ಕೇಜ್ರಿವಾಲ್ಗೆ ಮತ್ತೆ ಐದು ಪ್ರಶ್ನೆ ಎಸೆದ ಬಿಜೆಪಿ
ನವದೆಹಲಿ, ಜ. 30: ದೆಹಲಿ ಗದ್ದುಗೆ ಏರಲು ಶತಾಯಗತಾಯ ಯತ್ನಿಸುತ್ತಿರುವ ಕೇಜ್ರಿವಾಲ್ ಕ್ರೇಜ್ ಕಡಿಮೆ ಮಾಡಲು ಪ್ರಶ್ನೆಗಳ ದಾಳಿ ನಡೆಸುತ್ತಿದೆ. ಗುರುವಾರವಷ್ಟೇ 5 ಪ್ರಶ್ನೆ ಕೇಳಿದ್ದ ಬಿಜೆಪಿ ಶುಕ್ರವಾರ ಮತ್ತೆ 5 ಪಶ್ನೆಗಳನ್ನು ಮುಂದಿಟ್ಟಿದೆ.
ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಹಾಗೂ ನಿರ್ಮಲಾ ಸೀತಾರಾಮನ್ ಅವರು ಐದು ಪ್ರಶ್ನೆಗಳನ್ನು ಆಮ್ ಆದ್ಮಿ ಪಾಳೆಯಕ್ಕೆ ಶುಕ್ರವಾರ ಮಧ್ಯಾಹ್ನ ವರ್ಗಾಯಿಸಿದ್ದಾರೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಮತ್ತು ಸಚಿವರಾದ ರಾಜೀವ್ ಪ್ರತಾಪ್ ರೂಢಿ ಮತ್ತು ನಿರ್ಮಲಾ ಸೀತರಾಮನ್, ಇಂದಿನಿಂದ ಫೆಬ್ರವರಿ ಐದನೇ ತಾರೀಕನವರೆಗೆ ಬಿಜೆಪಿ, ಆಮ್ ಆದ್ಮಿ ಪಕ್ಷಕ್ಕೆ ದಿನವೊಂದಕ್ಕೆ 5 ಪ್ರಶ್ನೆಗಳನ್ನು ಕೇಳಲಿದೆ. ಇದಕ್ಕೆ ಆಮ್ ಆದ್ಮಿ ಪಕ್ಷ ಉತ್ತರಿಸಲಿ ಎಂದು ರೂಢಿ ಸವಾಲು ಹಾಕಿದ್ದರು. [ಬಿಜೆಪಿ ಪ್ರಶ್ನೆಗೆ ಕೇಜ್ರಿವಾಲ್ ವ್ಯಂಗ್ಯ ನಗೆ]
ಬಿಜೆಪಿ ಗುರುವಾರ ಕೇಳಿದ್ದ ಐದು ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಕೇಜ್ರಿವಾಲ್ ವ್ಯಂಗ್ಯನಗೆಯನ್ನಷ್ಟೇ ಬೀರಿದ್ದರು. ಈಗ ಶುಕ್ರವಾರ ಬಿಜೆಪಿ ಕೇಳಿರುವ ಈ ಕೆಳಗಿನ ಪ್ರಶ್ನೆಗಳಿಗಾದರೂ ಉತ್ತರಿಸ್ತಾರಾ?

ಭಾರತದಲ್ಲಿ ಕಾರ್ಯಕರ್ತರು ಸಿಗಲಿಲ್ಲವೇ?
ಆಮ್ ಆದ್ಮಿ ಪಕ್ಷ ಮತಯಾಚನೆಗಾಗಿ ದೇಶ ವಿರೋಧಿ ಗುಂಪುಗಳೊಂದಿಗೆ ಕೈ ಜೋಡಿಸಿದೆ. ನವದೆಹಲಿ ಮತದಾರರಿಗೆ ದುಬೈ, ಬಾಂಗ್ಲಾದೇಶದಿಂದಲೂ ಆಪ್ಗೆ ಮತ ಚಲಾಯಿಸಲು ಕೋರಿಗೆ ಬರುತ್ತಿದೆ. ಇದರ ಬಗ್ಗೆ ಆಪ್ ವೆಬ್ಸೈಟ್ನಲ್ಲಿ ವಿವರವಿದೆ. ನಿಮ್ಮ ಪಕ್ಷದ ಪ್ರಚಾರಕ್ಕಾಗಿ ಕಾರ್ಯಕರ್ತರು ದೆಹಲಿ ಅಥವಾ ಭಾರತದಲ್ಲಿ ಸಿಗಲಿಲ್ಲವೇ?

ಚುನಾವಣಾ ವೆಚ್ಚದ ವಿವರ ಏಕೆ ಸಲ್ಲಿಸಿಲ್ಲ?
ಎಲ್ಲ ಪಕ್ಷಗಳೂ ಭ್ರಷ್ಟ ಎಂದು ಆಪ್ ಆರೋಪಿಸುತ್ತಿದೆ. ನಿಯಮದ ಪ್ರಕಾರ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆದರೆ, ಆಮ್ ಆದ್ಮಿ ಇನ್ನೂ ಲೋಕಸಭೆ ಚುನಾವಣೆಯ ವೆಚ್ಚಗಳನ್ನು ಆಯೋಗಕ್ಕೆ ಸಲ್ಲಿಸಿಲ್ಲ ಏಕೆ?

ಮಹಿಳೆಯರೇಕೆ ಪಕ್ಷ ಬಿಡ್ತಿದ್ದಾರೆ?
ಆಮ್ ಆದ್ಮಿ ಮಹಿಳಾ ವಿರೋಧಿ ಪಕ್ಷ ಎಂದರೆ ಅತಿಶಯೋಕ್ತಿ ಅಲ್ಲ. ಎಲ್ಲ ಮಹಿಳಾ ಸದಸ್ಯರು ಪಕ್ಷ ಬಿಡುತ್ತಿದ್ದಾರೆ. ಅವರೆಲ್ಲ ಏಕೆ ಪಕ್ಷ ಬಿಡುತ್ತಿದ್ದಾರೆ? ಬಿಜೆಪಿ ಮಹಿಳೆಯೋರ್ವರನ್ನು ಅಭ್ಯರ್ಥಿಯನ್ನಾಗಿಸಿದರೆ ಅವರನ್ನು ಅವಕಾಶವಾದಿ ಎಂದು ಆಪ್ ಆರೋಪಿಸುತ್ತದೆ. ನೀವು ಮಹಿಳೆಯರೊಂದಿಗೆ ತೋರುತ್ತಿರುವ ವರ್ತನೆಗೆ ನಿಮಗೆ ನಾಚಿಕೆಯಾಗಬೇಕು.

ಚುನಾವಣಾ ಆಯೋಗದ ನಿರ್ದೇಶನ ಉಲ್ಲಂಘನೆ ಏಕೆ?
ತಾನು ಕಾನೂನನ್ನು ಗೌರವಿಸುವುದಾಗಿ ಆಮ್ ಆದ್ಮಿ ಹೇಳಿಕೊಳ್ಳುತ್ತದೆ. ಆದರೆ, ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದೆ. ಆಮ್ ಆದ್ಮಿಗೆ ಈಗಾಗಲೇ ಚುನಾವಣೆ ಆಯೋಗದಿಂದ ಮೂರು ನೋಟಿಸ್ಗಳು ಬಂದಿವೆ. ಅರವಿಂದ ಕೇಜ್ರಿವಾಲ್ ಪದೇ ಪದೆ ಚನಾವಣೆ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸುತ್ತಿದ್ದಾರೆ. ಈಗ ಕಾನೂನನ್ನು ಹೇಗೆ ಗೌರವಿಸಿದಂತಾಯ್ತು?

ಲೋಕಾಯುಕ್ತ ಕಾಯ್ದೆ ಜಾರಿಗೆ ತರಲಿಲ್ಲ ಏಕೆ?
ಲೋಕಾಯುಕ್ತ ಜಾರಿಗೆ ತರಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಅರವಿಂದ ಕೇಜ್ರಿವಾಲ್ ಅವರು 49 ದಿನಗಳಲ್ಲಿ ಸರ್ಕಾರವನ್ನು ತೊರೆದರು. ದೆಹಲಿಯಲ್ಲಿ ಈಗಾಗಲೇ ಲೋಕಾಯುಕ್ತ ಜಾರಿಯಲ್ಲಿದೆ. ಹಾಗಿದ್ದರೆ ದೆಹಲಿಗರನ್ನು ದಾರಿ ತಪ್ಪಿಸಿದ್ದು ಏಕೆ? ಒಂದು ವೇಳೆ ಲೋಕಾಯುಕ್ತವನ್ನು ಬಲಪಡಿಸುವ ಉದ್ದೇಶ ಹೊಂದಿದ್ದರೆ ಉತ್ತರಾಖಂಡ ಲೋಕಾಯುಕ್ತದಿಂದ ಮಾಹಿತಿ ಪಡೆಯಬಹುದಿತ್ತು. ಉತ್ತರಾಖಂಡದ ಬಿಜೆಪಿ ಸರ್ಕಾರಕ್ಕೆ ಲೋಕಾಯುಕ್ತ ಕಾಯ್ದೆ ಜಾರಿಗೆ ತರಲು ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ಜೊತೆಗೆ ಕೋರಿಕೆ ಸಲ್ಲಿಸಿದ್ದರು. ಆದರೆ, ತಮ್ಮ 49 ದಿನಗಳ ಅವಧಿಯಲ್ಲಿ ದೆಹಲಿಯಲ್ಲೇಕೆ ಜಾರಿಗೆ ತರಲಿಲ್ಲ?












Click it and Unblock the Notifications