ಕವಿ ವರವರ ರಾವ್ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ
ನವದೆಹಲಿ, ಮಾರ್ಚ್ 07: ನಾನಾವತಿ ಆಸ್ಪತ್ರೆಯಿಂದ ಕವಿ ವರವರ ರಾವ್ ಬಿಡುಗಡೆಗೊಂಡಿದ್ದಾರೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
81 ವರ್ಷದ ವರವರ ರಾವ್ ಅವರಿಗೆ ಫೆ.22ರಂದು ವೈದ್ಯಕೀಯ ಕಾರಣಗಳಿಂದಾಗಿ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಸೂಕ್ತ ಜಾಮೀನುದಾರರು ದೊರೆಯುವವರೆಗೂ ನಗದು ಜಾಮೀನು ನೀಡಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಕಳೆದ ಸೋಮವಾರ ನ್ಯಾಯಾಲಯ ಅನುಮತಿ ನೀಡಿತ್ತು.
ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಅವನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ವರವರ ರಾವ್ ಅವರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ನಡೆಸುತ್ತಿದ್ದು, ಎಲ್ಗಾರ್ ಪರಿಷದ್ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪವನ್ನು ರಾವ್ ಮೇಲೆ ಹೊರಿಸಿದೆ.

ಈ ಭಾಷಣದಿಂದಾಗಿ 2017ರ ಡಿಸೆಂಬರ್ 31ರಂದು ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಗಲಭೆ ನಡೆಯಿತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಮಾವೋವಾದಿಗಳ ಜತೆ ಸೇರಿ ವರವರ ರಾವ್ ಮತ್ತು ಇತರ 9 ಜನ ಸಾಮಾಜಿಕ ಕಾರ್ಯಕರ್ತರು ಈ ಹಿಂಸಾಚಾರ ನಡೆಸಿದ್ದಾರೆ ಎಂಬುದು ಎನ್ಐಎ ಆರೋಪವಾಗಿದೆ. ಆದರೆ ರಾವ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಜಾಮೀನಿನ ಬಳಿಕ ಮುಂಬಯಿನಲ್ಲಿಯೇ ಇರುವಂತೆ ನ್ಯಾಯಾಲಯ ಆದೇಶಿಸಿದ್ದು, ಅಗತ್ಯ ಬಿದ್ದಾಗ ವಿಚಾರಣೆಗೆ ಲಭ್ಯವಿರುವಂತೆ ಸೂಚಿಸಿದೆ. ಮತ್ತು ತಮ್ಮ ಪಾಸ್ಪೋರ್ಟ್ನ್ನು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಆದೇಶ ನೀಡಿದೆ.
ಇದಲ್ಲದೆ ಪ್ರಕರಣದ ಇನ್ನಿತರ ಆರೋಪಿಗಳ ಜತೆ ಯಾವುದೇ ಸಂಪರ್ಕ ಬೆಳೆಸಬಾರದು ಎಂದಿರುವ ಕೋರ್ಟ್, 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಇದೇ ಮೊತ್ತದ ಇನ್ನೆರಡು ಭದ್ರತಾ ಠೇವಣಿ ನೀಡುವಂತೆ ಹೇಳಲಾಗಿತ್ತು.












Click it and Unblock the Notifications