ಚುನಾಯಿತ ನಾಯಕರದ್ದೇ ಈ ಸ್ಥಿತಿಯಾದರೆ, ರಾಜ್ಯದಲ್ಲಿ ಕಾನೂನಿನ ಕಥೆಯೇನು; ಖರ್ಗೆ
ನವದೆಹಲಿ, ಮಾರ್ಚ್ 24: ವಿಶೇಷ ಸಶಸ್ತ್ರ ಪೊಲೀಸ್ ಮಸೂದೆ ವಿಚಾರವಾಗಿ ಬಿಹಾರ ವಿಧಾನಸಭೆಯಲ್ಲಿ ಉಂಟಾದ ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ.
ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ದೂರಿರುವ ಅವರು, ಚುನಾಯಿತ ನಾಯಕರದ್ದೇ ಈ ಸ್ಥಿತಿಯಾದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.
ಬಿಹಾರ ವಿಧಾನಸಭೆಯೊಳಗೆ ಗದ್ದಲ: ಮಹಿಳಾ ಶಾಸಕಿಯನ್ನು ಹೊರಹಾಕಿದ ಭದ್ರತಾ ಸಿಬ್ಬಂದಿ
ಮಂಗಳವಾರ ಬಿಹಾರದ ವಿಧಾನಸಭೆಯಲ್ಲಿ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಮಸೂದೆ 2021 ಕುರಿತಂತೆ ಗದ್ದಲ ಏರ್ಪಟ್ಟಿತ್ತು. ಈ ಸಂದರ್ಭ ಪ್ರತಿಪಕ್ಷದ ಶಾಸಕಿಯೊಬ್ಬರನ್ನು ಭದ್ರತಾ ಸಿಬ್ಬಂದಿ ಹೊರಹಾಕಿರುವ ಘಟನೆ ನಡೆದಿತ್ತು. ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ಸದನದ ತಮ್ಮ ಕೊಠಡಿಯಿಂದ ಹೊರಹೋಗುವುದನ್ನು ವಿರೋಧ ಪಕ್ಷದವರು ತಡೆಯಲು ಮುಂದಾದಾಗ ಈ ಸಂಗತಿ ಜರುಗಿತ್ತು.
"ಬಿಹಾರದಲ್ಲಿ ನಡೆದ ಈ ಸಂಗತಿ ಖಂಡನಾರ್ಹವಾಗಿದೆ. ಶಾಸಕಿಯೊಬ್ಬರನ್ನು ಭದ್ರತಾ ಸಿಬ್ಬಂದಿ ಹೀಗೆ ನಡೆಸಿಕೊಳ್ಳುವುದನ್ನು ನಾನು ನೋಡಿರಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವವನ್ನೇ ಕೊಲ್ಲುತ್ತಿದೆ" ಎಂದು ದೂರಿದ್ದಾರೆ.