ಏರ್ ಸ್ಟ್ರೈಕ್ ದಿನ ಬೆಳಿಗ್ಗೆ ಏನಾಯ್ತು? ರಕ್ಷಣಾ ಸಚಿವರೇ ಬಿಚ್ಚಿಟ್ಟ ಸತ್ಯ!
ನವದೆಹಲಿ, ಮಾರ್ಚ್ 20: "ಫೆಬ್ರವರಿ 26 ರಂದು ಬೆಳಿಗ್ಗೆ 4 ಗಂಟೆಗೆ ನನಗೆ ಫೋನ್ ಕಾಲ್ ಬಂತು. ಆಪರೇಶನ್ ಮುಗಿದಿದೆ, ಎಲ್ಲರೂ ಸೇಫ್ ಆಗಿ ಹಿಂದಿರುಗಿದ್ದಾರೆ, ಎಲ್ಲ ಪೈಲೆಟ್ ಗಳೂ ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ತಿಳಿಯಿತು. ಆಗಲೇ ನಾನು ನಿಟ್ಟುಸಿರು ಬಿಟ್ಟಿದ್ದು" ಎಂದು ಏರ್ ಸ್ಟ್ರೈಕ್ ಕುರಿತ ಕೆಲವು ಮಾಹಿತಿಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ.
ಲೇಖಕಿ ಸೋನಿಯಾ ಸಿಂಗ್ ಅವರ Defining India: Through Their Eyes' ಎಂಬ ಪುಸ್ತಕದಲ್ಲಿ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಸಂದರ್ಶನದ ಭಾಗದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
1971 ರ ಯುದ್ಧದ ನಂತರ ಭಾರತೀಯ ರಕ್ಷಣಾ ವಲಯದಲ್ಲಾದ ಬದಲಾವಣೆಗಳ ಕುರಿತೂ ಉಲ್ಲೇಖಿಸಲಾಗಿದೆ.

"ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲು ನಮಗೆ ನಮ್ಮ ದೇಶದ ಸಮಸ್ಯೆಗಳನ್ನು ಬಗೆಹರಿಸುವುದೇ ದೊಡ್ಡ ವಿಷಯವಾಗಿತ್ತು. ಆದರೆ ಈಗ ನಾವು ಭಯೋತ್ಪಾದನೆಯನ್ನು ಸಹಿಸಿ ಕೂರೋಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದೇವೆ" ಎಂದು ಸಂದರ್ಶನದಲ್ಲಿ ಸೀತಾರಾಮನ್ ಹೇಳಿದರು.
"ಪುಲ್ವಾಮಾ ದಾಳಿಯ ನಂತರ 10 ದಿನಗಳ ಕಾಲ ನಾವು ಕಾದೆವು. ಏಕೆಂದರೆ ನಮ್ಮ ಉದ್ದೇಶ ಪಾಕಿಸ್ತಾನವನ್ನಾಗಲೀ, ಅದರ ಸೇನೆಯನ್ನಾಗಲಿ ಗುರಿಯಾಗಿಸಿದ್ದಾಗಿರಲಿಲ್ಲ. ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದಾಗಿತ್ತು. ಅದನ್ನು ಸೇನೆಯ ಋಣಾತ್ಮಕ ಹೆಜ್ಜೆ ಎಂದು ನೋಡುವುದು ಸರಿಯಲ್ಲ. ಬಾಲಕೋಟ್ ನ ಭಯೋತ್ಪಾದಕ ನೆಲೆಯ ಮೇಲೆ ದಾಳಿ ಮಾಡುವ ಮೊದಲು ನಾವು ಸುಖಾ ಸುಮ್ಮನೆ ದಾಳಿ ಮಾಡಲಿಲ್ಲ. ಅದಕ್ಕೂ ಮುನ್ನ ಆ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದೆವು, ಗುಪ್ತಚರ ಇಲಾಖೆಯ ಮೂಲಕ ಸಾಕಷ್ಟು ಮಾಹಿತಿ ಪಡೆದಿದ್ದೆವು" ಎಂದು ಅವರು ಹೇಳಿದರು.
"26/11 ರ ಮುಂಬೈ ದಾಳಿಯ ನಂತರ ಉಗ್ರನೆಲೆ ಪಾಕಿಸ್ತಾನವೇ ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷಿಗಳು ಸಿಕ್ಕವು. ನಮ್ಮ ಹಿಂದಿನ ಸರ್ಕಾರಗಳೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರೂ ಅದನ್ನು ಪಾಕಿಸ್ತಾನ ಒಪ್ಪಿಕೊಳ್ಳಲಿಲ್ಲ. ವಿಶ್ವಸಂಸ್ಥೆಯೂ ಕೆಲವು ದೇಶಗಳು ಅಡ್ಡಿಪಡಿಸಿದ ಪರಿಣಾಮ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಕರೆಯಲು ಸಾಧ್ಯವಾಗಲಿಲ್ಲ. 2008 ರಿಂದಲೂ ಭಾರತ ಅದಕ್ಕಾಗಿ ಪ್ರಯತ್ನಿಸಿದೆ. ಈಗಲೂ ಅದೇ ಮುಂದುವರಿದಿದೆ"ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.












Click it and Unblock the Notifications