ಭಗವಾಧ್ವಜ ಹೇಳಿಕೆ ವಿವಾದ: ಈಶ್ವರಪ್ಪ ಬಂಧನಕ್ಕೆ ಎಎಪಿ ಆಗ್ರಹ
ನವದೆಹಲಿ, ಜೂ. 1: ಮುಂದೊಂದು ದಿನ ಕೇಸರಿ ಧ್ವಜ ರಾಷ್ಟ್ರಧ್ವಜವಾಗಲಿದೆ ಎಂಬ ಬಿಜೆಪಿ ಮಾಜಿ ಸಚಿವ ಕೆ. ಈಶ್ವರಪ್ಪ ಹೇಳೀಕೆ ಸಂಬಂಧಿಸಿದಂತೆ ಎಎಪಿ ಮುಖಂಡ ಸಂಜಯ್ ಸಿಂಗ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವ ಈಶ್ವರಪ್ಪ ಅವರು ಕೇಸರಿ ಧ್ವಜವನ್ನು ಸಾವಿರಾರು ವರ್ಷಗಳಿಂದ ಗೌರವಿಸಲಾಗಿದೆ. ಮತ್ತು ಇದು ನಿಸ್ಸಂದೇಹವಾಗಿ ಒಂದು ದಿನ ರಾಷ್ಟ್ರಧ್ವಜವಾಗಲಿದೆ ಎಂದು ಹೇಳಿದ್ದಾರೆ. ನವಹೆದಲಿಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಿಸಲು ಅರ್ಜಿ ಸಲ್ಲಿಸಿದ್ದೇನೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.

ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ
ಮುಂದೊಂದು ದಿನ ಕೇಸರಿ ಧ್ವಜ ಭಾರತದ ರಾಷ್ಟ್ರಧ್ವಜವಾಗುತ್ತದೆ ಎಂದು ಹೇಳುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅರ್ಜಿ ನೀಡಿದ್ದೇನೆ. 50 ವರ್ಷಗಳಿಗೂ ಹೆಚ್ಚು ಕಾಲ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಹಾಗಾಗಿ ಬಿಜೆಪಿ ರಾಷ್ಟ್ರಧ್ವಜವನ್ನು ವಿರೋಧಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ಈಶ್ವರಪ್ಪ ಅವರ ಹೇಳಿಕೆಗಾಗಿ ಅವರನ್ನು ಬಂಧಿಸಬೇಕು ಎಂದರು.

ಈಶ್ವರಪ್ಪ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದ
ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು. ಕೇಸರಿ ಧ್ವಜವು ಭವಿಷ್ಯದಲ್ಲಿ ದೇಶದ ರಾಷ್ಟ್ರಧ್ವಜವಾಗಬಹುದು ಎಂದು ಕರ್ನಾಟಕದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದರು. ಈ ನಾಡಿನಲ್ಲಿ ಹಿಂದಿನಿಂದಲೂ ಕೇಸರಿ ಧ್ವಜಕ್ಕೆ ಗೌರವವಿದೆ, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಕೇಸರಿ ಧ್ವಜ ತ್ಯಾಗ ಬಲಿದಾನದ ಸಂಕೇತವಾಗಿದೆ, ಅದನ್ನು ಮೈಗೂಡಿಸಿಕೊಳ್ಳಲು ಆರ್ ಎಸ್ ಎಸ್ ಕಚೇರಿಯಲ್ಲಿ ಕೇಸರಿ ಧ್ವಜದ ಮುಂದೆ ಪ್ರಾರ್ಥಿಸುತ್ತೇವೆ. ನಮ್ಮಲ್ಲಿ ಮೌಲ್ಯಗಳಿವೆ, ಕೇಸರಿ ಧ್ವಜ ಮುಂದೊಂದು ದಿನ ಈ ದೇಶದಲ್ಲಿ ರಾಷ್ಟ್ರಧ್ವಜವಾಗಬಹುದು, ಅದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಹೇಳಿಕೆ ನೀಡಿದ್ದು ದೇಶಾದ್ಯಂತ ಸುದ್ದಿ
"ಕಾಂಗ್ರೆಸ್ನವರು ಹೇಳಿದಾಗಲೆಲ್ಲಾ ನಾವು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿಲ್ಲ. ನಮ್ಮ ಸಂವಿಧಾನದ ಪ್ರಕಾರ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ಅದಕ್ಕೆ ಗೌರವವನ್ನು ನಾವು ನೀಡುತ್ತೇವೆ" ಎಂದು ಹೇಳಿದರು. ಫೆಬ್ರವರಿ ತಿಂಗಳಲ್ಲಿ ಈಶ್ವರಪ್ಪ ಇದೇ ರೀತಿ ಹೇಳಿಕೆ ನೀಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈಶ್ವರಪ್ಪ ಹೇಳಿಕೆ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ದೇಶಾದ್ಯಂತ ಹಲವರು ಈಶ್ವರಪ್ಪ ಹೇಳಿಕೆ ವಿರುದ್ಧ ಕಿಡಿಕಾರಿದ್ದರು.

ಸದನದೊಳಗೆ ಇದೇ ರೀತಿಯ ಹೇಳಿಕೆ
ಕೆಂಪುಕೋಟೆಯಲ್ಲಿ ಕೇಸರಿ ಬಾವುಟ ಹಾರಿಸಲಾಗುವುದು ಎಂದು ಈಶ್ವರಪ್ಪ ಹೇಳಿದಾಗ ಫೆಬ್ರವರಿಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈಶ್ವರಪ್ಪ ಅವರು ಸದನದೊಳಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರಿ ಕೋಲಾಹಲ ಎದ್ದಿತ್ತು. ಸಚಿವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿತ್ತು. ಕರ್ನಾಟಕ ವಿಧಾನಸಭೆಯೊಳಗೆ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿದ್ದವು. ಒಂದಲ್ಲ ಒಂದು ದಿನ ಕೆಂಪು ಕೋಟೆಯಲ್ಲಿ ಕೇಸರಿ ಬಾವುಟ ಹಾರಿಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications