ನೋಟು ನಿಷೇಧ ಘೋಷಣೆ ನಂತರ 469 ನಕ್ಸಲ್ಸ್ ಶರಣಾಗತಿ
ಗರಿಷ್ಠ ಮುಖಬೆಲೆಯ ನೋಟು ನಿಷೇಧ ಪರಿಣಾಮ ನಕ್ಸಲ್ ಚಟುವಟಿಕೆಗಳ ಮೇಲೂ ಗಾಢವಾಗಿ ಬೀರಿದೆ. ನವೆಂಬರ್ 8ರಿಂದ ಇದುವರೆಗೆ ಒಟ್ಟು 469 ನಕ್ಸಲರು ಶರಣಾಗತರಾಗಿದ್ದಾರೆ.
ನವದೆಹಲಿ, ನವೆಂಬರ್, 29: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬೆನ್ನು ಮೂಳೆ ಮುರಿಯಲು ಪ್ರಧಾನಿ ಮೋದಿ ಅವರು ಅಧಿಕ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಪ್ರಭಾವ ನಕ್ಸಲ್ ಚಟುವಟಿಕೆಗಳ ಮೇಲೂ ಬಿರಿದ್ದು, ನವೆಂಬರ್ 8ರಿಂದ ಇದುವರೆಗೆ ಒಟ್ಟು 469 ನಕ್ಸಲರು ಶರಣಾಗತರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಒಟ್ಟು ಒಟ್ಟು 564 ನಕ್ಸಲರು ಮತ್ತು ಅವರ ಬೆಂಬಲಿಗರು ಶರಣಾಗತರಾಗಿದ್ದು, ಇವರಲ್ಲಿ ಶೆ.70ರಷ್ಟು ಮಂದಿ ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯವರೇ ಆಗಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಈ ಬೆಳವಣಿಗೆ ನಡೆದಿದ್ದು, ನೋಟು ನಿಷೇಧ ಪರಿಣಾಮ ಕಾಳಧನಿಕರು ಮತ್ತು ಭ್ರಷ್ಟಾಚಾರಿಗಳಷ್ಟೇ ಅಲ್ಲದೇ ನಕ್ಸಲ್ ಮೇಲೂ ಬೀರಿದೆ.
ಶರಣಾಗತರಾಗಿರುವ ಹಲವು ನಕ್ಸಲರು "ನಮ್ಮ ಸಿದ್ಧಾಂತಗಳಲ್ಲಿ ದೃಢತೆ ಇಲ್ಲ ಅವೆಲ್ಲಾ ಟೊಳ್ಳು ಎಂದು ದೂರಿದ್ದಾರೆ" ಅಷ್ಟೇ ಅಲ್ಲದೆ ಹಲವು ಗ್ರಾಮಸ್ಥರು ನಕ್ಸಲರು ವಿರುದ್ಧ ದೂರುಗಳನ್ನು ನೀಡಿದ್ದಾರೆ. ಇದು ಕೂಡ ನಕ್ಸಲ್ ಚಟುವಟಿಕೆಗಳಿಗೆ ಹಿನ್ನೆಡೆ ಆಗಿದ್ದು, ಗ್ರಾಮಸ್ಥರನ್ನು ಪುನಶ್ಚೇತನಗೊಳಿಸುವಲ್ಲಿ ಮತ್ತು ಅವರ ಬೆಂಬಲ ಗಳಿಸುವಲ್ಲಿ ನಕ್ಸಲರು ವಿಫಲರಾಗಿದ್ದಾರೆ.
ಕಳೆದ ವಾರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು "ನೋಟು ನಿಷೇಧ ಪರಿಣಾಮ ನಕ್ಸಲರ ಅಸ್ತಿತ್ವಕ್ಕೆ ಮಾರಕವಾಗಬಹುದು"ಎಂದು ಹೇಳಿದ್ದರು.
ನಕ್ಸಲ್ ಸಿದ್ದಾಂತಗಳ ಮೌಲ್ಯ ಕುಸಿಯುತ್ತಿರುವುದೇ ನಕ್ಸಲರ ಶರಣಾಗತಿಗೆ ಪ್ರಮುಖ ಕಾರಣವಾಗಿದ್ದು, ಅದೇ ರೀತಿ ನೋಟು ನಿಷೇಧದ ಪರಿಣಾಮವೂ ಸಹ ಅವರ ಮೇಲೆ ಗಾಢವಾಗಿ ಬೀರಿದೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗಷ್ಟೇ ಕೊಂಡಾಗನ್ ಜಿಲ್ಲೆಯ ಗ್ರಾಮವೊಂದರಲ್ಲಿ ಪೊಲೀಸರು ಒಟ್ಟು 42ಲಕ್ಷ ಮೌಲ್ಯದ ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದರು.
ಹಳ್ಳಿಗೆ ಬಂದಿದ್ದ ನಕ್ಸಲರು ನೋಟುಗಳನ್ನು ವಿನಿಮಯ ಮಾಡಿಕೊಡಿ ಎಂದು ಗ್ರಾಮಸ್ಥರಲ್ಲಿ ಕೇಳಿಕೊಂಡಿದ್ದರು, ಗ್ರಾಮಸ್ಥರು ಅದಕ್ಕೆ ಒಪ್ಪದಿದ್ದಾಗ ಹಣದ ಚೀಲವನ್ನು ಅಲ್ಲೇ ಬಿಟ್ಟು ಹೋಗಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನೋಟು ನಿಷೇಧದ ಪರಿಣಾಮದಿಂದ ನಕ್ಸಲರು ಒಟ್ಟು ರೂ. ಸಾವಿರ ಕೋಟಿ ಮೊತ್ತದಷ್ಟು ಹಣವನ್ನು ಕಳೆದುಕೊಂಡಿದ್ದು, ಇದರಿಂದಲೇ ನಕ್ಸಲ್ ಚಟುವಟಿಕೆಗಳಿಗೆ ಭಾರಿ ಹಿನ್ನೆಡೆ ಆಗಿದೆ.
ಕೇವಲ ಬಾಸ್ಟರ್ ಪ್ರದೇಶವೊಂದರಲ್ಲೇ ನಕ್ಸಲರು ಒಟ್ಟು 400 ರಿಂದ 600 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ.