ದಾಳಿ ಬಗ್ಗೆಯೂ ಸಹ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯಸಭೆ ಕಾಲಪದಲ್ಲಿ ನೋಟ್ ಬ್ಯಾನ್ ಪ್ರಸ್ತಾಪ
ರಾಜ್ಯ ಸಭೆ ಅಧಿವೇಶನ ಬುಧವಾರ 2 ಗಂಟೆಗೆ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಒಕ್ಕೊರಲಿನಿಂದ ಮುಗಿಬಿದ್ದ ಪ್ರತಿಪಕ್ಷಗಳು, ನೋಟ್ ಬ್ಯಾನ್ ನಿಷೇಧದ ಕುರಿತು ಬಿಜೆಪಿ ಮಿತ್ರರಿಗೆ ಮೊದಲೇ ಮಾಹಿತಿ ತಿಳಿದಿತ್ತು ಎಂದು ಆರೋಪಿಸಿದರು.
ಕಳೆದ ಏಪ್ರಿಲ್ ನಿಂದ ಒಂದು ಕೋಟಿಗೂ ಅಧಿಕ ಮೊತ್ತದ ಚಿನ್ನ ಖರೀದಿ ಮತ್ತು ವಿದೇಶಿ ವಿನಿಮಯ ಮಾಡಿರುವವವ ಹೆಸರುಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು.
ಚರ್ಚೆ ಆರಂಭವಾಗುತ್ತಿದ್ದಂತೆಯೇ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ವ್ಯಾಪರಿಗಳು ಜನ ಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಆದ್ದರಿಂದ ನೋಟ್ ಬ್ಯಾನ್ ನಿಷೇಧವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಲವು ಬಿಜೆಪಿ ನಾಯಕರು ನೋಟ್ ಬ್ಯಾನ್ ನಿಷೇಧ ಕೋಟ್ಯಂತರ ರೂ. ಹಣವನ್ನು ಬ್ಯಾಂಕ್ ಗಳಿಗೆ ತುಂಬಿಸಿದ್ದಾರೆ ಎಂದು ಅವರು ಆರೋಪಿಸಿದರು.
ಸಭೆಯಲ್ಲಿ ಚರ್ಚೆ ವೇಳೆ ಮಾತನಾಡಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನ ಮಂತ್ರಿ ಅವರು ಸಭೆಯಲ್ಲಿ ಭಾಗವಹಿಸಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದನಿ ಗೂಡಿಸಿದ ರಾಜ್ಯಸಭೆ ಕಾಂಗ್ರೆಸ್ ನಾಯಕ ಗುಲಾಂ ನಬೀಂ ಅಜಾದ್ ಅವರು ಮೋದಿ ಅವರು ಕಡೆಯಪಕ್ಷ ಪ್ರತಿಪಕ್ಷಗಳ ಪ್ರತಿಕ್ರಿಯೆಗಳನ್ನು ಆಲಿಸಲಿ ಎಂದು ಹೇಳಿದರು.
ಕಪ್ಪು ಹಣ ನಿರ್ಮೂಲನೆಗಾಗಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಸರ್ಕಾರ ನಿಷೇಧಿಸಿ ಬದಲಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿದೆ ಇದರಿಂದ ಕಪ್ಪು ಹಣ ಸಂಗ್ರಹಿಸುವುದು ಮತ್ತಷ್ಟು ಸುಲಭವಾಗಿದೆ ಎಂದು ಆನಂದ್ ಶರ್ಮಾ ಆರೋಪಿಸಿದರು.
ದಿನನಿತ್ಯದ ಖರ್ಚಿಗೆ ಹಣವಿಲ್ಲದೆ ಹಲವು ಮಂದಿ ಇಲ್ಲಿ ಬ್ಯಾಂಕ್ ಗಳ ಮುಂದೆ ಕ್ಯೂಕಟ್ಟಿ ನಿಂತಿದ್ದರು. ಮೋದಿ ಮಾತ್ರ ಜಪಾನ್ ಪ್ರವಾಸಕ್ಕೆ ಹೋಗಿ ಬುಲೆಟ್ ಟ್ರೈನ್ ನಲ್ಲಿ ಹಾಯಾಗಿ ವಿಹರಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.












Click it and Unblock the Notifications