ದೆಹಲಿ ಚುನಾವಣೆ ಅಖಾಡದಲ್ಲಿ ಕಂಡುಬಂದ 8 ವಿವಾದ
ನವದೆಹಲಿ, ಫೆ. 6: ರಾಷ್ಟ್ರ ರಾಜಧಾನಿಯಲ್ಲಿ ಬಹಿರಂಗ ಹೋರಾಟ ಅಂತ್ಯಗೊಂಡಿದೆ. ತೀವ್ರ ಹಣಾಹಣಿ ಇರುವ ಬಿಜೆಪಿ ಹಾಗೂ ಆಮ್ ಆದ್ಮಿ ಪ್ರಚಾರ ಆಖಾಡದಿಂದ ತಂತ್ರಕ್ಕೆ ಮೊರೆ ಹೋಗಿವೆ.
ಸರ್ಕಾರ ನಡೆಸಲಾಗದೆ ಅಧಿಕಾರ ತೊರೆದಿದ್ದ ಅರವಿಂದ ಕೇಜ್ರಿವಾಲ್ ಫೀನಿಕ್ಸ್ನಂತೆ ಎದ್ದುಬರಲು ತಯಾರಿ ನಡೆಸುತ್ತಿದ್ದಾರೆ. ಕೇವಲ ಆರು ತಿಂಗಳ ಹಿಂದೆ ಟೀಕಿಸಿದ್ದ ಜನ ಮತ್ತೆ ಕೇಜ್ರಿವಾಲ್ ಕ್ರೇಜ್ಗೊಳಗಾಗಿದ್ದಾರೆ. [ಎಎಪಿಗೆ ಅರ್ಧ ಶತಕ ಸಂಭ್ರಮ]
ಆದರೆ, ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಮಧ್ಯೆ ಆಪ್ ಮತ್ತು ಬಿಜೆಪಿ ಪರಸ್ಪರ ಹಳಿದುಕೊಂಡಿದ್ದು ಹಲವು ಬಾರಿ ಅಹಸ್ಯ ಮೂಡಿಸಿದರೆ ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಆಗಿತ್ತು. ಇವುಗಳ ಮಧ್ಯೆ ದೆಹಲಿಗರ ಅತ್ಯಂತ ಅಗತ್ಯಗಳಾದ ನೀರು, ವಿದ್ಯುತ್, ಅಕ್ರಮ ಬಡಾವಣೆಗಳ ಸಕ್ರಮ ಹಾಗೂ ಸಂಪೂರ್ಣ ರಾಜ್ಯಾಧಿಕಾರಗಳು ಮೂಲೆಗುಂಪಾಗುವ ಆತಂಕವೂ ಎದುರಾಗಿತ್ತು.
1. ಆಮ್ ಆದ್ಮಿಗೆ ಬಂದ ದೇಣಿಗೆಯ ಹಣದ ಮೂಲ
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಯಿಂದ 50 ಲಕ್ಷ ರು. ಮೌಲ್ಯದ ನಾಲ್ಕು ಚೆಕ್ಗಳನ್ನು ದೇಣಿಗೆಯಾಗಿ ಸ್ವೀಕರಿಸಿದ್ದು ವಿವಾದ ಸೃಷ್ಟಿಸಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ಕೂಡ "ಆಮ್ ಆದ್ಮಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ" ಎಂದು ಟೀಕಿಸಿದರು.
"ಭ್ರಷ್ಟರು ಯಾರು, ಪ್ರಾಮಾಣಿಕರು ಯಾರು ಎಂಬುದನ್ನು ಅರವಿಂದ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಆರೋಪಿಸುತ್ತಿದ್ದರು. ಆದರೆ, ತಮ್ಮ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ನೋಡಬೇಕು" ಎಂದು ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್ ಟೀಕಿಸಿದ್ದರು. [ದೆಹಲಿ ಚುನಾವಣೆ ಪಕ್ಷಿನೋಟ]
ಆದರೆ, ಆಪ್ ತಾನು ತಪ್ಪು ಮಾಡಿಲ್ಲ ಎಂದು ವಾದಿಸಿ, ಯಾವುದೇ ತನಿಖೆಗೆ ಸಿದ್ಧ ಎಂದು ಘೋಷಿಸಿತು.
2. ಕೇಜ್ರಿವಾಲ್ ಜಾತಿ ಕೆಣಕಿದ ಬಿಜೆಪಿ
ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸಿ ಪ್ರಕಟಿಸಿದ ಜಾಹೀರಾತಿನಲ್ಲಿ ಅವರನ್ನು "ಉಪದ್ರವಿ ಗೋತ್ರ"ದ ವ್ಯಕ್ತಿ ಎಂದು ಟೀಕಿಸಲಾಗಿತ್ತು. ಇದು ಸಂಪೂರ್ಣ ಅಗರ್ವಾಲ್ ಸಮುದಾಯಕ್ಕೇ ಮಾಡಿದ ಅವಮಾನ ಎಂದು ಕೇಜ್ರಿವಾಲ್ ಟೀಕಿಸಿದರು.
ನಂತರ ಸ್ಪಷ್ಟೀಕರಣ ನೀಡಿದ ಬಿಜೆಪಿ "ನಾವು ಆಪ್ನ ಅರಾಜಕತೆಯನ್ನು ಟೀಕಿಸಿದ್ದೇವೆ, ಜಾತಿಯನ್ನಲ್ಲ" ಎಂದಿತು. ನರೇಂದ್ರ ಮೋದಿ ಅವರು ಕೇಜ್ರಿವಾಲ್ರನ್ನು ನಕ್ಸಲರಿಗೆ ಹೋಲಿಸಿದರು.
ಬಿಜೆಪಿಯ ಮತ್ತೊಂದು ಜಾಹೀರಾತಿನಲ್ಲಿ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ನೊಂದಿಗೆ ಮದುವೆಯಾಗುತ್ತಿರುವುದು ಹಾಗೂ ಹಿಂದೆ ಅಣ್ಣಾ ಹಜಾರೆ ಮೃತಪಟ್ಟಂತೆ ಅವರ ಭಾವಚಿತ್ರಕ್ಕೆ ಹಾರ ಹಾಕಿದ್ದ ರೇಖಾಚಿತ್ರ ರಚಿಸಿ ಜಾಹೀರಾತು ಪ್ರಕಟಿಸಿತು.
ಇದನ್ನು ಟೀಕಿಸಿದ ಕೇಜ್ರಿವಾಲ್ ಗೋಡ್ಸೆ ಅಂದು ಗಾಂಧೀಜಿಯನ್ನು ಕೊಂದರೆ, ಇಂದು ಬಿಜೆಪಿ ಅಣ್ಣಾ ಹಜಾರೆ ಅವರ ಹತ್ಯೆ ಮಾಡಿತು ಎಂದರು.
3. ಕೇಜ್ರಿವಾಲ್ ವಿರುದ್ಧ ಶಾಜಿಯಾ ಇಲ್ಮಿ
ಬಿಜೆಪಿ ಸೇರಿದ ಶಾಜಿಯಾ ಇಲ್ಮಿ ತಾನು ಆಮ್ ಆದ್ಮಿ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು. ಕೆಲವು ತಿಂಗಳುಗಳ ಹಿಂದೆ ಶಾಜಿಯಾ ಅವರು ಬಿಜೆಪಿಯನ್ನು ಬೂಟಾಟಿಕೆಯ ಪಕ್ಷ ಎಂದು ಟೀಕಿಸಿ ಮಾಡಿದ್ದ ಟ್ವೀಟ್ ಅನ್ನು ಕೇಜ್ರಿವಾಲ್ ರಿಟ್ವೀಟ್ ಮಾಡಿದರು. ಅಂದಿನಿಂದ ಕೇಜ್ರಿವಾಲ್ ಹಾಗೂ ಶಾಜಿಯಾ ಮಧ್ಯೆ ನೇರ ಹಣಾಹಣಿ ಆರಂಭವಾಯಿತು. [ಬಿಜೆಪಿ, ಎಎಪಿ ಭರವಸೆಯಲ್ಲಿನ ಸಾಮ್ಯತೆ]
4. ಇಂಗ್ಲೆಂಡ್ನ ಸೂಟ್, ಇಟಲಿಯ ಕನ್ನಡಕ
ಮೇಕ್ ಇನ್ ಇಂಡಿಯಾ ಪ್ರತಿಪಾದಿಸುವ ನರೇಂದ್ರ ಮೋದಿ ಅವರು ಭಾರತಕ್ಕೆ ಒಬಾಮ ಬಂದಾಗ ಇಂಗ್ಲೆಂಡ್ ಟೇಲರ್ ಹೊಲಿದಿದ್ದ 10 ಲಕ್ಷ ರು. ಮೌಲ್ಯದ ಸೂಟ್ ಧರಿಸಿದ್ದರು ಎಂದು ಕಾಂಗ್ರೆಸ್ನ ರಾಹುಲ್ ಗಾಂಧಿ ಪ್ರಚಾರ ಸಂದರ್ಭ ಟೀಕಿಸಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ "ರಾಹುಲ್ ಗಾಂಧಿ ಇಟಲಿ ಮೇಡ್ ಕನ್ನಡಕ ಧರಿಸುತ್ತಾರೆ" ಎಂದು ವ್ಯಂಗ್ಯವಾಡಿದರು.
5. ಮತಕ್ಕಾಗಿ ಹೆಂಡ, ಹಣ, ಮಾಂಸ
ಆಮ್ ಆದ್ಮಿ ಅಭ್ಯರ್ಥಿಯೋರ್ವ ಮತಕ್ಕಾಗಿ ಹೆಂಡ ಹಂಚುತ್ತಿದ್ದ ಎಂದು ದೆಹಲಿ ಪೊಲೀಸರು ಆರೋಪಿಸಿದರು. ಇದಕ್ಕೆ ತಿರುಗೇಟು ನಡಿದ ಆಮ್ ಆದ್ಮಿ ಮುಖಂಡ ಅಶುತೋಶ್ ಬಿಜೆಪಿಯವರು ಹಣ, ಹೆಂಡ ಹಾಗೂ ಮಾಂಸ ಹಂಚುತ್ತಿದ್ದಾರೆ. ಈ ಕುರಿತು ನಮಗೆ ಮಾಹಿತಿ ಬಂದಿದೆ ಎಂದು ಟ್ವೀಟ್ ಮಾಡಿದರು. [ಚುನಾವಣೆಯಲ್ಲಿ ಹಣದ ಚಲಾವಣೆ ಹೇಗೆ?]
ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ಮಾತನಾಡಿ, "ಆಮ್ ಆದ್ಮಿ ಪಕ್ಷ ತನ್ನ ಟಿಕೆಟ್ ಮಾರಿದೆ. ಅವರ ಅಭ್ಯರ್ಥಿಗಳು ಹೆಂಡ ಸಂಗ್ರಹಿಸಿ ಹಂಚುತ್ತಿದ್ದಾರೆ" ಎಂದು ಟೀಕಿಸಿದರು.
6. ಹಣ ತಗೊಳ್ಳಿ ಎಂದರು ಕೇಜ್ರಿವಾಲ್
ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅರವಿಂದ ಕೇಜ್ರಿವಾಲ್ ಮಾತನಾಡುತ್ತ "ಬಿಜೆಪಿ ಹಾಗೂ ಕಾಂಗ್ರೆಸ್ ನೀಡುವ ಹಣ ಪಡೆಯಿರಿ. ಆದರೆ, ಮತ ಮಾತ್ರ ಆಮ್ ಆದ್ಮಿಗೆ ಹಾಕಿ" ಎಂದು ಕರೆ ನೀಡಿದರು. ಆಗ ಕೇಜ್ರಿವಾಲ್ ಅವರ ನಾಮಪತ್ರ ತಿರಸ್ಕರಿಸಬೇಕೆಂದು ಎರಡೂ ಪಕ್ಷಗಳು ಚುನಾವಣಾ ಆಯೋಗವನ್ನು ಆಗ್ರಹಿಸಿದವು.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವಕಾಶವಾದಿ ಎಂದು ಜರಿದು ಅವರ ಭಾವಚಿತ್ರ ಮುದ್ರಿಸಿ ಆಪ್ ಪ್ರಕಟಿಸಿತು. ಇದನ್ನು ಬಿಜೆಪಿ ವಿರೋಧಿಸಿತು. ತಮ್ಮ ಭಾವಚಿತ್ರವನ್ನು ಒಪ್ಪಿಗೆ ಇಲ್ಲದೆ ಮುದ್ರಿಸಲಾಗಿದೆ ಎಂದು ಕಿರಣ್ ಬೇಡಿ ಆರೋಪಿಸಿದರು.
6. ಚುನಾವಣೆ ಯಂತ್ರ ತಿರುಚುವಿಕೆ
ಬಿಜೆಪಿ ಗೆಲುವಿಗಾಗಿ ಚುನಾವಣಾ ಯಂತ್ರಗಳನ್ನು ತಿರುಚುತ್ತಿದೆ ಎಂಬ ಶಂಕಿಯಿದೆ. ಈ ಕುರಿತು ಚುನಾವಣಾ ಆಯುಕ್ತರಿಗೆ ದೂರು ನೀಡಲು ಹೋದರೆ ಅವರು ಬೇರೆ ಕಾರ್ಯದಲ್ಲಿ ಮಗ್ನರಾಗಿದ್ದರು ಎಂದು ಆರೋಪಿಸಿ ಕೇಜ್ರಿವಾಲ್ ಟ್ವೀಟ್ ಮಾಡಿದರು.
ಆದರೆ, ಈ ಆರೋಪ ನಿರಾಕರಿಸಿದ ಆಯೋಗ ಚುನಾವಣೆ ಯಂತ್ರಗಳನ್ನು ತಿರುಚುವುದು ಅಸಾಧ್ಯ ಎಂದಿತು.
7. ಈಶಾನ್ಯ ರಾಜ್ಯದವರನ್ನು ವಲಸಿಗರು ಎಂದ ಬಿಜೆಪಿ
ಬಿಜೆಪಿ ಬಿಡುಗಡೆ ಮಾಡಿದ ದೂರದೃಷ್ಟಿ ದಾಖಲೆಯಲ್ಲಿ ಈಶಾನ್ಯ ರಾಜ್ಯದವರನ್ನು ವಲಸಿಗರು ಎಂದು ಆರೋಪಿಸಲಾಯಿತು. ಇದರಿಂದ ಈಶಾನ್ಯ ರಾಜ್ಯದವರು ಪ್ರತಿಭಟನೆಗಿಳಿದರು. ಆಗ ಬಿಜೆಪಿ ತಕ್ಷಣ ಈ ಅಂಶವನ್ನು ತೆಗೆದುಹಾಕಿತು. ಆದರೂ ಅಸ್ಸಾಂನಲ್ಲಿ ಪ್ರತಿಭಟನೆ ಮುಂದುವರಿಯಿತು.