ಪಾಟ್ನಾ ಸ್ಪೋಟದ ನಂತರ ಗೃಹ ಸಚಿವರು ಹೋಗಿದ್ದೆಲ್ಲಿಗೆ?
ನವದೆಹಲಿ, ಅ 28: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಭಾನುವಾರ (ಅ 27) ನಡೆದ ಸರಣಿ ಸ್ಪೋಟದ ನಂತರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹಿಂದಿ ಚಿತ್ರರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಿವಾದಕ್ಕೀಡಾಗಿದ್ದಾರೆ.
ಪಾಟ್ನಾದಲ್ಲಿನ ಸ್ಪೋಟದ ನಂತರ ಗೃಹ ಸಚಿವರು ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಸ್ಪೋಟದ ಬಗ್ಗೆ ಮಾಹಿತಿ ತೆಗೆದು ಕೊಳ್ಳುವ ಕನಿಷ್ಠ ಪರಿಜ್ಞಾನ ಅವರಿಗೆ ಇಲ್ಲದಾಯಿತು ಎಂದು ಬಿಜೆಪಿ, ಶಿಂಧೆಯವರನ್ನು ತರಾಟೆಗೆ ತೆಗೆದುಕೊಂಡಿದೆ.
ಅಮಾಯಕರು ಅಲ್ಲಿ ಸಾವನ್ನಪ್ಪಿದಾಗ ಮತ್ತು ಗಾಯಗೊಂಡಾಗ ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಿಂತ ಹೆಚ್ಚು ನಿಮಗೆ ಕ್ಯಾಸೆಟ್ ಬಿಡುಗಡೆ ಸಮಾರಂಭವಾಯಿತೇ ಎಂದು ಬಿಜೆಪಿ ನಾಯಕ ಕೀರ್ತಿ ಆಜಾದ್ ಶಿಂಧೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು, ನಿಮ್ಮ ಮತ್ತು ಪ್ರಧಾನಿಯವರ ರಾಜೀನಾಮೆಯನ್ನು ಕೇಳುವುದಿಲ್ಲ. ನಿಮ್ಮ ಅಧಿಕಾರದ ಅವಧಿ ಇನ್ನೇನು ಕೆಲವೇ ದಿನಗಳು. ಜನರು ನಿಮ್ಮ ಆಡಳಿತ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆಂದು ಕೀರ್ತಿ ಆಜಾದ್ ಹೇಳಿದ್ದಾರೆ.
ಸಿಪಿಐ: ಪಾಟ್ನಾದಲ್ಲಿ ಬಾಂಬ್ ಸ್ಪೋಟಗೊಂಡ ನಂತರ ಕೇಂದ್ರ ಗೃಹ ಸಚಿವರು ಕ್ಯಾಸೆಟ್ ಬಿಡುಗಡೆ ಸಮಾರಂಭದಲ್ಲಿ ಮಜಾ ಮಾಡುತ್ತಿದ್ದರು. ಪಾಟ್ನಾದಲ್ಲಿ ನಿನ್ನೆ ಬಾಂಬ್ ಸ್ಪೋಟಗೊಂಡಾಗ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಿಗೆ ಘಟನೆಯ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಇದು ಕೇಂದ್ರ ಸರಕಾರದ ಆಡಳಿತದ ವೈಖರಿ ಎಂದು ಸಿಪಿಐ ನಾಯಕ ಅತುಲ್ ಅಂಜನ್ ಟೀಕಿಸಿದ್ದಾರೆ.
ಪಾಟ್ನಾ ಸ್ಪೋಟದ ತರುವಾಯ ಕೆಲವೇ ಹೊತ್ತಿನಲ್ಲಿ ಶಿಂಧೆ ಮುಂಬೈನಲ್ಲಿ ಕಂಗನಾ ರಾನತ್ ಮುಖ್ಯ ಭೂಮಿಕೆಯಲ್ಲಿರುವ 'ರಜ್ಜೋ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications