ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ
ನವದೆಹಲಿ, ಮಾರ್ಚ್ 18: ಸಾಲತೀರಿಸಲು ಸಮಯಕ್ಕೆ ಸರಿಯಾಗಿ ನೆರವು ಕೊಟ್ಟ ಅಣ್ಣ-ಅತ್ತಿಗೆಗೆ ಅನಿಲ್ ಅಂಬಾನಿ ಧನ್ಯವಾದ ಹೇಳಿದ್ದಾರೆ.
ಎರಿಕ್ಸನ್ಗೆ 550 ಕೋಟಿ ರೂಪಾಯಿ ಬಾಕಿಯನ್ನು ತೀರಿಸಲು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಗೆ ಸುಪ್ರಿಂಕೋರ್ಟ್ ಆದೇಶ ನೀಡಿತ್ತು. ಸುಪ್ರಿಂ ನೀಡಿದ್ದ ಗಡುವು ನಾಳೆಗೆ ಮುಗಿಯುತ್ತಿತ್ತು. ಒಂದು ವೇಳೆ ಹಣ ವಾಪಸ್ ನೀಡದೇ ಇದ್ದಿದ್ದರೆ ಅವರ ಬಂಧನವಾಗುವ ಸಾಧ್ಯತೆ ಇತ್ತು.
ಆದರೆ ಇಂದೇ ಅನಿಲ್ ಅಂಬಾನಿ ಅವರು ಎರಿಕ್ಸನ್ಗೆ 550 ಕೋಟಿ ರೂಪಾಯಿ ಬಾಕಿ ಹಣವನ್ನು ತೀರಿಸಿ, ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ.

ಸಾಲ ತೀರಿಸುವಲ್ಲಿ ಸಹಾಯ ಮಾಡಿದ ಅಣ್ಣ ಮುಖೇಶ್ ಅಂಬಾನಿ ಹಾಗೂ ಅತ್ತಿಗೆ ನೀತಾ ಅಂಬಾನಿಗೆ ಧನ್ಯವಾದಗಳನ್ನು ಅನಿಲ್ ಅಂಬಾನಿ ಅರ್ಪಿಸಿದ್ದು, ಇಂತಹಾ ಸನ್ನಿವೇಶದಲ್ಲಿ ನನ್ನ ಜೊತೆಗೆ ನಿಂತಿದ್ದಕ್ಕೆ, ಸಮಯಕ್ಕೆ ಅಗತ್ಯವಿದ್ದ ಸಹಾಯ ಮಾಡಿದ್ದಕ್ಕೆ ಮತ್ತು ಕುಟುಂಬ ಮೌಲ್ಯಗಳನ್ನು ಎತ್ತಿಹಿಡಿದಿದ್ದಕ್ಕೆ ಧನ್ಯವಾದ ಎಂದು ಅಂಬಾನಿ ಹೇಳಿದ್ದಾರೆ.
ಸಂಸ್ಥೆಯು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅಂಬಾನಿ ಅವರು ಹೀಗೆ ಹೇಳಿದ್ದು, ನಾನು ಮತ್ತು ಕುಟುಂಬವು ನಿಮ್ಮ ಪ್ರೀತಿಗೆ ನಾವು ಆಭಾರಿ ಆಗಿದ್ದೇವೆ, ನೀವು ತೋರಿದ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರುಗಳ ನಡುವೆ ಅಂತಹಾ ಉತ್ತಮ ಸಂಬಂಧವಿರಲಿಲ್ಲ. ಆದರೆ ಕಳೆದ ವರ್ಷವಷ್ಟೆ ಇಬ್ಬರೂ ಅಣ್ಣ-ತಮ್ಮಂದಿರು ತಮ್ಮ ನಡುವಿನ ವೈಮನ್ಯಸ್ಯವನ್ನು ಮರೆತು ಮತ್ತೆ ಜೊತೆಯಾಗಿದ್ದಾರೆ.












Click it and Unblock the Notifications