ಮತ್ತೆ ಉಪವಾಸ ಕೂರಲಿರುವ ಅಣ್ಣಾ, ಕೇಂದ್ರ ಸರ್ಕಾರಕ್ಕೆ ಕಂಟಕ?
ನವದೆಹಲಿ, ಡಿಸೆಂಬರ್ 22: ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಒಂದು ಕಾಲದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಮನೆ ಮನೆ ಮಾತಾಗಿದ್ದ ಅಣ್ಣಾ ಈಗ ಮತ್ತೊಮ್ಮೆ ಅದೇ ಕಾರಣಕ್ಕೆ ಉಪಾಸ ಆರಂಭಿಸಲಿದ್ದಾರೆ.
2019 ರ ಜನವರಿ 30 ರಂದು ಅಂದರೆ ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ಅವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.
2014 ಜನವರಿಯಲ್ಲಿ ಸಂಸತ್ನಿಂದ ಅನುಮೋದನೆ ಪಡೆದು ರಾಷ್ಟ್ರಪತಿಯವರಿಂದ ಸಹಿ ಪಡೆದಿದ್ದರೂ ಲೋಕಪಾಲ ಮಸೂದೆಯನ್ನು ಜಾರಿಗೆ ತರುವಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ ಎಂದು ಖಂಡಿಸಿರುವ 81 ವರ್ಷ ವಯಸ್ಸಿನ ಅಣ್ಣಾ, ಅಕ್ಟೋಬರ್ 2 ರಂದೇ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದರು.

ಆದರೆ ಗಾಂಧೀಜಿಯವರ ಹುಟ್ಟಿದ ದಿನದಂದು ಉಪವಾಸ ಸತ್ಯಾಗ್ರಹ ನಡೆಸಲು ಹೊರಟಿದ್ದ ಅಣ್ಣಾ ಅವರ ಮನವೊಲಿಸಿ, ಉಪವಾಸ ಹಿಂಪಡೆಯುವಲ್ಲಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಯಶಸ್ವಿಯಾಗಿದ್ದರು. ಆದರೆ ಪಟ್ಟು ಬಿಡದ ಅಣ್ಣಾ ಈಗ ಮತ್ತೊಮ್ಮೆ ಉಪವಾಸಕ್ಕೆ ಹೊರಟಿದ್ದಾರೆ.
2011 ರಲ್ಲಿ ಲೋಕಪಾಲ ಮಸೂದೆಗೆ ಒಪ್ಪಿಗೆ ನೀಡುವಂತೆ ಅಣ್ಣಾ ಹಜಾರೆ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಅಂದಿನ ಯುಪಿಎ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಬೀರಿದಂತೆ, ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಈಗಿನ ಎನ್ ಡಿಎ ಸರ್ಕಾರದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.












Click it and Unblock the Notifications