ಈ ಬಾರಿ 25 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ
ನವದೆಹಲಿ, ಜನವರಿ, 25: ಗಣರಾಜ್ಯೋತ್ಸವ ಪ್ರಯುಕ್ತ ನೀಡಲಾಗುವ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ 2015ಕ್ಕೆ ಈ ಬಾರಿ 25 ಮಕ್ಕಳು ಭಾಜನರಾಗಿದ್ದು, ಮೂರು ಬಾಲಕಿಯರು, ಹಾಗೂ 22 ಬಾಲಕರು ಸೇರಿದ್ದಾರೆ. ಇಬ್ಬರಿಗೆ ಮರಣೋತ್ತರ ಪ್ರಶಸ್ತಿ ಲಭಿಸಿದೆ.
ನವದೆಹಲಿಯಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 'ತತ್ ಕ್ಷಣದ ನಿರ್ಧಾರ ವ್ಯಕ್ತಿಯ ಬದುಕಿಗೆ ದಾರಿ ದೀಪವಾಗಬಲ್ಲದು ಎಂಬುದಕ್ಕೆ ಈ ಮಕ್ಕಳು ತೋರಿದ ಸಾಹಸವೇ ಸಾಕ್ಷಿ' ಎಂದು ಮಕ್ಕಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಲೈಫ್ ಪ್ರೊಗ್ರೆಶನ್ ಆಫ್ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ ವೇರ್ ನ್ಯಾಷನಲ್ ಬ್ರೇವರಿ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. 'ಮಕ್ಕಳ ಸಾಹಸಮಯ ಪ್ರವೃತ್ತಿಗಳಿಗೆ ಹಾಗೂ ಮತ್ತಷ್ಟು ಸಾಹಸಮಾಡಲು ಈ ಪುಸ್ತಕ ಪ್ರೇರಣೆಯಾಗಲಿದೆ' ಎಂದು ತಿಳಿಸಿದರು.[ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]
ಮಹಾರಾಷ್ಟ್ರ, ಉತ್ತರಖಂಡ, ಗುಜರಾತ್, ತೆಲಂಗಾಣ, ಮೇಘಾಲಯ, ಮಣಿಪುರ, ಛತ್ತೀಸ್ ಗಡ, ಹರ್ಯಾಣ, ಕೇರಳ ಹೀಗೆ ನಾನಾ ರಾಜ್ಯದ ಒಟ್ಟು 25 ಮಕ್ಕಳು ಈ ಪ್ರಶಸ್ತಿ ಪಡೆದು ಸಂತಸಪಟ್ಟರು. 2015ರ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಸಂಭ್ರಮವನ್ನು ಪಿಟಿಐ ಚಿತ್ರಗಳಲ್ಲಿ ನೋಡಿಕೊಂಡು ಬರೋಣ.
ಶಿವಂಪೇಟ್ ರುಚಿತ
ಈಕೆ ತೆಲಂಗಾಣ ರಾಜ್ಯದ ಬಾಲಕಿ. 8 ವರ್ಷದವಳಾದ ಈಕೆ ತಾನಿದ್ದ ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದಾಗ ತಾನೂ ಗಾಯಗೊಂಡಿದ್ದರೂ ಇತರ ಇಬ್ಬರು ಮಕ್ಕಳ ಜೀವವನ್ನು ಉಳಿಸಿದ್ದಳು. ಪ್ರಶಸ್ತಿ ಪುರಸ್ಕೃತರಲ್ಲಿ ಅತೀ ಕಿರಿಯಳು
ರಾಮ್ ದಿನ್ನಂತರ
ಮಿಜೋರಾಂನವನಾದ ಈತ ವಿದ್ಯುತ್ ಅಪಘಾತದಲ್ಲಿ ಸಿಲುಕಿದ್ದ ಇಬ್ಬರು ಹುಡುಗರನ್ನು ರಕ್ಷಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಇಬ್ಬರು ಪ್ರಾಣ ಉಳಿಸಿದ್ದನು.
ಅರೋಮಲ್ ಎಸ್ ಎಂ
ಕೇರಳದ ಅರೋಮಲ್ (12) ಎಂಬ ಬಾಲಕ ನೀರಿನಲ್ಲಿ ಬಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದ ಕಾರಣ ಈ ಪುರಸ್ಕಾರ ಲಭಿಸಿದೆ.
ಅರ್ಜುನ್ ಸಿಂಗ್
ಉತ್ತರಖಂಡದವನಾದ ಅರ್ಜುನ್ ಸಿಂಗ್ (16) ಈತನಿಗೆ ಈ ಬಾರಿಯ ಶೌರ್ಯ ಪ್ರಶಸ್ತಿ ಸಿಕ್ಕಿದೆ. ಈತ ತಾಯಿ ಮೇಲೆ ಹುಲಿಯೊಂದು ದಾಳಿ ಮಾಡಿದಾಗ ವೀರಾವೇಶದಿಂದ ಹೋರಾಡಿ ತನ್ನ ತಾಯಿಯನ್ನು ರಕ್ಷಿಸಿದ್ದನು.
ಪ್ರಶಸ್ತಿ ವಿಜೇತರ ಪಟ್ಟಿ
ಕಾಶೀಶ್ ಧನಾನಿ ( ಗುಜರಾತ್), ಮೌರೈಸ್ ಯೆಂಕುಮ್, ಅಂಜೇಲಿಕ ಟ್ಯಾಂಗ್ ಸನ್ (ಮೇಘಾಲಯ), ಸಾಯಿ ಕೃಷ್ಣ ಅಖಿಲ್, ಕಿಲಂಬಿ (ತೆಲಮಗಾಣ೦), ಅಭಿನಾಷ್ ಮಿಶ್ರಾ (ಒರಿಸ್ಸಾ), ಭೀಮ್ ಸೇನ್ ಶಿವನ್ಸ್ ಸಿಂಗ್ (ಉತ್ತರ ಪ್ರದೇಶ)
ನರೇಂದ್ರ ಮೋದಿಯೊಂದಿಗೆ ಗ್ರೂಫ್ ಫೋಟೋ
ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೊಂದಿಗೆ 25 ಮಕ್ಕಳು ಗ್ರೂಪ್ ಫೋಟೋ ತೆಗೆಸಿಕೊಂಡರು.
ಶೌರ್ಯ ಪ್ರಶಸ್ತಿ ಹಿನ್ನೆಲೆ
1957ರಲ್ಲಿ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಟೆಂಟ್ ಗೆ ವಿದ್ಯುತ್ ಅವಘಡದಿಂದ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಅಲ್ಲಿದ್ದ ಬಾಲಕನೊಬ್ಬ ಸಮಯಪ್ರಜ್ಞೆ ಮೆರೆದು ಚಾಕು ತೆಗೆದುಕೊಂಡು ಬಂದು ಟೆಂಟ್ ಕತ್ತರಿಸಿ ಸುಮಾರು ನೂರಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದನು. ಆಮಗುವಿನ ಸಾಹಸ ನೋಡಿದ ಜವಹರಲಾಲ್ ನೆಹರು ಪ್ರತಿವರ್ಷ ಶೌರ್ಯ ಪ್ರಶಸ್ತಿ ನೀಡುವಂತೆ ಘೋಷಿಸಿದರು. ಇದುವರೆಗೂ 920 ಮಕ್ಕಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮಕ್ಕಳಿಗೆ ಶಾಲಾ ಹಂತ ಮುಗಿಯುವವರೆಗೂ ಸರ್ಕಾರದಿಂದ ಹಣಕಾಸಿನ ನೆರವು ದೊರೆಯುತ್ತದೆ.