ವಾಜಪೇಯಿ ದೃಷ್ಟಿಕೋನವೇ ಭಾರತದ ಬಾಂಧವ್ಯ ಗಟ್ಟಿಯಾಗಿರಲು ಕಾರಣ; ಜೈಶಂಕರ್
ನವದೆಹಲಿ, ಡಿಸೆಂಬರ್ 25: ಶೀತಲ ಸಮರದ ನಂತರ ಭಾರತಕ್ಕೆ ತನ್ನ ನೆರೆಹೊರೆಯ ಸಂಬಂಧಗಳನ್ನು ಪುನರ್ ನಿರ್ಮಿಸಿಕೊಳ್ಳುವ ಅಗತ್ಯ ಅತಿ ಹೆಚ್ಚಾಗಿರುತ್ತದೆ ಎಂಬುದನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅರ್ಥೈಸಿಕೊಂಡಿದ್ದರು. ಅವರ ಆ ದೃಷ್ಟಿಕೋನವೇ ಅಮೆರಿಕದೊಂದಿಗೆ ಹೊಸ ಸಂಬಂಧದ ಆರಂಭಕ್ಕೆ ಕಾರಣವಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಡಿ.25, ಶುಕ್ರವಾರ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನೋತ್ಸವದಂದು ಗೌರವ ಸಲ್ಲಿಸಿ ಮಾತನಾಡಿದ ಅವರು, "ಹಲವು ದೇಶ, ಖಂಡಗಳನ್ನು ತಲುಪಿದ ಸಮರ್ಥ ನಾಯಕ ವಾಜಪೇಯಿ. ಅವರ ಆ ಮುಂದಾಲೋಚನೆಯೇ ಯುರೋಪ್, ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಇನ್ನಿತರ ದೇಶಗಳೊಂದಿಗೆ ಭಾರತ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಲು ತಳಹದಿಯಾಯಿತು" ಎಂದು ಹೇಳಿದರು.

ನೆರೆಹೊರೆಯ ದೇಶಗಳಿಗೆ, "ಭಯೋತ್ಪಾದನೆ ಹಾಗೂ ನಂಬಿಕೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ" ಎಂಬ ಸ್ಪಷ್ಟ ನೆಲೆಯನ್ನು ಅರ್ಥೈಸಿಯೇ ವಾಜಪೇಯಿ ಅವರು ಉತ್ತಮ ಬಾಂಧವ್ಯ ಹಾಗೂ ಸ್ನೇಹವನ್ನು ಹೊಂದಿದ್ದರು ಎಂದರು. 1998ರಲ್ಲಿ ಪೊಕ್ರಾನ್ ಪರಮಾಣು ಪರೀಕ್ಷೆ ಸಂಬಂಧ ವಾಜಪೇಯಿ ಅವರು ಕೈಗೊಂಡ ನಿರ್ಧಾರ ಎಂದಿಗೂ ಚಿರಸ್ಥಾಯಿಯಾಗಿರುವಂಥದ್ದು ಎಂದು ಸ್ಮರಿಸಿದರು.












Click it and Unblock the Notifications