ಅಂಫಾನ್: ಮನ್ ಕಿ ಬಾತ್ನಲ್ಲಿ ಒಡಿಶಾ, ಬಂಗಾಳಕ್ಕೆ ಮೋದಿ ಸಾಂತ್ವಾನ
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿ ಕೊಟ್ಟರು. ಕೋವಿಡ್ ಹಿನ್ನೆಲೆಯಲ್ಲಿ ಅವರು ಹಲವು ಜನತೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸೂಚ್ಯವಾಗಿ ಮಾತನಾಡಿದರು.
ಅಲ್ಲದೇ, ಕಳೆದ ವಾರ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳನ್ನು ಕಂಗೆಡಿಸಿದ ಅಂಫಾನ್ ಚಂಡಮಾರುತದ ಬಗ್ಗೆ ಈ ಎರಡೂ ರಾಜ್ಯಗಳಿಗೆ ಮೋದಿ ಅವರು, ಸಾಂತ್ವಾನ ಹೇಳಿದರು.
ಚಂಡಮಾರುತದಂತಹ ಪ್ರಬಲ ಹೊಡೆತಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳ ಜೊತೆ ಭಾರತ ಇರಲಿದೆ. ಭಯಾನಕ ಸನ್ನಿವೇಶದಲ್ಲಿ ಈ ಎರಡೂ ರಾಜ್ಯಗಳ ಜನ ತೋರಿಸಿರುವ ಧೈರ್ಯ ಹೆಮ್ಮೆ ಮೂಡಿಸುವಂತದ್ದು ಎಂದು ಹೇಳಿದ್ದಾರೆ.

ಮೇ 21 ರಿಂದ 23 ರವರೆಗೆ ಪಶ್ಚಿಮ ಬಂಗಾಳ, ಒಡಿಶಾಕ್ಕೆ ದಾಂಗುಡಿ ಇಟ್ಟ ಅಂಫೇನ್ ಚಂಡಮಾರುತ ಆ ರಾಜ್ಯಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದೆ. 85 ಜನ ಪ್ರಾಣ ಕಳೆದುಕೊಂಡಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ 1 ಸಾವಿರ ಕೋಟಿ ರುಪಾಯಿ ಹಾಗೂ ಒಡಿಶಾಕ್ಕೆ 500 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದಾರೆ.












Click it and Unblock the Notifications