ಅಡ್ವಾಣಿ, ಮೋದಿ ಶೀತಲ ಸಮರ:ಬಿಜೆಪಿ ಗೆಲುವಿಗೆ ಕಾರಣರಾರು?
ನವದೆಹಲಿ, ಡಿ 12: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವಿನ ಶೀತಲ ಸಮರಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಗೆ ಅಡ್ವಾಣಿ ಅಲ್ಲಿನ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಹಿಂದೆ ಮೋದಿ ಪಾತ್ರವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ನಮ್ಮ ಸರಕಾರ ಜನಪರ ಕೆಲಸ ಮಾಡಿಕೊಂಡು ಬಂದಿದೆ.
ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದರು. ಬಿಜೆಪಿಯ ಈ ಸಾಧನೆಗೆ ಒಬ್ಬರು ಕಾರಣರಲ್ಲ, ಮುಖ್ಯವಾಗಿ ಈ ಗೌರವ ಮುಖ್ಯಮಂತ್ರಿಗಳಿಗೆ ಸಲ್ಲಬೇಕು ಎಂದು ಅಡ್ವಾಣಿ ಪರೋಕ್ಷವಾಗಿ ಬಿಜೆಪಿ ಸಾಧನೆಗೆ ನರೇಂದ್ರ ಮೋದಿ ಒಬ್ಬರೇ ಕಾರಣರಲ್ಲ ಎಂದು ಟಾಂಗ್ ನೀಡಿದ್ದಾರೆ.

ಶಿವರಾಜ್ ಸಿಂಗ್ ಮತ್ತು ರಮಣ್ ಸಿಂಗ್ ಅವರನ್ನು ಪಕ್ಷದ ಸಂಸದೀಯ ಮಂಡಳಿಗೆ ಆಯ್ಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಡ್ವಾಣಿ ಹೇಳಿದ್ದಾರೆ.
ಆಂಧಪ್ರದೇಶದ ಸಂಸದರು ಲೋಕಸಭೆಯಲ್ಲಿ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಹೊರಟಿದ್ದಾರೆ. ಯುಪಿಎ ಸರಕಾರ ಗೊತ್ತುವಳಿ ಮಂಡನೆ ತಡೆ ಹಿಡಿಯಲು ಹರಸಾಹಸ ಪಡುತ್ತಿದೆ ಎಂದು ಅಡ್ವಾಣಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಟೀಕಿಸಿದ್ದಾರೆ.
ಮೋದಿ ಮತ್ತು ಅಡ್ವಾಣಿ ನಡುವಣ ವಿರಸ ಇಂದು ನಿನ್ನೆಯದಲ್ಲ. ಈ ಹಿಂದೆ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಸರಕಾರ ಮೋದಿಗಿಂತ ಉತ್ತಮ ಆಡಳಿತ ನೀಡುತ್ತಿದೆ ಎಂದು ಅಡ್ವಾಣಿ ಹೇಳಿದ್ದರು.
ಈ ಹಿಂದೆ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ಆಡ್ವಾಣಿ, NDA ಪ್ರಧಾನಿಯಾಗಿ ನಿತೀಶ್ ಕುಮಾರ್ ಅತ್ಯಂತ ಸೂಕ್ತ ಆಯ್ಕೆ ಎಂದಿದ್ದರು.
ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ನಡೆದ ಪಕ್ಷದ ಭೋಪಾಲ್ ಸಮಾವೇಶದಲ್ಲಿ ಮೋದಿ, ಅಡ್ವಾಣಿ ಪಾದಮುಟ್ಟಿ ನಮಸ್ಕರಿಸಿದರೂ ಶಿಷ್ಯ ಮೋದಿ ಕಡೆ ಕಣ್ಣೆತ್ತಿಯೂ ನೋಡದೇ ಬಿಗುಮಾನ ಮುಂದುವರಿಸಿದ್ದರು.












Click it and Unblock the Notifications