ಮಹತ್ವದ ಬೆಳವಣಿಗೆ: ಆಂಧ್ರ ಮಾಜಿ ಸಿಎಂ ಕಿರಣ್ ರೆಡ್ಡಿ ಮರಳಿ ಕಾಂಗ್ರೆಸ್ಗೆ
ನವದೆಹಲಿ, ಜುಲೈ 14: ನಿನ್ನೆ ಸಂಜೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಆಂಧ್ರಪ್ರದೇಶದ (ಅವಿಭಜಿತ) ಮುಖ್ಯಮಂತ್ರಿ ಆಗಿದ್ದ ಕಿರಣ್ ರೆಡ್ಡಿ ಅವರು ಮರಳಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಲೋಕಸಭೆ ಚುನಾವಣೆಗೆ ಮುಂಚೆ ಇದು ಆಂಧ್ರದ ಮಹತ್ವದ ಬೆಳವಣಿಗೆ ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಆಂಧ್ರಪ್ರದೇಶವನ್ನು ವಿಭಜನೆಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಮಾಜಿ ಸಿಎಂ ಕಿರಣ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಸ್ವಂತ ಪಕ್ಷ ಸ್ಥಾಪಿಸಿದ್ದರು. ಆದರೆ ಈಗ ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳು ಇದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ಐದು ಸವಾಲುಗಳು
ನಿನ್ನೆ ಸಂಜೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಕಿರಣ್ ರೆಡ್ಡಿ ಅವರು ರಣದೀಪ್ ಸುರ್ಜೇವಾಲಾ, ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿ ಒಮನ್ ಚಾಂಡಿ, ಎಪಿಸಿಸಿ ಮುಖ್ಯಸ್ಥ ರಘುವೀರ ರೆಡ್ಡಿ ಅವರ ಸಮ್ಮುಖದಲ್ಲಿ ಮತ್ತೆ ಪಕ್ಷ ಸೇರ್ಪಡೆಗೊಂಡರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಕಿರಣ್ ರೆಡ್ಡಿ ಅವರು, ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರವು ಲೋಕಸಭೆಯ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಹೋಗುವಂತೆ ಮಾಡಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿ ಹಲವು ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದಿದ್ದಾರೆ.
ಕಿರಣ್ ಕುಮಾರ್ ರೆಡ್ಡಿ ಸ್ಥಾಪಿಸಿದ್ದ ಸಮ್ಯಖ್ಯಾಂಧ್ರ ಪಕ್ಷವನ್ನು ವಿಸರ್ಜನೆಗೊಳಿಸಲಾಗಿದೆ. ಪಕ್ಷದಲ್ಲಿ ಅವರು ಜೊತೆಗಿದ್ದ ಮುಖಂಡರು ಸಹ ಕಾಂಗ್ರೆಸ್ಗೆ ಸೇರಲಿದ್ದಾರೆ.
ಹಿಂದು ಪಾಕಿಸ್ತಾನ ಹೇಳಿಕೆ: ತರೂರ್ ವಿರುದ್ಧ ಪ್ರಕರಣ ದಾಖಲು
ಕಿರಣ್ ರೆಡ್ಡಿ ಅವರು ಮತ್ತೆ ಕಾಂಗ್ರೆಸ್ ಸೇರಿರುವ ಕಾರಣ ಆಂಧ್ರಪ್ರದೇಶ ಕಾಂಗ್ರೆಸ್ಗೆ ಮತ್ತೆ ಬಲ ಬಂದಿದೆ ಎನ್ನಲಾಗುತ್ತಿದ್ದು, ಲೋಕಸಭೆ ಚುನಾವಣೆ ಸಮೀಪದಲ್ಲಿ ಇದು ಕಾಂಗ್ರೆಸ್ಗೆ ಧನಾತ್ಮಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.