ಮೋದಿ ಹೃದಯ ಮೃದುಗೊಳಿಸಿ: ಅಮಿತ್ ಶಾಗೆ ಜಗನ್ ಮೋಹನ್ ರೆಡ್ಡಿ ಮನವಿ
ನವದೆಹಲಿ, ಜೂನ್ 15: ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, 2.58 ಲಕ್ಷ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಮಾನ್ಯತೆ ನೀಡುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೃದಯವನ್ನು ಮೃದುಗೊಳಿಸುವಂತೆ ಮನವಿ ಮಾಡಿದರು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಸಮಿತಿಯ ಮೊದಲ ಸಮಿತಿಯಲ್ಲಿ ಕೂಡ ಈ ಬೇಡಿಕೆಯನ್ನು ಮುಂದಿಡುವುದಾಗಿ ಜಗನ್ ತಿಳಿಸಿದರು.
'ಗೃಹ ಸಚಿವರನ್ನು ಭೇಟಿಯಾಗಿ ಅವರ ಮನವೊಲಿಸಲು ಪ್ರಯತ್ನಿಸಿದ್ದೇನೆ ಮತ್ತು ವಿಶೇಷ ಸ್ಥಾನಮಾನದ ವಿಚಾರದಲ್ಲಿ ಪ್ರಧಾನಿಯವರ ಹೃದಯವನ್ನು ಮೃದುಗೊಳಿಸುವಂತೆ ಕೋರಿದ್ದೇನೆ ಎಂದು ಅವರು ಅಮಿತ್ ಶಾ ಅವರೊಂದಿಗಿನ ಒಂದು ಗಂಟೆ ಅವಧಿಯ ಸಮಾಲೋಚನೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಆಂಧ್ರಪ್ರದೇಶ ಪುನಾರಚನಾ ಕಾಯ್ದೆ ಅಡಿ ಬಾಕಿ ಉಳಿದಿರುವ ಎಲ್ಲ ಸವಲತ್ತುಗಳನ್ನು ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಕೂಡ ಅವರು ಮನವಿ ಮಾಡಿದರು.
'ಇಂದು ನಾವು ವಿಶೇಷ ಸ್ಥಾನಮಾನ ಪಡೆದುಕೊಂಡಿಲ್ಲ. ನಾವು ಯಾರದ್ದೋ ಕರುಣೆಯಲ್ಲಿ ಇರುವಂತಾಗಿದೆ. ಆದರೆ, ನಾನು ಮೋದಿ ಅವರಿಗೆ ಮತ್ತೆ ಮತ್ತೆ ನೆನಪಿಸುತ್ತಲೇ ಇರುತ್ತೇನೆ. ಒಂದು ದಿನ ಪರಿಸ್ಥಿತಿ ಬದಲಾಗಲಿದೆ' ಎಂದು ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದರು.
ಲೋಕಸಭೆಯಲ್ಲಿನ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ವೈಎಸ್ಆರ್ಸಿಪಿ ಸಂಸದರಿಗೆ ನೀಡಲು ಬಿಜೆಪಿ ಆಫರ್ ಮುಂದಿಟ್ಟಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 'ದಯವಿಟ್ಟು ಈ ಎಲ್ಲಾ ವಿಚಾರಗಳ ಬಗ್ಗೆ ಊಹಾಪೋಹ ಬೇಡ. ಮೊದಲಿಗೆ, ಅಂತಹ ಯಾವುದೇ ಆಫರ್ ಇಲ್ಲ. ಈ ಬಗ್ಗೆ ನಾವು ಕೇಳಿಲ್ಲ ಮತ್ತು ಮಾತನಾಡಿಯೂ ಇಲ್ಲ. ಯಾವುದೇ ಮೂಲದಿಂದ ಅಂತಹ ಯಾವುದೇ ಪ್ರಸ್ತಾವ ಬಂದಿಲ್ಲ. ಪ್ರಸ್ತುತ ಈ ಬಗ್ಗೆ ಯಾವ ಮಾತುಕತೆಯೂ ನಡೆದಿಲ್ಲ' ಎಂದರು.












Click it and Unblock the Notifications