2022ರಲ್ಲಿ ಆರು ರಾಜ್ಯಗಳ ಮೇಲೆ ಗುರಿ ಇಟ್ಟಿರುವ ಆಪ್!
ನವದೆಹಲಿ, ಜನವರಿ.28: ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಹೊಂದಿರುವ ಆಮ್ ಆದ್ಮಿ ಪಕ್ಷ(ಆಪ್)ವು ಮುಂದಿನ ವರ್ಷದಲ್ಲಿ ನಡೆಯಲಿರುವ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
2022ನೇ ಸಾಲಿನಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ವೇಳೆ ಆಪ್ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಪಕ್ಷದ 9ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ!
ನವದೆಹಲಿಯಲ್ಲಿ ನಡೆದ 9ನೇ ರಾಷ್ಟ್ರೀಯ ಸಮಿತಿ ಸಭೆ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದರು. ಬೇರೆ ಪಕ್ಷಗಳಿಗೆ ಯಾವುದೇ ಧ್ಯೇಯೋದ್ದೇಶಗಳಿಲ್ಲ. ಎಲ್ಲ ಪಕ್ಷಗಳು ಕೇವಲ ನಡೆದು ಹೋಗಿರುವ ಇತಿಹಾಸದ ಬಗ್ಗೆಯೇ ಮಾತನಾಡುತ್ತಿವೆ. ಆದರೆ ಆಪ್ ಎಲ್ಲ ಪಕ್ಷಗಳಿಗಿಂತ ಭಿನ್ನವಾಗಿ ಆಲೋಚಿಸುತ್ತದೆ. ಮುಂಬರುವ 21 ಮತ್ತು 22ನೇ ಶತಮಾನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಪ್ ಕಾರ್ಯ ನಿರ್ವಹಿಸಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಆಪ್ ಸಂಘಟನೆ:
ದೇಶಾದ್ಯಂತ ಆಮ್ ಆದ್ಮಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕಿದೆ. 2022ನೇ ವರ್ಷದಲ್ಲಿ ಎದುರಾಗಲಿರುವ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆ ಮೂಲಕ ದೆಹಲಿಯಿಂದ ಇಡೀ ದೇಶಕ್ಕೆ ಪಕ್ಷವನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.
ದೆಹಲಿ ಹಿಂಸಾಚಾರಕ್ಕೆ ಕೇಜ್ರಿವಾಲ್ ಖಂಡನೆ:
ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ ಜಾಥಾ ಹಿಂಸೆಗೆ ತಿರುಗಿದರ ಹಿಂದೆ ಯಾವುದೇ ವ್ಯಕ್ತಿ ಅಥವಾ ಪಕ್ಷಗಳಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕಿದೆ ಎಂದು ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದರು.