ರಾಹುಲ್ ಸೋಲಿನ ದನಿ- ತೃತೀಯ ರಂಗಕ್ಕೆ ಹೊಡೆತ
ನವದೆಹಲಿ,ಮೇ2: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಾಲಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವುದರ ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಬಿಂಬಿಸಿರುವುದರ ನಡುವೆಯೇ AICC ಉಪಾಧ್ಯಕ್ಷ ರಾಹುಲ್ ಅವರು ಬಹುಪಕ್ಷಗಳ ತೇಪೆ ಸರ್ಕಾರ ರಚಿಸುವುದಕ್ಕಿಂತ, ಪ್ರತಿಪಕ್ಷದ ಸ್ಥಾನ ಅಲಂಕರಿಸುವುದೇ ಲೇಸು. ಈ ಹಿಂದೆಯೂ ಇಂತಹ ಮೈತ್ರಿ ಸರಕಾರಗಳು ಫಲಪ್ರದವಾಗಿಲ್ಲ. ಸದಾಕಾಲ ಅಸ್ಥಿರತೆಯಲ್ಲೇ ಉಳಿದಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ತೃತೀಯ ರಂಗ ಅಥವಾ ಒಕ್ಕೂಟ ರಂಗ ಸರಕಾರದ ರಚನೆಯನ್ನು ತಮ್ಮ ಪಕ್ಷವು ಮುಕ್ತವಾಗಿರಿಸಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಗಳು ಪಕ್ಷದ ಉನ್ನತ ನಾಯಕತ್ವಕ್ಕೆ ಅಸಮಾಧಾನ ಉಂಟುಮಾಡಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖುರ್ಷಿದ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಸಹ ಪಡೆದಿದ್ದರು.
ಇದೀಗ ರಾಹುಲ್ ಗಾಂಧಿಯ ಹೊಸ ವರಸೆ ನೋಡಿದರೆ ಕಾಂಗ್ರೆಸ್ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬರುವ ತೃತೀಯ ರಂಗದ ಕನಸಿಗೆ ಭಾರಿ ಹೊಡೆತ ಬಿದ್ದಂತಾಗಿದೆ. (ತೃತೀಯ ರಂಗ ಐಡಿಯಾ ಮಾಡ್ಯಾರಾ: ವರ್ಷಕ್ಕೊಬ್ಬ ಪಿಎಂ )
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗೆ ಕೈಹಾಕಲು ನಿರ್ಧರಿಸಿದ್ದಾರೆ. ಪಕ್ಷವನ್ನು ಸಮಗ್ರವಾಗಿ ಪುನರ್ ಸಂಘಟಿಸಲು ಒಲವು ತೋರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಪಕ್ಷದ 'ಬಾತ್ಮಿದಾರರ' ಪ್ರಕಾರ ಕಾಂಗ್ರೆಸ್ ಈ ಬಾರಿ ಮೂರಂಕಿ ಗಡಿ ದಾಟುವುದಿಲ್ಲ ಒಂದು ಒಂದು ತಂಡ ಹೇಳುತ್ತಿದ್ದರೆ ಮತ್ತೊಂದು ತಂಡ ಇಲ್ಲಾ, ಆಷ್ಟೇನೂ ಕಳಪೆಯಿಲ್ಲ. 140 ಸೀಟು ದಾಟುತ್ತದೆ ಅನ್ನುತ್ತಿದೆ. ಏನೇ ಆದರೂ 2009 ಚುನಾವಣೆಯಲ್ಲಿ ಗಳಿಸಿದ್ದ 206 ಸೀಟನ್ನು ದಾಟುವುದು ದುಸ್ತರವೆನ್ನುತ್ತಿದೆ ಮತ್ತೊಂದು ವರ್ಗ. ಯಾವುದಕ್ಕೇ ಆಗಲಿ, ಮೇ 16ರವರೆಗೂ ಕಾದುನೋಡೋಣ, ಅಲ್ವಾ!?












Click it and Unblock the Notifications