'ಮುಂಬರುವ ಗುಜರಾತ್ ಚುನಾವಣೆಗೂ ನಮ್ಮ ಮೇಲಿನ ದಾಳಿಗೂ ಸಂಬಂಧ': ಕೇಜ್ರಿವಾಲ್
ನವದೆಹಲಿ ಆಗಸ್ಟ್ 27: ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ದೆಹಲಿ ಸಚಿವರ ವಿರುದ್ಧ ತನಿಖಾ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ದಾಳಿಗಳು ಗುಜರಾತ್ ಚುನಾವಣೆಗೆ ಸಂಬಂಧಿಸಿವೆ ಎಂದು ಆರೋಪಿಸಿದರು.
ಯಾವುದೇ ಆಪ್ ಶಾಸಕರು ಪಕ್ಷಾಂತರ ಮಾಡಿಲ್ಲ ಎಂದು ಸಾಬೀತುಪಡಿಸಲು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ತರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. "ಗುಜರಾತ್ನಲ್ಲಿ ಬಿಜೆಪಿಯ ಕೋಟೆ ಅಪಾಯದಲ್ಲಿದೆ ಮತ್ತು ಈಗ ಕುಸಿಯುತ್ತಿದೆ. ಗುಜರಾತ್ನಲ್ಲಿ ಮುಂಬರುವ ಚುನಾವಣೆಗಳಿಂದಾಗಿ ನಮ್ಮ ಮೇಲೆ ಇಡಿ, ಸಿಬಿಐ ದಾಳಿಗಳು ಮಾಡಿಸುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಡೆಪ್ಯೂಟಿ ಸಿಎಂ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದಾಗ ಒಂದು ಪೈಸೆಯೂ ಸಿಗಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. "ಪಟ್ಟಭದ್ರ ಹಿತಾಸಕ್ತಿಗಳು ಈಗ ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿವೆ. ಅವರು ಮಣಿಪುರ, ಗೋವಾ, ಮಧ್ಯಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ ಸರ್ಕಾರಗಳನ್ನು ಉರುಳಿಸಿದ್ದಾರೆ. ನಗರದಲ್ಲಿ ಸರಣಿ ಹಂತಕನೊಬ್ಬ ಅಲೆದಾಡುತ್ತಿದ್ದಾನೆ" ಎಂದು ಕೇಜ್ರಿವಾಲ್ ಸದನದಲ್ಲಿ ಹೇಳಿದರು.
ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ದೆಹಲಿ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಜಿಎಸ್ಟಿ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಮೂಲಕ ಸಂಗ್ರಹಿಸಿದ ಹಣವನ್ನು ಶಾಸಕರನ್ನು ಬೇಟೆಯಾಡಲು ಬಳಸುತ್ತಿದೆ ಎಂದು ಆರೋಪಿಸಿದರು. ದೇಶಾದ್ಯಂತ ಬಿಜೆಪಿ ಇದುವರೆಗೆ 277 ಶಾಸಕರನ್ನು ಖರೀದಿಸಿದೆ ಎಂದು ಅವರು ಹೇಳಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈಗ "ನಮ್ಮ ಶಾಲೆಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅವರು ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಲು ಬಯಸುತ್ತಾರೆ" ಎಂದು ಅವರು ಆರೋಪಿಸಿದರು.
'20 ಕೋಟಿ ಆಫರ್ ಮಾಡಿದೆ'
"ಬಿಜೆಪಿ ಹಲವಾರು ಸರ್ಕಾರಗಳನ್ನು ಕಿತ್ತೊಗೆದಿದೆ ಮತ್ತು ಈಗ ಅವರು ದೆಹಲಿಯತ್ತ ಮುಖ ಮಾಡಿದ್ದಾರೆ. ನಮ್ಮ ದೇಶದಲ್ಲಿ ಸರ್ಕಾರಗಳ ಸರಣಿ ಕೊಲೆಗಾರ ಇದ್ದಾನೆ. ಅವನು ಎಲ್ಲ ಸರಕಾರಗಳನ್ನು ಕೊಲ್ಲುತ್ತಾನೆ" ಎಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ದೆಹಲಿ ಮುಖ್ಯಮಂತ್ರಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ 277 ಶಾಸಕರನ್ನು ಖರೀದಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ದೆಹಲಿಯಲ್ಲಿ ಬಿಜೆಪಿಯ "ಆಪರೇಷನ್ ಕಮಲ" ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆದಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಬಿಜೆಪಿ 40 ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಶಾಸಕರನ್ನು ಬದಲಾಯಿಸಲು ಬಿಜೆಪಿ ₹ 20 ಕೋಟಿ ಆಫರ್ ಮಾಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಶಾಸಕರನ್ನು ಖರೀದಿಸಲು ಬಿಜೆಪಿ ಬಳಿ ಇಷ್ಟೊಂದು ಹಣ ಹೇಗೆ ಇದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಗ್ರಾಮ ಸಮಿತಿಗಳ ಮೂಲಕ ತಳಮಟ್ಟದಲ್ಲಿ ಸಂಘಟನೆ
ಗುಜರಾತಿನ ಚುನಾವಣಾ ರಾಜಕೀಯದಲ್ಲಿ ಹೊಸ ಆಟಗಾರನಾಗಿದ್ದರೂ, ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಸಂಘಟನೆಯನ್ನು ಗ್ರಾಮ ಮಟ್ಟದವರೆಗೂ ಬಲಪಡಿಸುವ ಮೂಲಕ ಮತ್ತು ಸ್ವಯಂಸೇವಕರನ್ನು ಸಜ್ಜುಗೊಳಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಬಿಜೆಪಿಯನ್ನು ಎದುರಿಸಲು ಹೊರಟಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಗುಜರಾತ್ನ ವರ್ಷಾಂತ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಗ್ರಾಮ ಸಮಿತಿಗಳ ಮೂಲಕ ತಳಮಟ್ಟದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸುತ್ತಿದೆ.
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತನ್ನ ಅಧಿಕಾರ ವಹಿಸಿಕೊಂಡ ನಂತರ ಬೇರೆ ರಾಜ್ಯಗಳಲ್ಲೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಗುಜರಾತ್ ಕೂಡ ಹೊರತಾಗಿಲ್ಲ. ಗುಜರಾತ್ನಲ್ಲಿ ಇದೇ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಎಪಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಪಕ್ಷವು ಗ್ರಾಮ ಮಟ್ಟದಲ್ಲಿ ಕಸರತ್ತು ನಡೆಸುತ್ತಿದೆ. ಪ್ರಮುಖವಾಗಿ ಆಪ್ ತನ್ನ ಮತದಾರರ ಪಟ್ಟಿಯಲ್ಲಿ ಗುಜರಾತ್ ಮಹಿಳಾ ಸಮುದಾಯಗಳತ್ತ (ಪನ್ನಾ ಪರಿವಾರ) ಗಮನ ಹರಿಸಿದೆ. ಗುಜರಾತ್ ಮಹಿಳಾ ಮತದಾರರನ್ನು ಸೆಳೆಯುವ ಮೂಲಕ ಮತದಾರರನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.
ಎಎಪಿಯಿಂದ ಎರಡು ಅಭ್ಯಾರ್ಥಿಗಳ ಪಟ್ಟಿ ಬಿಡುಗಡೆ
ಗುಜರಾತಿನ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಅದಾಗಲೇ ಎಎಪಿ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಚುನಾವಣಾ ದಿನಾಂಕಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷ ಎನಿಸಿಕೊಂಡಿದೆ. ಮೊದಲ ಪಟ್ಟಿಯಲ್ಲಿ ಹತ್ತು ಅರ್ಬಯರ್ಥಿಗಳ ಪಟ್ಟಿದೆ ಇದ್ದರೆ, ಎರಡನೇ ಪಟ್ಟಿಯಲ್ಲಿ ಒಂಬತ್ತು ಜನ ಅಭ್ಯರ್ಥಿಗಳಿದ್ದಾರೆ.
ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿವೆ. ಈ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಉಳಿದ ಸ್ಥಾನಗಳು ಕಾಂಗ್ರೆಸ್, ಎನ್ಸಿಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಹೊಂದಿದ್ದಾರೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕೇಜ್ರಿವಾಲ್ ಅವರು ಗುಜರಾತ್ನ ಇತರ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗಿಂತ ಕಡಿಮೆ ಅಭಿವೃದ್ಧಿ ಹೊಂದಿದ ಗುಜರಾತ್ನ ಸೌರಾಷ್ಟ್ರದತ್ತ ಗಮನ ಹರಿಸಬೇಕೆಂದು ಬಯಸಿದ್ದಾರೆ. ರಾಜ್ಯದ 182 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 50 ಈ ಪ್ರದೇಶದಿಂದ ಬಂದಿವೆ.