ತದ್ರೂಪು ವ್ಯಕ್ತಿಯನ್ನು ಗಂಭೀರ್ ಪ್ರಚಾರಕ್ಕೆ ಬಳಸುತ್ತಿದ್ದಾರೆ: ಎಎಪಿ ಆರೋಪ
ನವದೆಹಲಿ, ಮೇ 10: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರು ತಮ್ಮಂತೇ ಕಾಣುವ ಮತ್ತೊಬ್ಬ ವ್ಯಕ್ತಿಯನ್ನು ಬಳಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಎಎಪಿಯ ಪ್ರಮುಖ ಮುಖಂಡ ದೆಹಲಿ ಸಚಿವ ಮನೀಷ್ ಸಿಸೋಡಿಯಾ ಗೌತಮ್ ಗಂಭೀರ್ ಅವರ ಚುನಾವಣಾ ಪ್ರಚಾರದ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಕಾರಿನಲ್ಲಿ ಗೌತಮ್ ಗಂಭೀರ್ ಕುಳಿತಿದ್ದಾರೆ, ಅದೇ ಕಾರಿನ ಹಿಂಬದಿಯಲ್ಲಿ ಗೌತಮ್ ಗಂಭೀರ್ ಅನ್ನೇ ಹೋಲುವ ವ್ಯಕ್ತಿಯೊಬ್ಬರು ಜನರತ್ತ ಕೈಬೀಸುತ್ತಾ ಮತಯಾಚನೆ ಮಾಡುತ್ತಿದ್ದಾರೆ.
ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಗೌತಮ್ ಗಂಭೀರ್ ತಾನು ಆರಾಮವಾಗ ಏಸಿ ಕಾರಿನಲ್ಲಿ ಕೂತು, ತಮ್ಮಂತೇ ಕಾಣುವ ವ್ಯಕ್ತಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಚಿತ್ರದಲ್ಲಿರುವ ವ್ಯಕ್ತಿಯು ಗೌತಮ್ ಗಂಭೀರ್ ಅನ್ನು ಹೋಲುತ್ತಿದ್ದು, ಹಾರ ಹಾಕಿಕೊಂಡು, ಬಿಜೆಪಿ ಬಾವುಟವನ್ನು ಹೆಗಲಿಗೆ ಹಾಕಿಕೊಂಡು ಜನರತ್ತ ಕೈಬೀಸುತ್ತಿದ್ದಾರೆ, ಆತ ಟೋಪಿ ಧರಿಸಿದ್ದು, ಬಹುತೇಕ ಗೌತಮ್ ಗಂಭೀರ್ ಅವರನ್ನೇ ಹೋಲುತ್ತಿದ್ದಾನೆ.
ಗೌತಮ್ ಗಂಭೀರ್ ವಿರುದ್ಧ ಎಎಪಿಯು ಕೆಲ ದಿನಗಳ ಹಿಂದಷ್ಟೆ ಗಂಭೀರ ಆರೋಪವೊಂದನ್ನು ಮಾಡಿತ್ತು, ಅವರ ಎದುರಾಳಿ ಎಎಪಿ ಮಹಿಳಾ ಅಭ್ಯರ್ಥಿ ಅತಿಶಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಗಂಭೀರ್, ಆರೋಪ ಸಾಬೀತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.












Click it and Unblock the Notifications