ಸೋಂಕಿತನ ಜೊತೆ ಸಂಪರ್ಕದಲ್ಲಿದ್ದೆವು ಎಂದು ಸುಳ್ಳು ಹೇಳಿದ 3 ಪೊಲೀಸರು ಅಮಾನತು
ದೆಹಲಿ, ಮೇ 1: ಕೊರೊನಾ ವೈರಸ್ ಸೋಂಕಿನ ಅಧಿಕಾರಿ ಜೊತೆ ಸಂಪರ್ಕದಲ್ಲಿ ಇದ್ದೆವು ಎಂದು ಸುಳ್ಳು ಹೇಳಿದ ಮೆಟ್ರೋ ಘಟಕದ ಮೂವರು ಪೊಲೀಸ್ ಪೇದೆಗಳನ್ನು ಅಶಿಸ್ತಿನ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.
ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗೆ ಕೊರೊನಾ ಸೋಂಕು ತಗುಲಿತ್ತು. ಸೋಂಕಿತ ಎಸ್ ಐ ಜೊತೆ ನಾವು ಸಂಪರ್ಕದಲ್ಲಿ ಇದ್ದೆವು, ನಮ್ಮನ್ನು ಹೋಮ್ ಕ್ವಾರೆಂಟೈನ್ ಗೆ ಒಳಗಾಗಲು ಅವಕಾಶ ಕೊಡಿ ಎಂದು ಮೂವರು ಪೇದೆಗಳು ಹಿರಿಯ ಅಧಿಕಾರಿ ಬಳಿ ತಿಳಿಸಿದ್ದರು.
ಪೊಲೀಸರ ಮನವಿ ನಂತರ ಆ ಬಗ್ಗೆ ಪರಿಶೀಲನೆ ನಡೆಸಿದಾಗ ಅವರು ಹೇಳುತ್ತಿರುವುದು ಸುಳ್ಳು ಎಂದು ತಿಳಿದು ಬಂದಿದೆ. ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಸುಳ್ಳು ಹೇಳಿದ್ದಾರೆ. ಹಾಗಾಗಿ, ಆ ಮೂವರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಮೆಟ್ರೋ) ಹರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಸುಳ್ಳು ಹೇಳುವ ಅಗತ್ಯವಿಲ್ಲ. ಸುಳ್ಳು ಹೇಳುವ ಬದಲು, ಪೇದೆಗಳು ರಜೆಗಾಗಿ ಅರ್ಜಿ ಸಲ್ಲಿಸಬಹುದು ಅಥವಾ ವೈದ್ಯಕೀಯ ವಿಶ್ರಾಂತಿಗೆ ಒಳಗಾಗಬಹುದು ಎಂದು ಉನ್ನತ ಅಧಿಕಾರಿ ಸೂಚಿಸಿದ್ದಾರೆ.
ಅಂದ್ಹಾಗೆ, ಏಪ್ರಿಲ್ 21 ರಂದು ಸಬ್ ಇನ್ಸ್ ಪೆಕ್ಟರ್ಗೆ ಜ್ವರ ಕಾಣಿಸಿಕೊಂಡಿತ್ತು. ವೈದ್ಯಕೀಯ ಪರೀಕ್ಷೆ ಮಾಡಿದ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಏಪ್ರಿಲ್ 28ರಂದು ಅವರ ಕೊರೊನಾ ವರದಿ ಬಂದಿದ್ದು, ಪಾಸಿಟಿವ್ ಆಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎಸ್ ಐ ಜೊತೆ ಕರ್ತವ್ಯ ನಿರ್ವಹಿಸಿದ ಇತರೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷಿಸಲಾಗಿದೆ ಮತ್ತು ಅವರ ವರದಿಗಳು ಇನ್ನು ಬಂದಿಲ್ಲ. ಪ್ರಸ್ತುತ ಅವರನ್ನು ಮನೆಯಲ್ಲಿ ಕ್ವಾರೆಂಟೈನ್ ಆಗಲು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications