ಹೊಗೆಯಿಂದ ಆವೃತವಾದ ದೆಹಲಿ; ಇನ್ನಷ್ಟು ಕುಸಿದ ವಾಯು ಗುಣಮಟ್ಟ
ನವದೆಹಲಿ, ನವೆಂಬರ್ 10: ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತಿದ್ದು, ತೀವ್ರ ಗಂಭೀರ ಪರಿಸ್ಥಿತಿಯ ಸೂಚನೆಯನ್ನು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ.
ಮಂಗಳವಾರ ಬೆಳ್ಳಂಬೆಳಿಗ್ಗೆ ದೆಹಲಿಯನ್ನು ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ತೀವ್ರತರವಾಗಿ ಕುಸಿಯುತ್ತಿರುವುದಾಗಿ ತಿಳಿದುಬಂದಿದೆ. ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗಿದ್ದು, ಈಚೆಗೆ ಇದರಿಂದಾಗಿ ಜನರ ಆರೋಗ್ಯವೂ ಕ್ಷೀಣಿಸಿತ್ತು. ವಾಯುಮಾಲಿನ್ಯದಿಂದಾಗಿ ಜನರಲ್ಲಿ ಉಸಿರಾಟದ ತೊಂದರೆಯೂ ಹೆಚ್ಚಾಗಿತ್ತು.
ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಚೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ಕೇಂದ್ರದ ಹೊಸ ಕಾನೂನಿನಡಿ ಗಾಳಿಯನ್ನು ಮಲಿನಗೊಳಿಸುವ ಚಟುವಟಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಇಷ್ಟೆಲ್ಲಾ ಕ್ರಮದ ನಂತರವೂ ವಾಯುಮಾಲಿನ್ಯ ಮಟ್ಟದಲ್ಲಿ ಸುಧಾರಣೆ ಕಂಡುಬಂದಿಲ್ಲ. ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕವು ಸದ್ಯಕ್ಕೆ 469ಎಕ್ಯೂ ಐ ಇದೆ.

ದೆಹಲಿಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದ್ದು, ದೀಪಾವಳಿ ಹಬ್ಬವೂ ಸಮೀಪಿಸುತ್ತಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನರ ಆರೋಗ್ಯ ಸಮಸ್ಯೆ ಉಲ್ಬಣಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.












Click it and Unblock the Notifications