ಸೋಲಿನಿಂದ ರಾಹುಲ್ ಗಾಂಧಿ ಪಲಾಯನ: ಒಪ್ಪಿಕೊಂಡ ಕಾಂಗ್ರೆಸ್
ನವದೆಹಲಿ, ಅಕ್ಟೋಬರ್ 9: ಕಾಂಗ್ರೆಸ್ ಪಕ್ಷದೊಳಗಿನ ಬಿಕ್ಕಟ್ಟಿನ ಕಾರಣ ಅದು ಮುಂಬರುವ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಸಾಧ್ಯತೆಗಳನ್ನು ಕಳೆದುಕೊಂಡಿದೆ ಎಂದು ಪಕ್ಷದ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಸಲ್ಮಾನ್ ಖುರ್ಷಿದ್, ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಭವಿಷ್ಯದ ಬಗ್ಗೆ ಕೂಡ ಖಾತ್ರಿಯಿಲ್ಲ ಎಂದಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಪ್ರಕಟವಾದ ಲೋಕಸಭೆ ಚುನಾವಣೆಯ ಫಲಿತಾಂಶದ ಸೋಲಿನ ಕುರಿತು ಅವಲೋಕನ ಮಾಡಲು ತುಂಬಾ ವಿಳಂಬ ಮಾಡಿರುವುದರಿಂದ ಪಕ್ಷದೊಳಗೆ ತಿಕ್ಕಾಟ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
542 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 303 ಸ್ಥಾನಗಳೊಂದಿಗೆ ಸುಲಭವಾಗಿ ಅಧಿಕಾರ ಪಡೆದುಕೊಂಡಿತ್ತು.

ಅಕ್ಟೋಬರ್ ಬಳಿಕ ಹೊಸ ಅಧ್ಯಕ್ಷ
ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿ ಕಿರಿಕಿರಿಯುಂಟಾಗಿ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆಗಸ್ಟ್ನಲ್ಲಿ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅಕ್ಟೋಬರ್ನ ವಿಧಾನಸಭೆ ಚುನಾವಣೆಗಳ ಬಳಿಕ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಲಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

ಪಕ್ಷದಲ್ಲಿ ನಿರ್ವಾತ ಸ್ಥಿತಿ
'ನಾವು ಏಕೆ ಈ ರೀತಿ ಸೋಲು ಅನುಭವಿಸಿದೆವು ಎಂಬ ಬಗ್ಗೆ ನಾವೆಲ್ಲರೂ ಒಟ್ಟಿಗೆ ಕುಳಿತು ವಿಶ್ಲೇಷಣೆ ಮಾಡಿದ್ದೇ ಇಲ್ಲ. ನಮ್ಮ ಅತಿ ದೊಡ್ಡ ಸಮಸ್ಯೆಯೇನೆಂದರೆ ನಮ್ಮ ನಾಯಕ ಅಧಿಕಾರ ಬಿಟ್ಟು ಹೊರನಡೆದಿದ್ದು. ಈಗ ಪಕ್ಷದಲ್ಲಿ ನಿರ್ವಾತದ ಸ್ಥಿತಿ ಉಂಟಾಗಿದೆ. ಸೋನಿಯಾ ಗಾಂಧಿ ಮತ್ತೆ ನೇತೃತ್ವ ವಹಿಸಿಕೊಂಡರೂ ಅವರು ತಮ್ಮನ್ನು ಈ ಅಂತರವನ್ನು ತುಂಬುವ ಪರ್ಯಾಯ ಆಯ್ಕೆಯನ್ನಾಗಿಯಷ್ಟೇ ಭಾವಿಸಿಕೊಂಡಿದ್ದಾರೆ. ಅದು ಹಾಗೆ ಆಗಬಾರದಿತ್ತು ಎಂದು ನಾನು ಬಯಸಿದ್ದೇನೆ' ಎಂದಿದ್ದಾರೆ.

ರಾಹುಲ್ ರಾಜೀನಾಮೆ ಬಯಸಿರಲಿಲ್ಲ
'ರಾಹುಲ್ ಗಾಂಧಿ ರಾಜೀನಾಮೆ ನೀಡುವುದನ್ನು ನಾನು ಬಯಸಿರಲಿಲ್ಲ. ಅವರು ಅಧ್ಯಕ್ಷರಾಗಿಯೇ ಇರಬೇಕಿತ್ತು. ಪಕ್ಷದ ಕಾರ್ಯಕರ್ತರು ಕೂಡ ಅವರು ಅಲ್ಲಿಯೇ ಇದ್ದು ಪಕ್ಷವನ್ನು ಮುನ್ನಡೆಸುವುದನ್ನು ಬಯಸಿದ್ದರು' ಎಂದಿರುವ ಖುರ್ಷಿದ್, ತಮ್ಮನ್ನು ತಾತ್ಕಾಲಿಕ ವ್ಯವಸ್ಥೆಯೆಂಬಂತೆ ಸೋನಿಯಾ ಗಾಂಧಿ ಅಂದುಕೊಂಡಿರುವುದು ಪಕ್ಷದ ಸ್ಥಿತಿಯನ್ನು ಮತ್ತಷ್ಟು ಹೀನಾಯಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ವಿದೇಶ ಪ್ರಯಾಣ
ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಅಮೇಥಿಯಲ್ಲಿಯೇ ರಾಹುಲ್ ಗಾಂಧಿ ಸೋಲಿನ ಕಹಿ ಅನುಭವಿಸಿದ್ದರು. ಪಕ್ಷದ ಹೀನಾಯ ಪ್ರದರ್ಶನದ ಬೆನ್ನಲ್ಲೇ ಅವರು ಅದಕ್ಕೆ ನೈತಿಕ ಹೊಣೆ ಹೊತ್ತು ಅಧ್ಯಕ್ಷಗಿರಿ ತ್ಯಜಿಸಿದ್ದರು. ಈಗ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಸಮೀಪದಲ್ಲಿರುವಾಗಲೇ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇದೆಲ್ಲವೂ ಪಕ್ಷವನ್ನು ಮರುಸಂಘಟಿಸುವ ಪ್ರಯತ್ನದಿಂದ ರಾಹುಲ್ ಗಾಂಧಿ ವಿಮುಖರಾಗಿರುವುದನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications