ಐವರು ನ್ಯಾಯಮೂರ್ತಿಗಳ ಪೀಠದಿಂದ ಜ. 10ಕ್ಕೆ ಅಯೋಧ್ಯಾ ಪ್ರಕರಣ ವಿಚಾರಣೆ
ನವದೆಹಲಿ, ಜನವರಿ 8: ಅಯೋಧ್ಯಾ ಮಂದಿರ-ಮಸೀದಿ ಪ್ರಕರಣವನ್ನು ಯಾವಾಗ ಕೈಗೆತ್ತಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಗುರುವಾರದಂದು (ಜನವರಿ 10) ನಿರ್ಧಾರ ಮಾಡಲಿದೆ.
ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ, ಎನ್.ವಿ.ರಮಣ, ಯು.ಯು.ಲಲಿತ್ ಹಾಗೂ ಡಿ.ವೈ.ಚಂದ್ರಚೂಡ್ ಈ ಪೀಠದಲ್ಲಿ ಇರಲಿದ್ದಾರೆ. ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯವು ಕಳೆದ ಆರು ದಶಕಗಳಿಂದ ಹಾಗೇ ಉಳಿದಿದೆ. ಇಡೀ ದೇಶದಲ್ಲಿ ರಾಜಕೀಯ ವಿಭಜನೆಗೆ ಕಾರಣವಾಗಿರುವ ಈ ವಿವಾದ ಮತ್ತೆ ಬಿಸಿ ಪಡೆದುಕೊಂಡಿದೆ.
ಹದಿನಾರನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬಾಬ್ರಿ ಮಸೀದಿಯನ್ನು 1992ರಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆಡವಿದ್ದರು. ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬ ಧ್ವನಿ ತೀವ್ರಗೊಂಡಿದೆ. ಆಡಳಿತಾರೂಢ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಪೈಕಿ ಬಲಪಂಥೀಯ ಆಲೋಚನೆ ಇರುವಂಥ ನಾಯಕರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಡಿಸೆಂಬರ್ 6, 1992ರಂದು ಮಸೀದಿ ಕೆಡವಿದ್ದರು
ಅದು ಕೂಡ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಆಗ್ರಹಿಸುತ್ತಿದ್ದು, ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ವಿಚಾರಣೆ ಆಲಿಸಲು ಕಳೆದ ವರ್ಷ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕಳೆದ ಶುಕ್ರವಾರದಂದು ಅರವತ್ತು ಸೆಕೆಂಡ್ ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಯಾವಾಗ ಕೈಗೆತ್ತಿಕೊಳ್ಳಬೇಕು ಎಂದು ಜನವರಿ ಹತ್ತನೇ ತಾರೀಕಿನಂದು ಪೀಠವು ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿತ್ತು. ಬಾಬ್ರಿ ಮಸೀದಿ ಇದ್ದ 2.7 ಎಕರೆ ಭೂಮಿ ವಿವಾದ ಇದ್ದು, ಮಸೀದಿಯನ್ನು ಡಿಸೆಂಬರ್ 6, 1992ರಂದು ಕೆಡವಲಾಗಿತ್ತು.

ಅಲಹಾಬಾದ್ ಹೈ ಕೋರ್ಟ್ ತೀರ್ಪು ವಿರುದ್ಧ ಮೇಲ್ಮನವಿ
ವಿವಾದಿತ ಭೂಮಿಯು ರಾಮ ಜನ್ಮಭೂಮಿಯೇ. ಅದರಲ್ಲಿ ಮೂರನೇ ಎರಡು ಭಾಗದಷ್ಟು ಜಾಗವನ್ನು ಹಿಂದೂಗಳಿಗೆ ನೀಡಬೇಕು 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಹೇಳಿತ್ತು. ಇನ್ನು ಬಾಕಿ ಭೂಮಿಯು ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಸಮಿತಿಗೆ ಸೇರಬೇಕು ಎಂದಿತ್ತು. 2011ರಲ್ಲಿ ಹಿಂದೂ ಹಾಗೂ ಮುಸ್ಲಿಮರ ಸಂಘಟನೆಗಳು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದವು. ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲಾಯಿತು.

ಯಾವುದು ಸೂಕ್ತ ಪೀಠ ಎಂಬ ನಿರ್ಧಾರ ಮಾಡುವುದಾಗಿ ಹೇಳಿತ್ತು
ಕಳೆದ ಅಕ್ಟೋಬರ್ ನಲ್ಲಿ ಉತ್ತರಪ್ರದೇಶ ಸರಕಾರವು ಪ್ರಕರಣದ ಹದಿನಾಲ್ಕು ಅರ್ಜಿಗಳ ವಿಚಾರಣೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು."ನಮಗೆ ನಮ್ಮದೇ ಆದ್ಯತೆಗಳಿರುತ್ತವೆ. ಜನವರಿ, ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಅಹವಾಲು ಕೇಳಲಾಗುವುದು. ಯಾವುದು ಸೂಕ್ತ ಪೀಠ ಎಂದು ನಿರ್ಧರಿಸಲಾಗುವುದು" ಎಂದು ಕೋರ್ಟ್ ಹೇಳಿತ್ತು.

ಕೋರ್ಟ್ ತೀರ್ಪು ಬಂದ ನಂತರ ಸರಕಾರದಿಂದ ತೀರ್ಮಾನ
ಯಾವಾಗ ಕೋರ್ಟ್ ಹೀಗೆ ಹೇಳಿತೋ ಆಗ ಬಲಪಂಥೀಯ ಗುಂಪುಗಳು ಹಾಗೂ ಬಿಜೆಪಿಯ ನಾಯಕರೇ ಈ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿದರು. ಹೊಸ ವರ್ಷದಲ್ಲಿ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ, ನ್ಯಾಯಾಲಯದ ಪ್ರಕ್ರಿಯೆ ಮುಗಿಯಲಿ. ಆ ನಂತರ ಸರಕಾರ ಏನು ಮಾಡಬೇಕೋ ಆ ಮೂಲಕವೇ ಅಯೋಧ್ಯಾ ವಿವಾದ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು.












Click it and Unblock the Notifications