2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬಕ್ಕೆ ಸಿಕ್ಕಿದ್ದೆಷ್ಟು?
ನವದೆಹಲಿ, ಫೆ.4 : ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಬಹುಕೋಟಿ ರೂ 2ಜಿ ಹಗರಣದಲ್ಲಿ, ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಕುಟುಂಬಕ್ಕೆ 200 ಕೋಟಿ ರೂ ಹಣ ಸಂದಾಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಪ್ರಶಾಂತ್ ಭೂಷಣ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2ಜಿ ಹಗರಣದಲ್ಲಿ ಭಾಗಿಯಾದ ಕರುಣಾನಿಧಿ ಅವರ ಕುಟುಂಬಸ್ಥರನ್ನು ರಕ್ಷಿಸಲು ವ್ಯವಸ್ಥಿತ ಸಂಚು ನಡೆದಿದೆ ಎಂದು ಆರೋಪಿಸಿದರು. 2ಜಿ ಹಗರಣದ ಬಗ್ಗೆ ಕರುಣಾನಿಧಿ ಅವರಿಗೆ ಎಲ್ಲವೂ ತಿಳಿದಿದೆ. ಅವರ ಕುಟುಂಬಕ್ಕೆ ಹಗರಣದಿಂದ 200 ಕೋಟಿ ಹಣ ಸಂದಾಯವಾಗಿದೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.

2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬ ಸದಸ್ಯರು ಭಾಗಿಯಾಗಿರುವ ಬಗ್ಗೆ ತಮ್ಮ ಬಳಿ ಆಡಿಯೋ ಟೇಪ್ ಇದೆ. ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಆಡಿಯೋ ಟೇಪ್ ಅನ್ನು ಬಿಡುಗಡೆ ಮಾಡುವುದಾಗಿ ಪ್ರಶಾಂತ್ ಭೂಷಣ್ ಹೇಳಿದರು. ಹಗರಣದಲ್ಲಿ ತಮಿಳುನಾಡು ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಜಾಫರ್ ಅವರ ಕೈವಾಡವಿದೆ. ಈ ಇಬ್ಬರು ಅಧಿಕಾರಿಗಳು ಕರುಣಾನಿಧಿ ಕುಟುಂಬದ ಆಪ್ತರಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ದೂರಿದರು. [ಬಹುಮುಖ ಪ್ರತಿಭೆಯ ಕನ್ನಿಮೋಳಿ ವ್ಯಕ್ತಿಚಿತ್ರ]
ತಮ್ಮ ಬಳಿ 2ಜಿ ಹಗರಣಕ್ಕೆ ಸಂಬಂಧಿಸಿದಂತೆ 4 ಆಡಿಯೋ ಟೇಪ್ ಗಳಿವೆ. ಅವುಗಳಲ್ಲಿ ಜಾಫರ್ ಮತ್ತು ಕಲೈನರ್ ಟಿವಿ ಮ್ಯಾನೇಜರ್ ಶರತ್ ರೆಡ್ಡಿ, ಜಾಫರ್ ಮತ್ತು ಕರುಣಾನಿಧಿ ಆಪ್ತ ಸಹಾಯಕ ಷಣ್ಮುಖನಾಥನ್, ಕನ್ನಿಮೋಳಿ ಮತ್ತು ಕರುಣಾನಿಧಿ ಅವರ ನಡುವೆ ನಡೆದ ಸಂಭಾಷಣೆಗಳು ದಾಖಲಾಗಿವೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.
ಆಡಿಯೋ ಟೇಪ್ ನಲ್ಲಿ ಹಲವು ಮಾತುಗಳು ತಮಿಳು ಭಾಷೆಯಲ್ಲಿದ್ದು, ಅವು 2010ರಿಂದ 2012ರ ವರ್ಷದ ನಡುವೆ ನಡೆದ ಸಂಭಾಷಣೆಗಳಾಗಿವೆ. ಜಾಫರ್ ಮತ್ತು ಶರತ್ ರೆಡ್ಡಿ ನಡುವಿನ ಸಂಭಾಷಣೆ ಇಂಗ್ಲೀಷ್ ಭಾಷೆಯದೆ. ಹಗರಣಕ್ಕೆ ಸಂಬಂಧಿಸಿದಂತೆ ಎ.ರಾಜಾ ಬಂಧನವಾದ ಬಳಿಕ ಈ ಸಂಭಾಷಣೆಗಳು ನಡೆದಿವೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.












Click it and Unblock the Notifications