'ಮತ್ತೆ ನಿಮ್ಮ ಸೇವೆಗೆ ಹಾಜರ್': ಕೋವಿಡ್ ನೆಗಟಿವ್ ಬಳಿಕ ಕೇಜ್ರಿವಾಲ್
ನವದೆಹಲಿ, ಜನವರಿ 09: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋವಿಡ್ ಸೋಂಕಿಗೆ ಒಳಗಾದ ಒಂದು ವಾರದ ಬಳಿಕ ಕೊರೊನಾ ವೈರಸ್ ವರದಿ ಇಂದು ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಆಮ್ ಆದ್ಮಿ ನಾಯಕ ಕೇಜ್ರಿವಾಲ್ ನಾನು ನಿಮ್ಮ ಸೇವೆಗೆ ಮತ್ತೆ ವಾಪಸ್ ಬಂದಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರ ನಾನು ನಿಮ್ಮ ಸೇವೆಗೆ ಮರಳಿದ್ದೇನೆ," ಎಂದು ತಿಳಿಸಿದ್ದಾರೆ. ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ರಾಜಕೀಯ ರ್ಯಾಲಿ ನಡೆಸಿದ ಒಂದು ದಿನದ ನಂತರ ಅರವಿಂದ್ ಕೇಜ್ರಿವಾಲ್ರಿಗೆ ಮಂಗಳವಾರ ಕೋವಿಡ್ ಪಾಸಿಟಿವ್ ಆಗಿದೆ.
ಕೊರೊನಾವೈರಸ್ ಪರೀಕ್ಷೆ ಮಾಡಿ ಒಂದು ವಾರದ ಮೊದಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ಸಕ್ರಿಯವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಡಿಸೆಂಬರ್ 30 ರಂದು, ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್ನ 35 ವಾರ್ಡ್ಗಳಲ್ಲಿ 14ರಲ್ಲಿ ಎಎಪಿ ಗೆಲುವು ಸಾಧಿಸಿದ ಹಿನ್ನೆಲೆಯಿಂದಾಗಿ ಚಂಡೀಗಢದಲ್ಲಿ ವಿಜಯಯಾತ್ರೆಯನ್ನು ನಡೆಸಿದರು.

ದೆಹಲಿ ಸಿಎಂ ಡಿಸೆಂಬರ್ 31 ರಂದು ಪಟಿಯಾಲಾದಲ್ಲಿ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜನವರಿ 2 ರಂದು, ಅರವಿಂದ್ ಕೇಜ್ರಿವಾಲ್ ಲಕ್ನೋದಲ್ಲಿ ರ್ಯಾಲಿಯನ್ನು ನಡೆಸಿದ್ದರು. ಜನವರಿ 3 ರಂದು ಚುನಾವಣಾ ಪ್ರಚಾರ ಹಿನ್ನೆಲೆ ಡೆಹ್ರಾಡೂನ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
करोना से ठीक होकर मैं वापिस आपकी सेवा में हाज़िर हूँ।
— Arvind Kejriwal (@ArvindKejriwal) January 9, 2022
ಜಾಗೃತರಾಗಿರಲು ಎಚ್ಚರಿಕೆ ನೀಡಿದ್ದ ದೆಹಲಿ ಮುಖ್ಯಮಂತ್ರಿ
ಇನ್ನು ಮುಂದಿನ ತಿಂಗಳು ಗೋವಾ, ಪಂಜಾಬ್, ಉತ್ತಾರಖಂಡ, ಉತ್ತರ ಪ್ರದೇಶ ಹಾಗೂ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯವನ್ನು ನಡೆಸುತ್ತಿದೆ. ಪ್ರಚಾರದಲ್ಲಿ ತೊಡಗಿದೆ. ಈ ನಡುವೆ ದೇಶದಲ್ಲಿ ಓಮಿಕ್ರಾನ್ ಜೊತೆಗೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕೂಡಾ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಜನರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದರು. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಸಾರ್ವಜನಿಕರು ಭಯಪಡಬಾರದು. ಹೆಚ್ಚಿನ ಸೋಂಕುಗಳು ಸೌಮ್ಯವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ. ಆದರೆ ಜವಾಬ್ದಾರಿಯುತವಾಗಿ ವರ್ತಿಸಿ ಎಂದಿದ್ದಾರೆ.
ದೆಹಲಿಯಲ್ಲಿ ಲಾಕ್ಡೌನ್ ಹೇರುವ ಅಗತ್ಯ ಬಂದಿಲ್ಲ: ಅರವಿಂದ್ ಕೇಜ್ರಿವಾಲ್
"ಈಗ ದೆಹಲಿಯಲ್ಲಿ ಲಾಕ್ಡೌನ್ ಹೇರುವ ಅಗತ್ಯವಿಲ್ಲ ಅಥವಾ ಉದ್ದೇಶವಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. "ನಾವು ಲಾಕ್ಡೌನ್ ಹೇರಲು ಬಯಸುವುದಿಲ್ಲ, ನೀವು ಮಾಸ್ಕ್ ಅನ್ನು ಧರಿಸಿದರೆ ಅಂತಹ ಸ್ಥಿತಿ ಬರಲಾರದು," ಎಂದು ಕೂಡಾ ಹೇಳಿದ್ದಾರೆ. "ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಆದರೆ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕಳೆದ ಕೋವಿಡ್ ಅಲೆಯ ಡೇಟಾಕ್ಕೆ ಹೋಲಿಕೆ ಮಾಡಿದ ನಾನು ಜನರು ಆತಂಕ ಪಡೆಬಾರದು ಎಂದು ಹೇಳುತ್ತಿದ್ದೇನೆ," ಎಂದು ತಿಳಿಸಿದ್ದಾರೆ.
ಭಾರತದಲ್ಲಿ 1,59,632 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲು ಆಗಿದೆ. ಕಳೆದ 24 ಗಂಟೆಯಲ್ಲಿ 40,863 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. 327 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ದೇಶದ ದಿನದ ಪಾಸಿಟಿವಿಟಿ ದರ ಶೇ 10.21ರಷ್ಟಿ ಇದ್ದು, ಈ ಸಂದರ್ಭದಲ್ಲೇ ದೇಶದಲ್ಲಿ ಸಕ್ರಿಯ ಪ್ರಕರಣಗಳು 5,90,611 ಆಗಿದೆ. ಒಟ್ಟು 3,44,53,603 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 4,83,790 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ನಡುವೆ ದೇಶದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 3,623ಕ್ಕೆ ಏರಿಕೆ ಆಗಿದೆ. ಒಟ್ಟು 27 ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆ ಆಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications